ಬ್ಯಾಡಗಿ: ಯಾವುದೇ ಸಮಾಜವಾಗಲಿ ಸಂಘಟನೆ ಅತ್ಯವಶ್ಯ. ಸಂಘಟನೆಯಿಂದ ಮಾತ್ರ ಶಕ್ತಿಯ ಜತೆಗೆ ಸಮಾಜ ಉಳಿಯಲು ಸಾಧ್ಯ. ಆದ್ದರಿಂದ ಸಂಘಟನೆಯ ಮೂಲಕ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವನ್ನು ನಾವೆಲ್ಲರೂ ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಚೆನ್ನಮ್ಮನ ಬದುಕು ಮಾದರಿಯಾಗಲಿ: ಶಹರ ಘಟಕ ಅಧ್ಯಕ್ಷ ಬಸವರಾಜ ಕಡೆಕೊಪ್ಪ ಮಾತನಾಡಿ, ಬ್ರಿಟಿಷರ ಸೈನ್ಯವನ್ನು ಎದುರಿಸಲು ತೋರಿದ ಧೈರ್ಯ ಮತ್ತು ಸಾಹಸ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಿದ ಮೊಟ್ಟಮೊದಲ ರಾಣಿ ಕಿತ್ತೂರು ಚೆನ್ನಮ್ಮ ಅವರ ಸ್ವಾಭಿಮಾನದ ಬದುಕು ನಮ್ಮೆಲ್ಲರಿಗೂ ಮಾದರಿಯಾಗಲಿ ಎಂದರು.
ರಾಜ್ಯ ಘಟಕದ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಕಳೆದ ಹಲವು ವರ್ಷಗಳಿಂದ ೨ಏ ಮೀಸಲಾತಿಗಾಗಿ ಸಮಾಜದ ಶ್ರೀಗಳು ವಿರಮಿಸದೇ ನಿರಂತರವಾಗಿ ಹೋರಾಟ ಮಾಡುತ್ತ ಸಮಾಜ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಆದರೆ ಯಾವುದೇ ಸರ್ಕಾರವಿದ್ದರೂ ಮೀಸಲಾತಿ ನೀಡಲು ಮೀನಮೇಷ ಎಣಿಸುತ್ತಿದೆ. ಕೂಡಲೇ ಮೀಸಲಾತಿ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದರು.ಇದಕ್ಕೂ ಮುನ್ನ ಪಟ್ಟಣದ ದಾನಮ್ಮದೇವಿ ದೇವಸ್ಥಾನದಿಂದ ವೀರರಾಣಿ ಕಿತ್ತೂರ ಚೆನ್ನಮ್ಮನ ಭಾವಚಿತ್ರಕ್ಕೆ ಪುಷ್ಟನಮನ ಅರ್ಪಿಸಿ, ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.