ಕನ್ನಡಪ್ರಭ ವಾರ್ತೆ ತಿಪಟೂರು
ಈ ವೇಳೆ ಮಾತನಾಡಿದ ಅವರು, ನಮ್ಮ ಸಂಘವು ರಾಜ್ಯದಲ್ಲಿ 183 ಶಾಖೆಗಳನ್ನು ಹೊಂದಿದ್ದು, 6 ಲಕ್ಷಕ್ಕೂ ಹೆಚ್ಚು ನೌಕರರನ್ನು ಪ್ರತಿನಿಧಿಸುವ ಏಕೈಕ ಬೃಹತ್ ಸಂಘಟನೆಯಾಗಿದೆ. ನಮ್ಮ ಸಂಘ ನೌಕರರ ಕ್ಷೇಮಾಭಿವೃದ್ಧಿಗೆ ಮಾತ್ರ ಸೀಮಿತವಾಗದೆ ರಾಷ್ಟ್ರ ಮತ್ತು ರಾಜ್ಯದಲ್ಲಿ ಸಂಭವಿಸುವ ಪ್ರಕೃತಿ ವಿಕೋಪ, ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆರ್ಥಿಕ ಸಹಕಾರ ನೀಡಿರುವ ಹೆಮ್ಮಯ ಸಂಘಟನೆಯಾಗಿದೆ. ಸರ್ಕಾರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ನೌಕರರು ಸರ್ಕಾರಕ್ಕೆ ಸಹಕರಿಸುತ್ತಿದ್ದರೂ ನಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಲ್ಲಿ ಮೀನಮೇಷ ಎಣಿಸುತ್ತಿದೆ. ನಮ್ಮ ಬೇಡಿಕೆಗಳಾದ 6ನೇ ವೇತನ ಆಯೋಗವನ್ನು ಆರ್ಥಿಕ ಸೌಲಭ್ಯದೊಂದಿಗೆ ಜಾರಿಗೊಳಿಸಬೇಕು, ರಾಜ್ಯ 7ನೇ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆದೇಶ ಹೊರಡಿಸಬೇಕು ಎಂದರು.
ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಯೋಜನೆಯನ್ನು ಜಾರಿಗೊಳಿಸಬೇಕು. ಓಪಿಎಸ್ ಜಾರಿಯಾಗದ ಕಾರಣ ರಾಜ್ಯದ ಸುಮಾರು ೩ಲಕ್ಷ ನೌಕರರಲ್ಲಿ ಆತಂಕ ಮೂಡಿಸಿದ್ದು ಕೂಡಲೆ ಓಪಿಎಸ್ ಜಾರಿಗೊಳಿಸಬೇಕು. ನೌಕರರ ನಗದು ರಹಿತ ಚಿಕಿತ್ಸೆಗಾಗಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ತರಬೇಕು. ಸರ್ಕಾರದ ಮುಂದಿರುವ ನೌಕರರ ನ್ಯಾಯಯುತ ಬೇಡಿಕೆಗಳನ್ನು ಜಾರಿಗೊಳಿಸಲು ಈಗಾಗಲೇ ಸಾಕಷ್ಟು ವಿಳಂಬವಾಗಿರುವುದರಿಂದ ಶೀಘ್ರವಾಗಿ ಸರ್ಕಾರಿ ಆದೇಶವನ್ನು ಹೊರಡಿಸುವ ಮೂಲಕ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ತಾಲೂಕಿನ ನೌಕರರ ಪರವಾಗಿ ಒತ್ತಡ ತರುವಂತೆ ಹಾಗೂ ಶಿಫಾರಸ್ಸು ಮಾಡುವಂತೆ ಶಾಸಕರಿಗೆ ಮನವಿ ಮಾಡಿದರು.ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೆ. ಷಡಕ್ಷರಿ, ನಿಮ್ಮ ಈ ಎಲ್ಲಾ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸುವಂತೆ ತಿಳಿಸಲಾಗುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಮಂಜುನಾಥ್, ರಾಜ್ಯ ಪರಿಷತ್ ಸದಸ್ಯ ಚಂದ್ರಶೇಖರ್, ಉಪಾಧ್ಯಕ್ಷ ಮಹಲಿಂಗಯ್ಯ, ಸುರೇಶ್, ತೇಜಮೂರ್ತಿ, ಉಮೇಶ್ ಹಾಗೂ ಎನ್ಪಿಎಸ್ ನೌಕರರಾದ ಜಿ.ಟಿ. ಮಹೇಶ್, ಬಸವರಾಜ್, ಲಿಂಗೇಶ್, ಸುನೀಲ್, ರಾಜಶೇಖರ್, ಶಶಿಧರ್, ಗಿರೀಶ್ ಮತ್ತಿತರರಿದ್ದರು.