ಮಾಧ್ಯಮಗಳು ಸಮಾಜದ ದಾರಿದೀಪ: ಬಸವರಾಜ್ ಹೊರಟ್ಟಿ

KannadaprabhaNewsNetwork | Published : Feb 5, 2024 1:45 AM

ಪತ್ರಿಕೆಗಳ ಓದುವ ಕೆಲಸ ಮಾಡಿಸಬೇಕು. ಹಾಗಿದ್ದಾಗ ಮಾತ್ರ ಪತ್ರಿಕೆಗೊಂದು ಗೌರವ ಸಿಗುತ್ತದೆ. ಪ್ರತಿ ಜಿಲ್ಲೆಯಲ್ಲೂ ಸುಮಾರು ಐವತ್ತು ಪತ್ರಿಕೆಗಳು ಹುಟ್ಟಿಕೊಳ್ಳುತ್ತಿವೆ. ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಾದೇಶಿಕವಾಗಿರುವ ಎಲ್ಲಾ ಸುದ್ದಿಗಳು ಸಿಗುವುದಿಲ್ಲ. ಆದ್ದರಿಂದ ರಾಜ್ಯ ಪತ್ರಿಕೆಗಳು ರಾಜ್ಯಮಟ್ಟದ ಸುದ್ದಿಗಳ ಜಿಲ್ಲೆಗಳು ಜಿಲ್ಲಾ ಮಟ್ಟದ ಸುದ್ದಿಗಳನ್ನು ನೀಡಿದರೆ ಮಾತ್ರ ಪತ್ರಿಕೆಗಳು ಅಭಿವೃದ್ಧಿ ಕಾಣುತ್ತದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಧ್ಯಮಗಳು ಸುಧಾರಣೆಯಾದಷ್ಟು ಸಮಾಜಕ್ಕೆ ದಾರಿದೀಪವಾಗಲಿದೆ. ಆಗ ಪತ್ರಿಕೆಗಳಲ್ಲಿ ನೈಜತೆ ಪ್ರಕಟವಾಗುತ್ತಿತ್ತು. ಈಗ ಎಲ್ಲಾ ಪತ್ರಕರ್ತರು ಮಾಲೀಕರ ಕೈಯಲ್ಲಿ ಸಿಲುಕಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಎಂದು ಅಭಿಪ್ರಾಯಪಟ್ಟರು.

ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ 38ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪದ ನುಡಿಗಳನ್ನಾಡಿ ನಾನು 9 ಗಂಟೆವರೆಗೆ ಎಲ್ಲಾ ಪತ್ರಿಕೆಗಳ ಓದುತ್ತೇನೆ. ಪತ್ರಿಕೆಗಳಲ್ಲಿರುವ ಸಂಪೂರ್ಣ ಮಾಹಿತಿ ವಾಟ್ಸಪ್ ಮತ್ತು ಜಾಲತಾಣದಲ್ಲಿರಲ್ಲ. ಈಗ ಎಲ್ಲ ಸಂಘಟನೆಗಳಿವೆ. ಶಾಸಕರ ವೇದಿಕೆಯಂತಲೂ ನಾವು ಮಾಡಿದ್ದೇವೆ. ಸಂಘಟನೆ ಮುಖಾಂತರ ನಾವು ಸಮಸ್ಯೆಗಳ ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಸಂಸದ ಡಾ. ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಪತ್ರಕರ್ತ ಸುದ್ದಿಯನ್ನು ವೈಭವೀಕರಿಸುತ್ತಾನೆ. ಇದರಿಂದ ಯಾವುದೇ ಉಪಯೋಗವಿಲ್ಲ. ವಾಹನಕ್ಕೆ ಫ್ಯಾನ್ಸಿ ನಂಬರ್ ಹಾಕುವ ಸುದ್ದಿ ಬಿತ್ತರಿಸಿದಂತೆ ಹೆಚ್ಚಿಗೆ ಬೆಳೆದ ರೈತರ ತೋರಿಸುವುದಿಲ್ಲ. ಸಮಾಜದ ಮತ್ತು ರಾಜಕಾರಣಿಗಳ ಅಂಕು ಡೊಂಕು ಸರಿಪಡಿಸುವ ಅಧಿಕಾರ ಪತ್ರಕರ್ತರಿಗಲ್ಲದೇ ಬೇರೆ ಯಾರಿಗೂ ಇರುವುದಿಲ್ಲ. ಬ್ರೇಕಿಂಗ್ ಸುದ್ದಿ ಮುಖ್ಯವಲ್ಲ. ಪ್ರಧಾನಿ, ಮುಖ್ಯಮಂತ್ರಿ, ಶಾಸಕರು, ಸಚಿವರು ಏನೂ ಮಾಡಿದ್ದಾರೆ ಎಂಬುದು ಮುಖ್ಯ. ಟಿಆರ್‌ಪಿಗೋಸ್ಕರ ಸುದ್ದಿ ವೈಭವೀಕರಿಸಿ ಬಿತ್ತರಿಸಲಾಗುತ್ತಿದೆ ಎಂದರು.

ಪತ್ರಿಕೆಗಳ ಓದುವ ಕೆಲಸ ಮಾಡಿಸಬೇಕು. ಹಾಗಿದ್ದಾಗ ಮಾತ್ರ ಪತ್ರಿಕೆಗೊಂದು ಗೌರವ ಸಿಗುತ್ತದೆ. ಪ್ರತಿ ಜಿಲ್ಲೆಯಲ್ಲೂ ಸುಮಾರು ಐವತ್ತು ಪತ್ರಿಕೆಗಳು ಹುಟ್ಟಿಕೊಳ್ಳುತ್ತಿವೆ. ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಾದೇಶಿಕವಾಗಿರುವ ಎಲ್ಲಾ ಸುದ್ದಿಗಳು ಸಿಗುವುದಿಲ್ಲ. ಆದ್ದರಿಂದ ರಾಜ್ಯ ಪತ್ರಿಕೆಗಳು ರಾಜ್ಯಮಟ್ಟದ ಸುದ್ದಿಗಳ ಜಿಲ್ಲೆಗಳು ಜಿಲ್ಲಾ ಮಟ್ಟದ ಸುದ್ದಿಗಳನ್ನು ನೀಡಿದರೆ ಮಾತ್ರ ಪತ್ರಿಕೆಗಳು ಅಭಿವೃದ್ಧಿ ಕಾಣುತ್ತದೆ ಎಂದು ಹೇಳಿದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಮೂಲ ಸೌಲಭ್ಯ ನೀಡಿದರೆ ಮಾತ್ರ ಪತ್ರಿಕಾರಂಗ ಉಳಿಯಲು ಸಾಧ್ಯವಿದೆ. ಆರ್ಥಿಕ ಸ್ವಾವಲಂಬನೆ ನೀಡುವ ಬಗ್ಗೆ ಸರ್ಕಾರಗಳು ಚಿಂತಿಸಬೇಕಿದೆ. ಪತ್ರಕರ್ತರು ಯಾವುದೋ ರಾಜಕೀಯ ಪಕ್ಷಗಳ ಕಪಿಮುಷ್ಟಿಗೆ ಒಳಗಾಗಬಾರದು. ವಸ್ತುನಿಷ್ಠತೆಗೆ ಆದ್ಯತೆ ನೀಡಿ ಎಂದು ನುಡಿದರು.

ಈ ಸಂದರ್ಭದಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್ ಏಕಬೋಟೆ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಎಸ್.ಕೆ. ಒಡೆಯರ್, ಬಾ.ಮ.ಬಸವರಾಜಯ್ಯ, ವೀರೇಶ್ ಹನಗವಾಡಿ, ಬಿ.ವಿ.ಮಲ್ಲಿಕಾರ್ಜುನಯ್ಯ, ಚನ್ನೇಗೌಡ ಇತರರಿದ್ದರು.

ನೈಜ ಸುದ್ದಿಗಳ ಬಿತ್ತರಿಸಲು ಹೆಚ್ಚಿನ ಆದ್ಯತೆ ನೀಡಿ. ಟಿಕೆಟ್ ನೀಡುವುದು ರಾಜ್ಯ ಮತ್ತು ರಾಷ್ಟ್ರ ನಾಯಕರ ತೀರ್ಮಾನ. ಆದರೆ, ಮಾಧ್ಯಮಗಳು ನಮಗೆ ಮತ್ತು ಜಗದೀಶ್ ಶೆಟ್ಟರ್‌ಗೆ ವಯಸ್ಸಿನ ಕಾರಣಕ್ಕೆ ಟಿಕೆಟ್ ಸಿಗುವುದಿಲ್ಲ ಎಂದು ಸುದ್ದಿ ಬಿತ್ತರಿಸಿರುವುದರಿಂದ ಜನರು ನಮ್ಮನ್ನು ಬಂದು ಪ್ರಶ್ನಿಸುತ್ತಾರೆ. ಯಾರೂ ಹೇಳಿದರು ಅಂದರೆ ನಿಖರ ವ್ಯಕ್ತಿಯ ಹೆಸರು ಇರುವುದಿಲ್ಲ. ಪತ್ರಿಕಾರಂಗ ತನ್ನದೇ ಆದ ಗೌರವ ಕಾಪಾಡಿಕೊಂಡಿದ್ದು, ನೈಜ ಸುದ್ದಿಗಳ ಮಾತ್ರ ಪ್ರಕಟಿಸಿ. ವಿಷಯವನ್ನು ಕೂಲಂಕಷವಾಗಿ ತಿಳಿದು ಹಾಕಿದರೆ ಒಳ್ಳೆಯದು.

ಡಾ. ಜಿ.ಎಂ.ಸಿದ್ದೇಶ್ವರ್, ಸಂಸದ