ಅಂಕೋಲಾ: ಮಹಿಳೆಯರನ್ನು ಕಾಡುವ ಆತಂಕ, ಭಯ, ಖಿನ್ನತೆ, ಋಣಾತ್ಮಕ ಆಲೋಚನೆ ಇತ್ಯಾದಿಗಳಿಂದ ಮುಕ್ತಿ ಹೊಂದಲು ಧ್ಯಾನವೊಂದೇ ಮಾರ್ಗ ಎಂದು ಬ್ರಹ್ಮಕುಮಾರಿ ಸಂಸ್ಥೆಯ ಸಂಯೋಜಕರಾದ ರಾಜಯೋಗಿನಿ ಬಿ.ಕೆ. ವಿದ್ಯಾ ತಿಳಿಸಿದರು.
ಜಾನಪದ ಕಲಾವಿದೆ ನೀಲಮ್ಮ ಗೌಡ ಮಾತನಾಡಿ, ಜಾನಪದ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾದದ್ದು ಯುವಕರ ಆದ್ಯ ಕರ್ತವ್ಯವಾಗಿದೆ. ಆದರೆ ಯುವ ಜನಾಂಗ ಜಾನಪದ ಕಲೆಗಳಿಂದ ದೂರ ಸರಿಯುತ್ತಿರುವುದು ಬಹುದೊಡ್ಡ ದುರಂತವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಚೈತ್ರಾ ನಾಯ್ಕ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆಯನ್ನು ಮಾಡಿ ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.ನೀಲಮ್ಮ ಗೌಡ ಹಾಗೂ ತಂಡದವರು ಪ್ರಸ್ತುತಪಡಿಸಿದ ಹಾಲಕ್ಕಿ ಜಾನಪದ ಹಾಡು, ತಾರ್ಲೆ ಕುಣಿತ ಮತ್ತು ಪಗಡಿ ಕುಣಿತ ಗಮನ ಸೆಳೆಯಿತು.
ಜಿಲ್ಲಾ ಸಂವಹನ ಪ್ರಭಾರಿ ರಾಧಿಕಾ ಆಚಾರಿ ವಂದಿಸಿದರು. ಪತಂಜಲಿ ಮಹಿಳಾ ಸಮಿತಿಯ ಸದಸ್ಯರಿಂದ ಹಾಗೂ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮವು ನಡೆಯಿತು. ಸಮಿತಿಯ ಸದಸ್ಯರಾದ ಲತಾ ನಾಯ್ಕ, ಸಂಧ್ಯಾ ಕಾಕರಮಠ, ಮಮತಾ ನಾಯ್ಕ, ನಾಗವೇಣಿ ನಾಯ್ಕ, ಶಿಲ್ಪಾ ಶೆಟ್ಟಿ, ರಶ್ಮಿ ನಾಯಕ, ಸುಕಾಂತಿ ಆಚಾರಿ, ಅನಿತಾ ಮರಬಳ್ಳಿ, ಪತಂಜಲಿ ಯೋಗ ಸಮಿತಿಯ ಪ್ರಭಾರಿ ವಿನಾಯಕ ಗುಡಿಗಾರ, ಕಿಸಾನ್ ಸಮಿತಿಯ ಪ್ರಭಾರಿಗಳಾದ ಅಭಯ ಮರಬಳ್ಳಿ, ವಿ.ಕೆ. ನಾಯರ್, ಪ್ರಶಾಂತ ಶೆಟ್ಟಿ, ಮಾತೃ ಮಂಡಳಿಯ ಅಧ್ಯಕ್ಷೆ ಭಾಗೀರಥಿ ಹೆಗಡೆಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.