ಕರ್ನಾಟಕ ಹೈಟೆಕ್ ಮೆಡಿಕಲ್ ಆ್ಯಂಡ್ ಸೇಲ್ಸ್ ರೆಪ್ರೆಸೆಂಟೀವ್ ಎಸೋಸಿಯೇಶನ್ ಉಡುಪಿ ಮತ್ತು ಜಯಂಟ್ಸ್ ಗೂಪ್ ಆಫ್ ಬ್ರಹ್ಮಾವರ ವತಿಯಿಂದ ೨೩ ನೇ ವರ್ಷದ ವೈದ್ಯರ ದಿನಾಚರಣೆ, ಅಭಿನಂದನಾ ಸಮಾರಂಭ ಉಡುಪಿ ಪುರಭವನದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ಹೈಟೆಕ್ ಮೆಡಿಕಲ್ ಆ್ಯಂಡ್ ಸೇಲ್ಸ್ ರೆಪ್ರೆಸೆಂಟೀವ್ ಎಸೋಸಿಯೇಶನ್ ಉಡುಪಿ ಮತ್ತು ಜಯಂಟ್ಸ್ ಗೂಪ್ ಆಫ್ ಬ್ರಹ್ಮಾವರ ವತಿಯಿಂದ ೨೩ ನೇ ವರ್ಷದ ವೈದ್ಯರ ದಿನಾಚರಣೆ, ಅಭಿನಂದನಾ ಸಮಾರಂಭ ಉಡುಪಿ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವೈದ್ಯರು ತಮ್ಮ ಅಪೂರ್ವ ಸೇವೆಯನ್ನು ಸಮಾಜಕ್ಕೆ ನಿರಂತರವಾಗಿ ನೀಡಿರುವ ಕಾರಣ ಇಂದು ಸಮಾಜದ ಆರೋಗ್ಯ ಸರಿಯಾದ ರೀತಿಯಲ್ಲಿ ಇದೆ. ವೈದ್ಯರ ಈ ಸೇವೆಯನ್ನು ಗುರುತಿಸುವ ಕಾರ್ಯ ನಿರಂತರವಾಗಿರಬೇಕು ಎಂದರು.
ಮುಖ್ಯ ಅತಿಥಿ ಭಾರತೀಯ ವೈದ್ಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಡಾ.ಸುರೇಶ್ ಶೆಣೈ ಮಾತನಾಡಿ ವೈದ್ಯಕೀಯ ಪ್ರತಿನಿಧಿಗಳು ಬಹಳಷ್ಟು ಜನರು ತಮ್ಮ ಉದ್ಯೋಗದೊಂದಿಗೆ ಸಮಾಜಕ್ಕೆ ಅನೇಕ ರೀತೀಯ ಕೊಡುಗೆಗಳನ್ನು ನೀಡುತ್ತಿದ್ದಾರೆ. ಮುಖ್ಯವಾಗಿ ಅನೇಕ ಆರೋಗ್ಯ ಶಿಬಿರಗಳಿಗೆ ಔಷಧಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಅಧ್ಯಕ್ಷ ಅಣ್ಣಯ್ಯ ದಾಸ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಅಮೀನ್, ಜಯಂಟ್ಸ್ ಫೆಡರೇಶನ್ ಅಧ್ಯಕ್ಷ ತೇಜಶ್ವರ್ ರಾವ್, ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಸತೀಶ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕಾರಂತ್ ಇದ್ದರು. ಹಿರಿಯ ವೈದ್ಯರಾದ ಮಣಿಪಾಲ ಕೆಎಂಸಿ ಸ್ತ್ರೀರೋಗ ತಜ್ಞ ಡಾ. ಶ್ರೀಪಾದ ಹೆಬ್ಬಾರ್, ತೆಕ್ಕಟ್ಟೆಯ ವೈದ್ಯ ಡಾ. ಕೃಷ್ಣಯ್ಯ ಶೆಟ್ಟಿ, ಹಿರಿಯಡ್ಕ ಕಾಮತ್ ಕ್ಲಿನಿಕಿನ ಡಾ. ಸುಧಾ ಕಾಮತ್, ಕುಂದಾಪುರ ಸರ್ಕಾರಿ ಆಸ್ಪತ್ರೆಯ ಡಾ. ನಾಗೇಶ್ ಅವರನ್ನು ವೈದ್ಯಕೀಯ ಸೇವೆಗಾಗಿ ಸನ್ಮಾನಿಸಲಾಯಿತು.ರಾಜು ಪಿ ಕರಾವಳಿ, ವಿಜೇತ, ಅಂಬಿಕಾ, ಅನಂತಕೃಷ್ಣ ಹೊಳ್ಳ, ರಾಘವೇಂದ್ರ ಪ್ರಭು ಕರ್ವಾಲು, ವಿವೇಕಾನಂದ ಕಾಮತ್ ಸನ್ಮಾನಿತರನ್ನು ಪರಿಚಯಿಸಿದರು. ಸುಬ್ರಹ್ಮಣ್ಯ ಆಚಾರ್ಯ ನಿರೂಪಿಸಿದರು. ಪ್ರಸನ್ನ ಕಾರಂತ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.