ಕನ್ನಡಪ್ರಭ ವಾರ್ತೆ ಮದ್ದೂರು
ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಧಾ ಎಂ.ಎಸ್. ಹರಿಣಿ ಅಧ್ಯಕ್ಷತೆಯಲ್ಲಿ ಅಧೀನ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ಕಾರ್ಯಕ್ರಮ ಜರುಗಿತು.
ಬಾಕಿ ಉಳಿದಿದ್ದ 5643 ಪ್ರಕರಣಗಳನ್ನು ರಾಜೀಗೆ ತೆಗೆದುಕೊಳ್ಳಲಾಗಿತ್ತು. 433 ಪ್ರಕರಣಗಳನ್ನು ಇತ್ಯರ್ಥಪಡಿಸಿದ ನ್ಯಾಯಾಧೀಶರು ನೊಂದವರಿಗೆ 8,53,978 ರು.ಗಳನ್ನು ಪರಿಹಾರ ಮೊತ್ತ ಪಾವತಿಸುವಂತೆ ಆದೇಶ ಹೊರಡಿಸಿದರು. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 31, ಅಪರ ಹಿರಿಯ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯದಲ್ಲಿ 20, ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 128, ಒಂದನೇ ಅಪರ ನ್ಯಾಯಾಲಯದಲ್ಲಿ 89, ಎರಡನೇ ಅಪರ ನ್ಯಾಯಾಲಯದಲ್ಲಿ 26, ಮೂರನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ 119 ಹಾಗೂ ನಾಲ್ಕನೇ ಅಪರ ನ್ಯಾಯಾಲಯದಲ್ಲಿ 20 ಪ್ರಕರಣ ಸೇರಿ ಒಟ್ಟು 433 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಎಸ್. ಹರಿಣಿ, ಎಸ್.ಸಿ.ನಳಿನ, ಎನ್.ವಿ. ಕೋನಪ್ಪ, ಎಸ್. ಪಿ. ಕಿರಣ್ ತಮ್ಮ-ತಮ್ಮ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳನ್ನು ಕಕ್ಷಿದಾರರಿಗೆ ರಾಜೀ ಸಂಧಾನದ ಮೂಲಕ ಆಗುವ ಅನುಕೂಲತೆಗಳನ್ನು ಮನವರಿಕೆ ಮಾಡುವ ಮೂಲಕ ಇತ್ಯರ್ಥಪಡಿಸಿದರು.