ಉಡುಪಿ ಜಿಲ್ಲಾಸರ್ಕಾರಿ ಆಸ್ಪತ್ರೆಯ ಅರ್ಹ ರೋಗಿಗಳಿಗೆ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಲಕ್ಷಾಂತರ ರು. ಮೌಲ್ಯದ ಔಷಧಗಳನ್ನು ಗುರುವಾರ ಹಸ್ತಾಂತರ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಅರ್ಹ ರೋಗಿಗಳಿಗೆ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಲಕ್ಷಾಂತರ ರು. ಮೌಲ್ಯದ ಔಷಧಗಳನ್ನು ಗುರುವಾರ ಹಸ್ತಾಂತರ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್, ನಮ್ಮ ಬೇಡಿಕೆಗೆ ಸಂಘಟನೆ ಸ್ಪಂದಿಸಿ ಅಗತ್ಯವಿದ್ದ ಔಷಧ, ಕಂಪ್ಯೂಟರ್ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ. ಅವರ ಕಾರ್ಯ ಶ್ಲಾಘನೀಯವಾಗಿದ್ದು, ಇದೇ ರೀತಿಯ ಸಹಕಾರ ಸದಾ ಇರಲಿ ಎಂದು ಆಶಯ ವ್ಯಕ್ತಪಡಿಸಿದರು.ಸಂಘಟನೆಯ ಇದ್ರೀಸ್ ಹೂಡೆ ಮಾತನಾಡಿ, ಸಂಘಟನೆಯು ಸದಾ ಕಾಲ ಸಂಕಷ್ಟದಲ್ಲಿರುವವರಿಗೆ ಮಿಡಿಯುವ ಕೆಲಸ ನಡೆಸುತ್ತಾ ಬಂದಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ರೇಷನ್ ಕಿಟ್ ವಿತರಣೆ, ಅಂತ್ಯ ಸಂಸ್ಕಾರ ಸೇರಿದಂತೆ ಸಾಧ್ಯವಾದ ಎಲ್ಲ ನೆರವನ್ನು ನಮ್ಮ ಕಾರ್ಯಕರ್ತರು ಮಾಡಿದ್ದರು. ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತದ ಸಂದರ್ಭದಲ್ಲೂ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಅರ್ಹ ರೋಗಿಗಳಿಗೆ ಬೇಕಾದ ಔಷಧವನ್ನು ಜಿಲ್ಲಾಸ್ಪತ್ರೆಗೆ ಒದಗಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಅಝೀಝ್ ಉದ್ಯಾವರ, ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಶಾಖೆಯ ಅಧ್ಯಕ್ಷ ನಿಸಾರ್ ಉಪ್ಪಿನಕೋಟೆ, ಡಾ.ನಿಖಿನ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ನಿತ್ಯನಂದ ಒಳಕಾಡು, ಅಝೀಝ್ ಉದ್ಯಾವರ, ಉದ್ಯಮಿ ಮುಹಮ್ಮದ್ ಸೀರಾಜ್, ಪ್ರೊ.ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.