ರೋಣ: ಇತ್ತೀಚಿನ ದಿನಮಾನಗಳಲ್ಲಿ ಎಲ್ಲ ರಂಗದಲ್ಲಿಯೂ ಸ್ಪರ್ಧೆ ಕಂಡುಬರುತ್ತಿದ್ದು, ಛಾಯಾಗ್ರಹಣ ಉದ್ಯಮ ಅದರಿಂದ ಹೊರತಾಗಿಲ್ಲ. ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡು ಛಾಯಾಗ್ರಹಣ ಉದ್ಯಮ ಬೆಳೆಯಬೇಕಿದೆ ಎಂದು ರೋಣ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ ಹೇಳಿದರು.ಬುಧವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ತಾಲೂಕು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ವತಿಯಿಂದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ, ಛಾಯಾ ಬಂಧುರತ್ನ ಪ್ರಶಸ್ತಿ, ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ಮು ಕ್ಯಾಮೆರಾ ಕ್ಲಿಕ್ ಮಾಡುವ ಉದ್ಘಾಟಿಸಿ ಮಾತನಾಡಿದರು.ಬೆಳೆಯುತ್ತಿರುವ ಕಾಲಘಟ್ಟದಲ್ಲಿ ಕ್ಯಾಮೆರಾಗಳ ಜಾಗವನ್ನು ಮೊಬೈಲ್ಗಳು ಆವರಿಸುತ್ತಿದ್ದು, ಎಐ ತಂತ್ರಜ್ಞಾನ ಕೂಡಾ ಛಾಯಾಗ್ರಹಣ ಉದ್ಯಮಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಜನರು ಸ್ಟುಡಿಯೋಗಳಿಗೆ ಹೋಗಿ ಫೋಟೋ ತೆಗೆಸುವ ಪ್ರವೃತ್ತಿ ಕಡಿಮೆಯಾಗುತ್ತಿದ್ದು, ಇಂತಹ ಕಠಿಣ ಸಂದರ್ಭದಲ್ಲಿ ಛಾಯಾಗ್ರಾಹಕರು ಸಂಘಟಿತರಾಗುವುದು ಬಹುಮುಖ್ಯವಾಗಿದೆ ಎಂದರು. ಛಾಯಾ ಬಂಧು ರತ್ನ- 2026 ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ ಮಲ್ಲಯ್ಯ ಗುರುಬಸಪ್ಪನಮಠ ಅವರು, ಸಾರ್ವಜನಿಕರ ಬದುಕಿನ ಸುಂದರ ಕ್ಷಣಗಳನ್ನು ಸೆರೆ ಹಿಡಿದು ಮುಂದಿನ ನೂರಾರು ವರ್ಷಗಳವರೆಗೆ ಆ ನೆನಪನ್ನು ಹಸಿರಾಗಿಡುವ ಛಾಯಾಗ್ರಾಹಕರ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಛಾಯಾಗ್ರಾಹಕರ ಸಮಾಜಮುಖಿ ಕಾರ್ಯ ಶ್ಲಾಘನಾರ್ಹವಾಗಿದೆ ಎಂದರು.
ಇದೆ ವೇಳೆ ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕ ಎಸ್.ಎಸ್. ಗೌಡರ, ಕೆಪಿಎ ರಾಜ್ಯ ನಿರ್ದೇಶಕ ಮಂಜುನಾಥ ಲಕ್ಷಟ್ಟಿ, ಎಂ.ಎಸ್. ಸಂಕನಗೌಡ್ರ ಮಾತನಾಡಿದರು. ಪ್ರಾಸ್ತಾವಿಕವಾಗಿ ಸಂಘದ ಉಪಾಧ್ಯಕ್ಷ ನಿಂಗಪ್ಪ ಕಾಸಪ್ಪನವರ ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಕೊತಬಾಳ ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಗಂಗಾಧರ ಸ್ವಾಮೀಜಿ ವಹಿಸಿದ್ದರು. ಛಾಯಾ ಸಾಧಕರನ್ನು ಹಾಗೂ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪವನ ಮೇರವಾಡೆ, ತಾಲೂಕು ಗೌರವ ಅಧ್ಯಕ್ಷ ಬಸವರಾಜ ಪಲ್ಲೇದ, ಭಗೀರಥರಾಜ ಮಲ್ಜಿ, ಪಂಕಜ್ ಬನಸಾಲಿ, ಶರಣಪ್ಪ ಚಿನ್ನು ಲ್ಯಾಬ್, ಮಹೇಶ ಬಡಿಗೇರ, ಸುಭಾಶ ಬಡಿಗೇರ, ಪ್ರಭು ಪಾಟೀಲ, ಜಿ.ಎಂ. ಮಂಗಳೂರ, ವಿಜಯಕುಮಾರ ಮಾಯಾಚಾರಿ, ವೀರೇಶ ಹಡಗಲಿ, ರಾಜು ಬುರಡಿ, ಶರಣಪ್ಪ ಹೂಗಾರ, ಶ್ರೀಶೈಲ ಚನ್ನಪ್ಪಗೌಡ್ರ ಮುಂತಾದವರು ಉಪಸ್ಥಿತರಿದ್ದರು. ನಿಂಗಪ್ಪ ಕಾಸಪ್ಪನವರ ನಿರೂಪಿಸಿದರು. ಲಾಲು ಬೆನಹಾಳ ಸ್ವಾಗತಿಸಿದರು. ಶ್ರೀಶೈಲ ಚನ್ನಪ್ಪಗೌಡ್ರ ವಂದಿಸಿದರು.