ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿನಿ ಕೆ. ಶಿವಾನಿ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಎಂಬಿಬಿಎಸ್ ಪದವಿ ಪಡೆದು ವೈದ್ಯಕೀಯ ವೃತ್ತಿಯನ್ನು ಪ್ರಾರಂಭ ಮಾಡಿದ್ದು, ಅವರನ್ನು ಗೌರವಿಸುವುದು ನಮಗೆ ಹೆಮ್ಮೆಯ ವಿಷಯ ಎಂದು ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ ವೀರಭದ್ರಚಾರ್ ಹೇಳಿದರು.ಸಾಲಿಗ್ರಾಮ ತಾಲೂಕಿನ ಹಳಿಯೂರು ಬಡಾವಣೆಯ ದಿವಂಗತ ಸೇಂದಿ ನಿಂಗಪ್ಪನವರ ಮೊಮ್ಮಗಳಾದ ಇವರು ವೈದ್ಯಕೀಯ ವೃತ್ತಿಯನ್ನು ಮುಗಿಸಿ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಸಿದ್ದರಾಗಿದ್ದು, ಇವರು ವೈದ್ಯಕೀಯ. ಪದವಿ ಪಡೆದಿರುವವರಿಗೆ ಮಾದರಿಯಾಗಿದ್ದಾರೆ ಎಂದರು.
ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರವು ಬಹಳ ದುಬಾರಿಯಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಸಾಮಾನ್ಯ ವಿದ್ಯಾರ್ಥಿಗಳು ವೈದ್ಯಕೀಯ ಎಂಜಿನಿಯರಿಂಗ್ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್ ಗಳನ್ನು ಮಾಡಲು ಕಷ್ಟವಾಗುತ್ತಿದೆ ಎಂದರು.ನಮ್ಮೂರಿನ ಮಗಳು ಕೆ. ಶಿವಾನಿ ಬಾಲ್ಯದಿಂದಲೂ ಶಿಕ್ಷಣದ ಕಡೆಗೆ ಹೆಚ್ಚು ಗಮನಹರಿಸಿ ಬಹಳ ಬುದ್ಧಿವಂತಿಕೆಯಿಂದ ಓದಿದ ಪರಿಣಾಮ ಸಮಾಜದಲ್ಲಿ ಜವಬ್ದಾರಿಯುತವಾದ ಸ್ಥಾನ ಅಲಂಕರಿಸಿದ್ದು, ಅವಳ ಶ್ರಮ ಮತ್ತು ಕಷ್ಟಕ್ಕೆ ಇಂದು ಪ್ರತಿಫಲ ದೊರಕಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಠು ಯಶಸ್ಸು ಸಿಗಲಿ ಎಂದರಲ್ಲದೆ, ಸಾರ್ವಜನಿಕ ಸೇವೆಯನ್ನು ಮಾಡುವಾಗ ಪ್ರಾಮಾಣಿಕವಾಗಿ ಬಡವರು ಮತ್ತು ಹಣ ಇಲ್ಲದವರ ಪರವಾಗಿ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ. ಶಿವಾನಿ, ನನ್ನನ್ನು ಇಷ್ಟು ಪ್ರೀತಿ-ವಿಶ್ವಾಸದಿಂದ ಗೌರವಿಸಿರುವುದು ಇನ್ನಷ್ಟು ಹೆಚ್ಚು ಪ್ರೋತ್ಸಾಹ ಮತ್ತು ಶಕ್ತಿಯನ್ನು ನೀಡಿದಂತಾಗಿದ್ದು, ನಮ್ಮ ತಾತಾ ನಿಂಗಪ್ಪನವರು ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಸೇಂದಿ ಮಾರಾಟ ಮಾಡುತ್ತಿದ್ದರು, ಅವರ ಮಗನಾದ ನನ್ನ ತಂದೆ ಕೃಷ್ಣ ಮತ್ತು ತಾಯಿ ಗೀತಾಮ್ಮ ಹಾಗೂ ನನ್ನ ದೊಡ್ಡಪ್ಪ ದೊಡ್ಡಮ್ಮಂದಿರು ಸಹಾಯದಿಂದ ನಾನು ವೈದ್ಯಕೀಯ ಪದವಿಯನ್ನು ಪಡೆದಿದ್ದು, ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶದಲ್ಲಿಯೆ ಹೆಚ್ಚು ಸೇವೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.ಮಾಜಿ ಪುರಸಭೆ ಸದಸ್ಯ ಎನ್. ಶಿವಕುಮಾರ್, ವಿಜಯ ಶಿವಕುಮಾರ್, ಕೆ. ಕೃಷ್ಣ, ಶ್ರೀಮತಿ ಶಿವಕುಮಾರ್ ಇದ್ದರು.