ಕೃಷ್ಣಪ್ಪರ ಹೋರಾಟದ ಹಣತೆ ಆರದಿರಲಿ

KannadaprabhaNewsNetwork |  
Published : Jun 10, 2025, 04:40 AM ISTUpdated : Jun 10, 2025, 04:41 AM IST
ಪೋಟೋ: 09ಎಸ್‌ಎಂಜಿಕೆಪಿ01ಶಿವಮೊಗ್ಗದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ದಲಿತ ಸಂಘರ್ಷ ರಾಜ್ಯ ಸಮಿತಿ (ಬಿ.ಕೃಷ್ಣಪ್ಪ ವಾದ) ಮತ್ತು ದಲಿತ ನೌಕರರ ಒಕ್ಕೂಟ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪನವರ 87ನೇ ಜನ್ಮದಿನ ಮತ್ತು ರಾಜ್ಯಮಟ್ಟದ ದ.ಸಂ.ಸ. ಪದಾಧಿಕಾರಿಗಳ ಸಮಾವೇಶವನ್ನು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಉದ್ಘಾಟಿಸಿದರು.  | Kannada Prabha

ಸಾರಾಂಶ

ಶಿವಮೊಗ್ಗ: ಪ್ರೊ.ಬಿ.ಕೃಷ್ಣಪ್ಪನವರು ಹಚ್ಚಿದ ಹೋರಾಟದ ಹಣತೆಯನ್ನು ಆರದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ದಲಿತ ಸಂಘರ್ಷ ಸಮಿತಿ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹೇಳಿದರು.

ಶಿವಮೊಗ್ಗ: ಪ್ರೊ.ಬಿ.ಕೃಷ್ಣಪ್ಪನವರು ಹಚ್ಚಿದ ಹೋರಾಟದ ಹಣತೆಯನ್ನು ಆರದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ದಲಿತ ಸಂಘರ್ಷ ಸಮಿತಿ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹೇಳಿದರು.

ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ದಲಿತ ಸಂಘರ್ಷ ರಾಜ್ಯ ಸಮಿತಿ (ಬಿ.ಕೃಷ್ಣಪ್ಪ ವಾದ) ಮತ್ತು ದಲಿತ ನೌಕರರ ಒಕ್ಕೂಟ ಜಂಟಿಯಾಗಿ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪನವರ 87ನೇ ಜನ್ಮದಿನ ಮತ್ತು ರಾಜ್ಯಮಟ್ಟದ ದಸಂಸ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪ್ರೊ.ಕೃಷ್ಣಪ್ಪ ಅಂಬೇಡ್ಕರ್ ಆಲೋಚನೆಗಳನ್ನೇ ಮುಂದಿಟ್ಟುಕೊಂಡು ಶಿಕ್ಷಣ ಸಂಘಟನೆ ಹೋರಾಟದ ದಸಂಸ ಅನ್ನು ಕಟ್ಟಿದರು. ಆ ಮೂಲಕ ಸಮ ಸಮಾಜದ ಹೋರಾಟಗಳನ್ನು ನಡೆಸುತ್ತ ಬಂದರು. ಅವರು ನಾನು ಹೋರಾಟದ ಹಣತೆಯನ್ನು ಹಚ್ಚಿದ್ದೇನೆ. ಅದು ಆರದಂತೆ ನೋಡಿಕೊಳ್ಳಿ ಎಂದಿದ್ದರು. ಹಾಗಾಗಿ ದಲಿತ ಸಂಘರ್ಷ ಸಮಿತಿಗಳು ತಮ್ಮ ಹೋರಾಟಗಳನ್ನು ಮುಂದುವರಿಸಿ ಗಟ್ಟಿ ನಿಲುವುಗಳನ್ನು ತೆಗೆದುಕೊಳ್ಳಬೇಕು ಎಂದರು.

ಡಾ. ಅಂಬೇಡ್ಕರ್‌ ಈ ದೇಶದ ದಲಿತರ ಬೆಳಕಾಗಿದ್ದಾರೆ. ಅವರು ಕೊಟ್ಟ ಸಂವಿಧಾನ ಇಂದು ಎಲ್ಲಾ ಧರ್ಮಗಳಿಗೂ ಪವಿತ್ರ ಗ್ರಂಥವೇ ಆಗಿದೆ. ದಲಿತ ಸಂಘರ್ಷ ಸಮಿತಿಯ ಹೋರಾಟಗಾರರು ಅಂಬೇಡ್ಕರ್‌ರವರ ಚಿಂತನೆ ಮತ್ತು ವಿಚಾರಗಳನ್ನು ಇಟ್ಟುಕೊಂಡು ಸಂಘಟನೆ ಮತ್ತು ಶಿಕ್ಷಣದ ಮೂಲಕ ತಮ್ಮ ಹೋರಾಟಗಳನ್ನು ವಿಸ್ತರಿಸಬೇಕು ಎಂದರು.

ಕರ್ನಾಟಕ ದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಬಿ.ಎಲ್.ರಾಜು ಮಾತನಾಡಿ, ದಲಿತರು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರವೂ ಭೂಮಿಗಾಗಿಯೇ ಹೋರಾಟ ನಡೆಸುತ್ತ ಬಂದಿದ್ದಾರೆ. ಪ್ರೊ.ಬಿ.ಕೃಷ್ಣಪ್ಪ ಅವರು ಕೂಡ ದಲಿತರಿಗೆ ಭೂಮಿ ಬೇಕು ಎಂಬ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿದರು. ಆದರೆ, ಇಂದೂ ಕೂಡ ದಲಿತರು ಅದೇ ಪ್ರಶ್ನೆಯನ್ನು ಇಟ್ಟುಕೊಂಡು ಹೋರಾಟ ಮಾಡಬೇಕಾದ ಅನಿವಾರ್ಯತೆ ಇರುವುದು ಅತ್ಯಂತ ದುರದೃಷ್ಟಕರ ಎಂದರು.

1970ರಲ್ಲಿಯೇ ದಲಿತರಿಗೆ ಭೂಮಿ, ಅಧಿಕಾರ ಬೇಕು ಎಂದು ಹೋರಾಟ ಆರಂಭವಾದರೂ ಕೂಡ ಇಂದಿಗೂ ಭೂಮಿ ಸಿಕ್ಕಿಲ್ಲ. ಕೊನೆ ಪಕ್ಷದ ಬಗರ್ ಹುಕುಂ ಭೂಮಿಯೂ ಕೂಡ ಅವರಿಗೆ ದಕ್ಕಿಲ್ಲ. ಉಳುಮೆಗೂ ಭೂಮಿ ಇಲ್ಲ ಎಂದರು.

ದಸಂಸನ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಮಾತನಾಡಿ, ಶತಮಾನಗಳಿಂದಲೂ ಉಳ್ಳವರೇ ಬಡವರ ರಕ್ತವನ್ನು ಹೀರಿ ಭೂಮಿ, ಬಂಡವಾಳ, ಅಧಿಕಾರಗಳನ್ನು ಪಿತ್ರಾರ್ಜಿತ ಆಸ್ತಿಯಂತೆ ಶತಮಾನಗಳಿಂದಲೂ ಅನುಭವಿಸುತ್ತ ಬಂದಿದ್ದಾರೆ. ದಲಿತ ಸಮುದಾಯಗಳಲ್ಲಿ ಬಂಡಾಯದ ಕಿಚ್ಚನ್ನು ಹಚ್ಚಿಸಿ ಸಮ ಸಮಾಜದ ನಿರ್ಮಾಣ ನಮ್ಮ ಗುರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ವಿಶ್ರಾಂತ ಪ್ರಾಧ್ಯಾಪಕ ಡಾ. ಸಣ್ಣರಾಮ, ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್, ದಲಿತ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್, ದಸಂಸನ ಜಿಲ್ಲಾ ಸಂಚಾಲಕ ಎಂ. ಏಳುಕೋಟಿ, ಪ್ರಮುಖರಾದ ಎಸ್.ಪಿ.ಶೇಷಾದ್ರಿ, ಬಿ.ಎ. ಕಾಟ್ಕೆ, ಮುಂಡರಗಿ ನಾಗರಾಜ್, ಎಸ್.ಎನ್. ಬಳ್ಳಾರಿ, ಕಮಲಮ್ಮ, ಪಕ್ಕೀರಪ್ಪ ಮುಂಡಗೋಡು, ಡಾ.ಅವನಿಕ, ರಮೇಶ್, ದಸಸಂನ ಜಿಲ್ಲಾ ಮತ್ತು ರಾಜ್ಯ ಸಂಚಾಲಕರು, ಪದಾಧಿಕಾರಿಗಳು ಇದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಶಿವಬಸಪ್ಪ ಸ್ವಾಗತಿಸಿದರು. ಎಂ.ಏಳುಕೋಟಿ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌