ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಎಂಡಿಸಿಸಿ ಬ್ಯಾಂಕ್‌ ಚುನಾವಣೆ: ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ

KannadaprabhaNewsNetwork | Published : Jun 18, 2025 11:48 PM

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿದರು.

ಬ್ಯಾಂಕ್‌ ಗೆ ಜೂ.26 ರಂದು ಚುನಾವಣೆ ನಡೆಯಲಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಒಂದು ಕೈ ಮೇಲಾಗಿ ರಾಜಕೀಯ ಗರಿಗೆದರಿದೆ. ಸಹಕಾರ ಕ್ಷೇತ್ರದ ಚುನಾವಣೆಗೆ ಈ ಬಾರಿ ಅತಿ ಹೆಚ್ಚಿನ ಪೈಪೋಟಿ ಕಂಡುಬಂದಿದೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಮೂರು ಪ್ರಮುಖ ಪಕ್ಷಗಳ ಮುಖಂಡರ ನಡುವಿನ ಕದನಕ್ಕೆ ಅವಕಾಶವಾದಂತಿದೆ.

ನಗರದ ಜಿಲ್ಲಾಧಿಕಾರಿ ಕಚೇರಿಯ ಉಪ ವಿಭಾಗಾಧಿಕಾರಿಗಳ ಕೊಠಡಿಯಲ್ಲಿ ಬುಧವಾರ ಹಾಲಿ, ಮಾಜಿ ಶಾಸಕರು, ಮಾಜಿ ನಿರ್ದೇಶಕರು, ಹೊಸ ಅಭ್ಯರ್ಥಿಗಳು ಕೂಡ ಚುನಾವಣಾಧಿಕಾರಿ ಹಾಗೂ ಎಸಿ ಆಶಪ್ಪ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಎಚ್.ಡಿ.ಕೋಟೆ ತಾಲೂಕು ಕ್ಷೇತ್ರದಿಂದ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಆಧ್ಯಕ್ಷ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಅವರು ತಮ್ಮ ಬೆಂಬಲಿಗ ಪಡೆಯಾದ ಮೈಮುಲ್ ನಿರ್ದೇಶಕ ಕೆ. ಈರೇಗೌಡ, ಜಿಪಂ ಮಾಜಿ ಸದಸ್ಯ ರವಿ, ಜೀನಳ್ಳಿ ರಾಜು, ಕ್ಯಾತನಹಳ್ಳಿ ನಾಗರಾಜು, ಸತೀಶ್ ಗೌಡ, ಮಹದೇವಪ್ಪ, ಪಾಷ ಮೊದಲಾದವರ ಜೊತೆಗೂಡಿ ನಾಮಪತ್ರ ಸಲ್ಲಿಸಿದರು.

ಹುಣಸೂರು ತಾಲೂಕು ಕ್ಷೇತ್ರದಿಂದ ಅಫೆಕ್ಸ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ, ಶಾಸಕ ಜಿ.ಡಿ. ಹರೀಶ್ ಗೌಡ ಅವರು ಪುನರಾಯ್ಕೆ ಬಯಸಿ ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್ ಮತ್ತಿತರರೊಂದಿಗೆ ನಾಮಪತ್ರ ಸಲ್ಲಿಸಿದರು.

ನಂಜನಗೂಡು ತಾಲೂಕು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಬಿ.ಎನ್. ಸದಾನಂದ ಅವರು ಪಕ್ಷದ ಮುಖಂಡರ ಜತೆಗೆ ಆಗಮಿಸಿ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚಿನ್ನಂಬಳ್ಳಿ ಕೆ. ರಾಜು ನಾಮಪತ್ರ ಸಲ್ಲಿಸಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಂಜನಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ಕುರುಹಟ್ಟಿ ಮಹೇಶ್ ಮೊದಲಾದವರು ಜೊತೆಗಿದ್ದರು.

ಟಿ.ನರಸೀಪುರ ತಾಲೂಕು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಅವರು ವೈ.ಎನ್. ಶಂಕರೇಗೌಡ ಮತ್ತಿತರರೊಂದಿಗೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರೆ, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಟಿ.ಪಿ. ಬೋರೇಗೌಡ ಅವರು ಮುಖಂಡರಾದ ಸುಬ್ರಹಣ್ಯ, ಮಲ್ಲಣ್ಣ, ಚಂದ್ರಶೇಖರ್, ಫಣೀಶ್ ಕುಮಾರ್ ಅವರೊಂದಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಎಂಸಿಡಿಸಿಸಿ ಬ್ಯಾಂಕ್ ನ ಮತ್ತೋರ್ವ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದು, ಟಿ. ನರಸೀಪುರ ತಾಲೂಕಿನಿಂದ ಸಿ. ಬಸವೇಗೌಡ ಹಾಗೂ ಸುನೀತಾ ವೀರಪ್ಪಗೌಡ ಅವರು ನಾಮಪತ್ರ ಸಲ್ಲಿಸಿರುವ ಕಾರಣ ಇಬ್ಬರ ನಡುವೆ ಪೈಪೋಟಿ ಹೆಚ್ಚಾಗಿದ್ದು, ಪಕ್ಷದ ವರಿಷ್ಠರು ಯಾರಿಗೆ ಬೆಂಬಲ ನೀಡುವರೋ ಕಾದು ನೋಡಬೇಕು.

ಕೆ.ಆರ್.ನಗರ ತಾಲೂಕು ಕ್ಷೇತ್ರದಿಂದ ಜಿಪಂ ಮಾಜಿ ಸದಸ್ಯ ಅಮಿತ್ ವಿ. ದೇವರಹಟ್ಟಿ ಅವರು ಶಾಸಕ ಜಿ.ಡಿ. ಹರೀಶ್‌ ಗೌಡ, ಮೈಮುಲ್ ಮಾಜಿ ನಿರ್ದೇಶಕ ಎ.ಟಿ. ಸೋಮಶೇಖರ್ ಅವರೊಂದಿಗೆ ನಾಮಪತ್ರ ಸಲ್ಲಿಸಿದರೆ, ಶಾಸಕ ಡಿ. ರವಿಶಂಕರ್ ಅವರ ತಂದೆ ದೊಡ್ಡಸ್ವಾಮೇಗೌಡ ಅವರು ಡೆಲಿಗೇಟ್ಸ್‌ಗಳೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಅವರು ಪಟ್ಟಣ ಸಹಕಾರ ಬ್ಯಾಂಕ್‌ ಗಳು ಮತ್ತು ಗೃಹ ನಿರ್ಮಾಣ ಸಹಕಾರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರೆ, ಇವರಿಗೆ ಡಾ.ಎಂ.ಬಿ. ಮಂಜೇಗೌಡಮ, ಶ್ರೀನಿವಾಸ್, ಮಹದೇವಸ್ವಾಮಿ, ಪಂಚಾಕ್ಷರಿ, ವಿಜಯ್, ನಾಗರಾಜು, ಚಿಕ್ಕೇಗೌಡ ಅವರು ಸಾಥ್ ನೀಡಿದರು.

ಇತ್ತೀಚೆಗೆ ಒಂದು ನಾಮಪತ್ರ ಸಲ್ಲಿಸಿದ್ದ ಜಿ.ಎನ್. ಮಂಜುನಾಥ್ ಬುಧವಾರ ಕೂಡ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಿದರು.