ಕಲೆಗೆ ಮತ್ತು ಕಲಾವಿದರಿಗೆ ಸಮಾಜ ಆಸರೆಯಾದಾಗ ಮಾತ್ರ ಕಲಾವಿದರ ಬದುಕು ಹಸನಾಗುತ್ತದೆ.
ಕನ್ನಡಪ್ರಭ ವಾರ್ತೆ ಹೊನ್ನಾವರ
ಜನರಿಗೆ ಸಂತೋಷ ಕೊಡುವುದೇ ನಿಜವಾದ ಈಶ್ವರ ಪೂಜೆ. ಹತ್ತಾರು ವರ್ಷಗಳ ಕಠಿಣ ಪರಿಶ್ರಮದಿಂದ ಕಲಾವಿದರಾಗಿ ರೂಪುಗೊಂಡು, ತನ್ನ ಕಲೆಯ ಮೂಲಕ ಜನಸಮುದಾಯಕ್ಕೆ ಆನಂದ ಕೊಡುವ ಕಲಾವಿದರ ಬದುಕು ಇಂದು ಕಷ್ಟದಲ್ಲಿದೆ. ಕಲೆಗೆ ಮತ್ತು ಕಲಾವಿದರಿಗೆ ಸಮಾಜ ಆಸರೆಯಾದಾಗ ಮಾತ್ರ ಕಲಾವಿದರ ಬದುಕು ಹಸನಾಗುತ್ತದೆ ಎಂದು ಉಪನ್ಯಾಸಕ ಪ್ರಶಾಂತ ಮೂಡಲಮನೆ ಹೇಳಿದರು.
ನೃತ್ಯ ಸಂವೇದನಾ ಟ್ರಸ್ಟ್ ನ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದಿಂದ ಗುಣವಂತೆಯಲ್ಲಿ ಆಯೋಜಿಸಿದ ನೃತ್ಯಪಲ್ಲವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಿನ ತುಂಬಾ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಿ 60 ಜನ ವಿದುಷಿಯರನ್ನು ಸಿದ್ಧಪಡಿಸಿದ ಡಾ. ಸಹನಾ ಭಟ್ಟರ ಸಾಧನೆ ದೊಡ್ಡದು. ಅವರ ಶಿಷ್ಯೆ ವಿದುಷಿ ಪೂಜಾ ಹೆಗಡೆ ತನ್ನ ಗುರುವಿನ ಹಾದಿಯಲ್ಲೇ ಮುನ್ನಡೆಯುತ್ತಿದ್ದಾರೆ. ತಾಲೂಕಿನ ನಾಲ್ಕಾರು ಕಡೆ ಭರತನಾಟ್ಯದ ಶಾಲೆ ತೆರೆದಿದ್ದಾರೆ. ಇಂಥವರ ಮೂಲಕ ನಮ್ಮ ಶ್ರೀಮಂತ ಕಲೆ ಸಂಸ್ಕೃತಿ ಪರಂಪರೆ ಉಳಿಯಲಿ ಎಂದು ಹೇಳಿದರು.
ಅತಿಥಿಗಳಾದ ವಿದ್ವಾನ್ ಶಿವಾನಂದ ಭಟ್ಟ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ವಿಷಯದ ಜೊತೆಗೆ ಕಲೆಯನ್ನು ಕಲಿತಾಗ ಅವರ ಸೃಜನಶೀಲತೆ ಅರಳುತ್ತದೆ ಎಂದರು.
ನೃತ್ಯ ಸಂವೇದನಾ ಟ್ರಸ್ಟ್ ನ ಪರವಾಗಿ ಡಾ. ಸಹನಾ ಭಟ್ಟ ಮತ್ತು ಸಾಹಿತಿ ಪ್ರದೀಪ್ ಭಟ್ಟ ಅವರನ್ನು ಸನ್ಮಾನಿಸಲಾಯಿತು.
ಗುರುವಂದನೆ ಸ್ವೀಕರಿಸಿದ ಡಾ. ಸಹನಾ ಭಟ್ಟ ಮಾತನಾಡಿದರು. ನೃತ್ಯಗುರು ಪೂಜಾ ಹೆಗಡೆ, ಪ್ರಿಯಾ ಪ್ರಭು, ಸಂಘಟಕ ಜೆ.ವಿ. ಪ್ರಸನ್ನ ಉಪಸ್ಥಿತರಿದ್ದರು. ಉಪನ್ಯಾಸಕಿ ಬಿಂದು ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಂತರ ನೃತ್ಯ ಸಂವೇದನಾ ಟ್ರಸ್ಟ್ ನ ಕಲಿಕಾ ವಿದ್ಯಾರ್ಥಿಗಳಿಂದ ಆಕರ್ಷಕ ಭರತನಾಟ್ಯ ನಡೆಯಿತು. ಹಾಡುಗಾರಿಕೆಯಲ್ಲಿ ವಿದುಷಿ ನವಮಿ ಉಪಾಧ್ಯಾಯ, ಮೃದಂಗದಲ್ಲಿ ವಿದ್ವಾನ್ ಪದ್ಮರಾಜ ಭಟ್ಟ, ಕೊಳಲಿನಲ್ಲಿ ರವೀಂದ್ರ ಭಟ್ಟ ಅಣ್ಣೆಮನೆ, ನಟ್ಟುವಾಂಗದಲ್ಲಿ ಪೂಜಾ ಹೆಗಡೆ ಸಹಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.