ಕೂಡ್ಲಿಗಿ: ತಾಲೂಕಿನ ಮೀನಕೆರೆ ಗ್ರಾಮದಲ್ಲಿ ಟ್ರಾನ್ಸ್ಫಾರ್ಮರ್ ಸುಟ್ಟು ಮೂರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದ್ದರೂ ಅಧಿಕಾರಿಗಳು ಮಾತ್ರ ಇನ್ನು ಟ್ರಾನ್ಸ್ಫಾರ್ಮರ್ ದುರಸ್ತಿಗೊಳಿಸಿ ಕುಡಿಯುವ ನೀರು ಒದಗಿಸಿಲ್ಲ. ಗ್ರಾಮಸ್ಥರು ದೂರದ ಖಾಸಗಿ ಬಾವಿಯಲ್ಲಿ ನೀರು ತರುವ ಪರಿಸ್ಥಿತಿ ಉಲ್ಬಣವಾಗಿದೆ. ಮನೆಗೆ ಕುಡಿಯುವ ನೀರು ತರಲು ಹರಸಾಹಸ ಪಡಬೇಕಾಗಿದೆ.
ಶಾಸಕರು ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಅಧಿಕಾರಿಗಳನ್ನು ಅಲರ್ಟ್ ಮಾಡಿದ್ದೇವೆ, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ಹೇಳುತ್ತಾರೆ. ಆದರೆ ಮೀನಕೆರೆ ಗ್ರಾಮದಲ್ಲಿ ಟ್ರಾನ್ಸ್ಫಾರ್ಮರ್ ಸುಟ್ಟರೆ, ಅದನ್ನು ದುರಸ್ತಿಪಡಿಸಲು 3 ದಿನ ಬೇಕಾ? ಎನ್ನುತ್ತಾರೆ ಮೀನಕೆರೆ ಗ್ರಾಮದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾರ್ಯದರ್ಶಿ ಕೆ.ಪಿ.ಪಂಪಾಪತಿ.
ಮೀನಕೆರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ನಿಜ. ಮೊನ್ನೆ ಬಂದ ಗಾಳಿ-ಮಳೆಗೆ ಟ್ರಾನ್ಸ್ಫಾರ್ಮರ್ ಸುಟ್ಟಿದೆ. ಸದ್ಯಕ್ಕೆ ಊರಿನ ಪಕ್ಕದ ಖಾಸಗಿ ಪಂಪ್ಸೆಟ್ನಿಂದ ವಿದ್ಯುತ್ ವೈರ್ ತೆಗೆದುಕೊಂಡು ಬಂದು ಕುಡಿಯುವ ನೀರಿನ ಪಂಪ್ಸೆಟ್ ಆರಂಭಿಸಲಾಗಿದೆ. ಖಾಸಗಿ ಬೋರ್ವೆಲ್ಗೆ ವಿದ್ಯುತ್ ಶಿಪ್ಟ್ ಇರುವುದರಿಂದ ಬೆಳಿಗ್ಗೆಯಿಂದ 12 ಗಂಟೆವರೆಗೂ ಮಾತ್ರನೀರು ಲಭ್ಯವಿದೆ ಎನ್ನುತ್ತಾರೆ ಹುರುಳಿಹಾಳ್ ಪಿಡಿಒ ಶ್ರೀನಿವಾಸ್.