ಕನ್ನಡಪ್ರಭ ವಾರ್ತೆ ಹಾಸನ
ನಗರದ ಬಿ.ಎಂ. ರಸ್ತೆ ಬಳಿ ಇರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಹಾಸನ ನಾದ ಧ್ಯಾನ ಚಕ್ರ-೫ ಮೆಡಿಟೇಶನ್ ಶಿಬಿರವು ಭಾನುವಾರ ಯಶಸ್ವಿಯಾಗಿ ಜರುಗಿತು.ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಧ್ಯಾನಕ್ಕೆ ಚಾಲನೆ ನೀಡಲಾಯಿತು. ನಂತರ ಕೆಲ ಸಮಯದಲ್ಲೆ ಕೊಳಲು ವಾದನ, ವೀಣೆಯನ್ನು ನುಡಿಸುವ ಮೂಲಕ ಧ್ಯಾನವು ಆರಂಭವಾಯಿತು. ಇದೇ ವೇಳೆ ಮೆಡಿಟೇಶನ್ ತರಬೇತುದಾರರಾದ ಅಯ್ಯಪ್ಪ ಪಿಂಡಿ ಮಾತನಾಡಿ, ಧ್ಯಾನ ಎಂಬುದು ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ನಾವು ಕಳೆದ ೪೦ ದಿನಗಳಿಂದಲೂ ಹಾಸನದಲ್ಲಿ ಓಡಾಡಿದಾಗ ನಮಗೆ ಕೇಳಿಬಂದಿದ್ದು ನಮಗೂ ಧ್ಯಾನ ಬೇಕು ಎನ್ನುವ ಮಾತು. ಧ್ಯಾನದಲ್ಲಿ ಕರ್ನಾಟಕ ನಂಬರ್ ಒನ್ ಆಗಬೇಕು. ಪ್ರತಿ ಜಿಲ್ಲೆಯಲ್ಲೂ ಧ್ಯಾನ ಆದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಬಹುದು. ಒತ್ತಡ ಹೋಗಲಾಡಿಸಲು ಧ್ಯಾನ ಬಹಳ ಮುಖ್ಯ. ಎಷ್ಟು ಔಷಧಿ, ಸಂಶೋಧನೆ, ವಿಜ್ಞಾನಿಗಳೇ ಆಗಲಿ ಮೆಡಿಟೇಶನ್ ಮಾಡಬೇಕೆಂದು ಹೇಳುತ್ತಿದ್ದಾರೆ ಎಂದರು. ಕಳೆದ ೨೫ ವರ್ಷದಿಂದ ಮೆಡಿಟೇಶನ್ ಮಾಡುತ್ತಿದ್ದು, ಉಸಿರಿನ ಮೇಲೆ ಗಮನವಿರುತ್ತದೆ. ನಮ್ಮ ಗುರುಗಳು ಹೇಳಿದಂತೆ ಉಚಿತವಾಗಿ ಈ ಧ್ಯಾನವನ್ನು ಹೇಳಿಕೊಡಲಾಗುತ್ತಿದೆ. ಇದು ಸಾಮೂಹಿಕ ಧ್ಯಾನವಾಗಿದೆ. ಮನಸ್ಸು ಶೂನ್ಯ ಎಂಬುದನ್ನು ತಿಳಿಯಬಹುದು. ತೆಗೆದುಕೊಳ್ಳುವ ಮೆಡಿಸಿನ್ ನಿಂದ ಆರೋಗ್ಯ ಬರುವುದಿಲ್ಲ. ನಮ್ಮ ಲೈಫ್ ಸ್ಟೈಲ್ನಲ್ಲಿ ಯೋಗ, ಧ್ಯಾನ ಇವೆಲ್ಲಾ ಸೇರಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿನಿತ್ಯ ೧೦ ರಿಂದ ೧೫ ನಿಮಿಷ ಧ್ಯಾನ ಶುರು ಮಾಡಿದರೇ ನಿಧಾನವಾಗಿ ಇನ್ನಷ್ಟು ಸಮಯವನ್ನು ಹೆಚ್ಚು ಮಾಡುತ್ತಾ ಹೋಗಬಹುದಾಗಿದೆ. ಮನೆಯಲ್ಲಿ ಪೋಷಕರು ಯಾವ ರೀತಿ ಇರುತ್ತಾರೆ ಮಕ್ಕಳು ಕೂಡ ಅದರಂತೆ ನಡೆಯುವುದು ಸಹಜ. ಈ ನಿಟ್ಟಿನಲ್ಲಿ ಪೋಷಕರು ಧ್ಯಾನ ಮತ್ತು ಯೋಗದಂತಹದನ್ನು ಕಲಿಸುವುದಕ್ಕೆ ಮುಂದಾದರೇ ಉತ್ತಮ ಸಮಾಜ ನಿರ್ಮಾಣ ಮಾಡಬಹುದು. ಧ್ಯಾನ ಮತ್ತು ಯೋಗಕ್ಕೆ ವಯಸ್ಸಿನ ಅಂತರವಿಲ್ಲ ಎಂದು ಹೇಳಿದರು.ಸಂಘಟಕರಾದ ಮಮತಾ, ಸ್ವಾಮಿಗೌಡ, ರೋಟರಿ ಕ್ಲಬ್ ಆಫ್ ಸೆಂಟ್ರಲ್ ಹಾಸನ್ ಸದಸ್ಯ ರಮೇಶ್, ಬೊಮ್ಮೇಗೌಡ, ಪ್ರಕಾಶ್, ವಕೀಲೆ ಎಂ. ಸುಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.