ಸಿಎಂರೊಂದಿಗೆ ಪರ - ವಿರೋಧ ಇರುವ ರೈತರ ಸಭೆ ಆಯೋಜನೆ: ಬಾಲಕೃಷ್ಣ

KannadaprabhaNewsNetwork |  
Published : Jul 10, 2026, 12:15 AM IST
9ಕೆಆರ್ ಎಂಎನ್ 6.ಜೆಪಿಜಿಶಾಸಕ ಬಾಲಕೃಷ್ಣ | Kannada Prabha

ಸಾರಾಂಶ

ಜಿಬಿಡಿಎ ಕಚೇರಿಯ ಸಭಾಂಗಣದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ಪರವಾಗಿರುವ ರೈತರ ಸಭೆಯ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆ ಪರವಾದ ರೈತರು ತಮ್ಮ ಅಹವಾಲು ಆಲಿಸುವಂತೆ ಒತ್ತಾಯಿಸಿದ್ದರಿಂದ ಸಭೆ ನಡೆಸಿದ್ದೇನೆ. ಈ ರೈತರು ಕೂಡ ಸಿಎಂ ಅವರೊಂದಿಗೆ ಚರ್ಚಿಸಲು ಸಮಯ ಕೇಳಿದ್ದಾರೆ. ಹಾಗಾಗಿ ಪರ ಮತ್ತು ವಿರೋಧ ಇರುವ ರೈತರ ಸಿಎಂ ಭೇಟಿಗೆ ಶೀಘ್ರದಲ್ಲಿಯೇ ದಿನಾಂಕ ನಿಗದಿ ಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿ ಟೌನ್ ಶಿಪ್ ಯೋಜನೆ ಪರ ಮತ್ತು ವಿರೋಧ ಇರುವ ರೈತರೊಂದಿಗೆ ಮುಖ್ಯಮಂತ್ರಿಗಳ ಸಭೆ ಆಯೋಜಿಸಲಾಗುವುದು. ಎಲ್ಲ ರೈತರು ಯೋಜನೆಗೆ ಒಪ್ಪಿಗೆ ಸೂಚಿಸುವ ವಿಶ್ವಾಸವಿದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ನಗರದ ಜಿಬಿಡಿಎ ಕಚೇರಿಯ ಸಭಾಂಗಣದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ಪರವಾಗಿರುವ ರೈತರ ಸಭೆಯ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆ ಪರವಾದ ರೈತರು ತಮ್ಮ ಅಹವಾಲು ಆಲಿಸುವಂತೆ ಒತ್ತಾಯಿಸಿದ್ದರಿಂದ ಸಭೆ ನಡೆಸಿದ್ದೇನೆ. ಈ ರೈತರು ಕೂಡ ಸಿಎಂ ಅವರೊಂದಿಗೆ ಚರ್ಚಿಸಲು ಸಮಯ ಕೇಳಿದ್ದಾರೆ. ಹಾಗಾಗಿ ಪರ ಮತ್ತು ವಿರೋಧ ಇರುವ ರೈತರ ಸಿಎಂ ಭೇಟಿಗೆ ಶೀಘ್ರದಲ್ಲಿಯೇ ದಿನಾಂಕ ನಿಗದಿ ಪಡಿಸಲಾಗುವುದು ಎಂದರು.

ಭೂ ಸ್ವಾಧೀನ ಪರ ಇರುವ ರೈತರು ಅಂತಿಮ ನೋಟಿಫಿಕೇಷನ್ ಗೆ ಆಗ್ರಹಿಸಿದ್ದಾರೆ. ಪ್ರೈಮರಿ ನೋಟಿಫಿಕೇಷನ್ ಹೊರಡಿಸಿ ಒಂದು ವರ್ಷವಾಗಿದೆ. ಕೇವಲ ಕತೆ ಹೇಳಿಕೊಂಡು ಬರುತ್ತಿದ್ದೀರಿ. ಇಲ್ಲಿ ದೊರೆಯುವ ಪರಿಹಾರದ ಹಣವನ್ನು ಬೇರೆ ಕಡೆ ಭೂಮಿ ಖರೀದಿಸಬೇಕು. ಭೂಮಿಯ ಬೆಲೆ ಹೆಚ್ಚಾಗುತ್ತಿದೆ. ಪರಿಹಾರ ಸಿಗುವುದು ವಿಳಂಬವಾದರೆ ಸಮಸ್ಯೆಯಾಗುತ್ತದೆ ಎಂದು ಭೂಸ್ವಾಧಿನದ ಪರ ಇರುವ ರೈತರು ಅಹವಾಲು ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು.

ಅಂತಿಮ ನೋಟಿಫಿಕೇಷನ್ ಆಗಿರುವ ಪ್ರದೇಶಗಳಲ್ಲಿ ತಕ್ಷಣ ಜೆಎಂಸಿ ಪ್ರಕ್ರಿಯೆ ಆರಂಭಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ರೈತರು ತಾವು ಬೆಳೆದಿರುವ ಬೆಳೆಗಳ ಬಗ್ಗೆ ಆತಂಕ ಇದೆ. ಹವಾಮಾನ ಕಾರಣ ಬೆಳೆಗಳಿಗೆ ನಷ್ಟವಾದರೆ ಜೆಎಂಸಿ ವೇಳೆ ತಮಗೆ ಲಭ್ಯವಾಗಬಹುದಾದ ಪರಿಹಾರ ಸಿಗದೆ ಹೋಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜೆಎಂಸಿಗೆ ಒಪ್ಪಿಗೆ ಸೂಚಿಸಿದ್ದೇವೆ ಎಂದರು.

ಭೂಸ್ವಾಧೀನ ಆಗುತ್ತಿರುವ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಕೆಲವರಿಗೆ ಭೂಮಿ ಅಥವಾ ನಿವೇಶನ ಇಲ್ಲ. ಹೀಗಾಗಿ ಅವರಿಗೂ ನಿವೇಶನ ಕಲ್ಪಿಸಿಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. 20 ವರ್ಷಗಳಿಂದ ನಮ್ಮನ್ನು ಅತಂತ್ರ ಸ್ಥಿತಿಯಲ್ಲಿ ಇಟ್ಟಿದ್ದೀರಿ. ಈಗಲಾದರೂ ಯೋಜನೆಯನ್ನು ಬೇಗ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ. ಈ ವಿಚಾರಗಳನ್ನು ತಾವು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು. ಭೂಸ್ವಾಧೀನ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ನಿವೃತ್ತ ನ್ಯಾಯಧೀಶ ಸಂತೋಷ್ ಹೆಗ್ಡೆಯವರು ಬೆಂಬಲ ವ್ಯಕ್ತಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ಸಂತೋಷ್ ಹೆಗ್ಡೆಯವರ ಬಗ್ಗೆ ತಮಗೆ ಅಪಾರವಾದ ಗೌರವವಿದೆ. ಬಹುಶಃ ಅವರಿಗೆ ಮಾಹಿತಿ ಕೊರತೆ ಇರಬಹುದು. ಅವರಿಗೂ ಮಾಹಿತಿ ಕೊಡುವ ಕೆಲಸ ಮಾಡುತ್ತೇವೆ ಎಂದು ಉತ್ತರಿಸಿದರು.

ಸಂತೋಷ್ ಹೆಗ್ಡೆಯವರು ಭೂಸ್ವಾಧೀನಕ್ಕೆ ವಿರುದ್ದವಾಗಿರುವವರ ಬಳಿ ಮಾತನಾಡಿದ್ದಾರೆ. ಅವರು ಪರವಾಗಿರುವ ರೈತರ ಬಳಿಯೂ ಮಾತನಾಡಿದರೆ, ಅವರಿಗೆ ಇನ್ನೂ ಹೆಚ್ಚಿನ ವಿಚಾರ ಗೊತ್ತಾಗುತ್ತದೆ. ಈ ಯೋಜನೆ ಇಷ್ಟು ದಿನ ಏಕೆ ನೆನೆಗುದಿಗೆ ಬಿದ್ದಿತ್ತು, ಈಗೇಕೆ ರೈತರು ಯೋಜನೆ ಪರವಾಗಿದ್ದಾರೆ ಎಂಬುದು ತಿಳಿಯುತ್ತದೆ. ಭೂಸ್ವಾಧೀನದ ಪರ ಇರುವ ರೈತರು ಸಹ ಸಂತೋಷ್ ಹೆಗ್ಡೆ ಅವರನ್ನು ಭೇಟಿ ಮಾಡಿ ತಮ್ಮ ಅನಿಸಿಕೆಗಳನ್ನು ಆಲಿಸುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ಬಾಲಕೃಷ್ಣ ಹೇಳಿದರು.

ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಕ್ಕೆ ಡಿಕ್ಕಿಯಾಗಿ ಪೆಟ್ರೋಲ್‌ - ಹಾಲಿನ ಟ್ಯಾಂಕರ್‌ ಬೆಂಕಿಗಾಹುತಿ
ಹಾಲಿನ ಖರೀದಿ ದರ ₹10 ಹೆಚ್ಚಳಕ್ಕೆ ಆಗ್ರಹಿಸಿ ಬೀದಿಗಿಳಿದ ದೊಡ್ಡಬಳ್ಳಾಪುರ ತಾಲೂಕಿನ ರೈತರು