ಮೆಗ್ಗಾನ್ ಅವ್ಯವಸ್ಥೆ: ವೈದ್ಯಾಧಿಕಾರಿಗಳಿಗೆ ಚೌದರಿ ಚಾಟಿ

KannadaprabhaNewsNetwork |  
Published : Sep 13, 2026, 01:45 AM IST
ಪೋಟೊ: 12ಎಸ್‌ಎಂಜಿಕೆಪಿ06ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಮಹಿಳಾ ಜನರಲ್ ವಾರ್ಡ್ ಮತ್ತು ಮಕ್ಕಳ ವಿಭಾಗಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಆಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರು ಶನಿವಾರ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ಪರಿಶೀಲಿಸಿದರು. | Kannada Prabha

ಸಾರಾಂಶ

Meggan chaos: Chaudhary lashes out at medical officers

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮೆಗ್ಗಾನ್‌ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಔಷಧಿ ತರಲು ಹಾಗೂ ರಕ್ತ ಪರೀಕ್ಷೆ ಮಾಡಿಸಲು ವೈದ್ಯರು ಆಚೆಗೆ ಚೀಟಿ ಬರೆದು ಕೊಡುತ್ತಾರೆ ಎಂಬ ರೋಗಿಗಳ ಆರೋಪಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಆಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ವೈದ್ಯಾಧಿಕಾರಿಗಳಿಗೆ ತೀವ್ರ ತರಾಟೆ ತೆಗೆದುಕೊಂಡರು.

ಅವರು ಶನಿವಾರ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಮಹಿಳಾ ಜನರಲ್ ವಾರ್ಡ್ ಮತ್ತು ಮಕ್ಕಳ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಪರಿಶೀಲಿಸಿದರು. ಈ ವೇಳೆ ಅಲ್ಲಿದ್ದ ರೋಗಿಗಳ ಅಹವಾಲು ಕೇಳಿ ವೈದ್ಯಾಧಿಕಾರಿಗಳ ಮೇಲೆ ಕಿಡಿಕಾರಿದರು.

ಮಗುವಿನ ರಕ್ತ ಪರೀಕ್ಷೆ -ರಕ್ತ ಕೊಡಲು ಮುಖ್ಯ ಕಟ್ಟಡಕ್ಕೆ ಹೊಗಬೇಕೆಂಬ ಸಮಸ್ಯೆ ಕೇಳಿ ಬರುತ್ತಿದೆ. ಇದರಿಂದ ತಾಯಿ ಮತ್ತು ಆಕೆಯ ಕುಟುಂಬಕ್ಕೂ ಸಮಸ್ಯೆಯಾಗುತ್ತಿದೆ. ತಾಯಿಯೇ ಮಗುವಿನ ರಕ್ತ ಪರೀಕ್ಷೆ ಮಾಡಿಸಲು ಸ್ವತಃ ಲ್ಯಾಬ್‌ಗೆ ಕೊಡಬೇಕಾದ ಸ್ಥಿತಿ ಉಂಟಾಗಿದೆ. ಈ ಬಗ್ಗೆ ಕೂಡಲೆ ಪರಿಶೀಲಿಸಬೇಕು. ಎಲ್ಲವನ್ನು ನೋಡಿಕೊಳ್ಳುವ ಸ್ಥಾನದಲ್ಲಿ ನೀವಿದ್ದಿರಾ. ರೋಗಿಗಳು ಸಮಸ್ಯೆಯನ್ನು ಬಗೆಹರಿಸಿ ಎಂದು ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗೆ ಕರೆ ಮಾಡಿ ಸೂಚನೆ ನೀಡಿದರು.

ಈ ವೇಳೆ ಮಹಿಳೆಯೊಬ್ಬರು ಮಗು ಹುಟ್ಟಿದ್ದ ಕೂಡಲೇ ಅದನ್ನು ನಮಗೆ ಕೊಡಲು ದುಡ್ಡನ್ನು ಕೇಳುತ್ತಾರೆ. ಗಂಡು ಮಗು ಹುಟ್ಟಿದರೆ 1500 ರು., ಹೆಣ್ಣು ಮಗು ಹುಟ್ಟಿದರೆ 1000 ರು. ಕೊಡಬೇಕು. ಇಲ್ಲದಿದ್ದರೆ ಮಗು ಕೊಡಲ್ಲ ಎಂದು ಹೆದರಿಸುತ್ತಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಕೂಡಲೇ ಆ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಹೊರಗೆ ಹೊಳಪು-ಒಳಗೆ ಕೊಳಕು:

ಮಹಿಳಾ ಜನರಲ್ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಜೊತೆಗೆ ಆಸ್ಪತ್ರೆಯಿಂದ ಸಕಾಲವಾಗಿ ಔಷಧಿ ನೀಡುವುದರ ಬಗ್ಗೆಯೂ ರೋಗಿಗಳಿಂದ ಮಾಹಿತಿ ಪಡೆದರು. ಆದರೆ, ಮೂಲಭೂತ ಸೌಕರ್ಯದ ಬಗ್ಗೆ ರೋಗಿಗಳು ಆಯೋಗದ ಅಧ್ಯಕ್ಷರಲ್ಲಿ ತಮ್ಮ ಅಳಲು ತೊಡಿಕೊಂಡರು.

ಶೌಚಾಲಯದಲ್ಲಿ ಸರಿಯಾದ ನೀರಿನ ವ್ಯವಸ್ಥೆಯಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲ. ಕಲುಷಿತ ನೀರು ಬರುತ್ತಿದೆ. ಅದನ್ನೆ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು. ಮೂರು ದಿನಗಳ ಕಾಲ ನೀರಿಲ್ಲವೆಂದರೆ ಇಲ್ಲಿನ ರೋಗಿಗಳು ಕಾಯಿಲೆ ಗುಣವಾಗುವುದಾದರೂ ಹೇಗೆ. ಮಾಧ್ಯಮಗಳಿಗೆ ನಾವು ಉತ್ತರಿಸುವುದಾದರೂ ಏನು. ಇಂತಹ ಅವ್ಯವಸ್ಥೆ ಸಹಿಸುವುದಿಲ್ಲ. ಈ ಕುರಿತು ಆಯುಕ್ತರಿಗೆ ಪತ್ರ ಬರೆಯುತ್ತೆವೆ. ನೀವುಗಳು ಅಷ್ಟೇ ಈ ಸಮಸ್ಯೆಗಳ ಕಡೆ ಗಮನಹರಿಸಿ ಪರಿಹರಿಸಬೇಕು ಎಂದು ತಾಕಿತ್ತು ಮಾಡಿದರು.

ಭೇಟಿ ವೇಳೆ ಸಿಮ್ಸ್ ನಿರ್ದೇಶಕ ಡಾ. ರಮೇಶ್ ಬಾಬು, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧಿಕ್ಷಕ ಡಾ.ತಿಮ್ಮಪ್ಪ, ಡಿಹೆಚ್ ಓ ಡಾ. ನಟರಾಜ್, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಶುಶ್ರೂಣಕಾಧಿಕ್ಷಕರು, ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್ ಸಿಬ್ಬಂದಿ ಹಾಜರಿದ್ದರು.

-----------------------

ಬಾಕ್ಸ್

ತಾಯಿಗೆ ಡಯಾಲಿಸ್- ಅಂಗಲಾಚಿದ ಮಗಳು:

ತಾಯಿಗೆ ಡಯಾಲಿಸ್ ಮಾಡಿಸಬೇಕು. ಆದರೆ, ಮನೆಯಲ್ಲಿ ದುಡಿಯುವವರು ಇಲ್ಲ. ಸರ್ಕಾರಿ ನೌಕರಿ ಕೆಲಸ ಮಾಡುತ್ತಿದ್ದ ಅಣ್ಣ ಕೆಲವು ತಿಂಗಳ ಹಿಂದೆ ತೀರಿ ಹೋದ. ಆಗ ಇದ್ದ ಎಪಿಎಲ್ ಕಾರ್ಡ್‌ನಿಂದ ಈಗ ಅಮ್ಮನಿಗೆ ಡಯಾಲಿಸಿಸ್ ಮಾಡಿಸಲು ತುಂಬಾ ಹಣ ಬೇಕಾಗುತ್ತದೆ ಎಂದು ಯುವತಿಯೊಬ್ಬಳು ಅಳಲು ತೋಡಿಕೊಂಡರು. ಕೂಡಲೇ ನಾಗಲಕ್ಷ್ಮೀ ಚೌದರಿ ಅವರು ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗೆ ಕರೆ ಮಾಡಿ ಈ ಸಮಸ್ಯೆಯ ಕುರಿತು ವಿವರಿಸಿ ಎಪಿಎಲ್ ಇರುವ ಕಾರ್ಡ್ ಬಿಪಿಎಲ್ ಮಾಡಿಸಿ ಕೊಡಿ ಇದರಿಂದ ಅವರಿಗೆ ಅನುಕೂಲವಾಗುತ್ತದೆ ಎಂದ ತಿಳಿಸಿದರು.

ಪಿಜಿ-ರೈಲ್ವೆ ನಿಲ್ದಾಣದಲ್ಲೂ ಮಹಿಳೆಯರಿಗೆ ರಕ್ಷಣೆ ಇರಬೇಕು:

ಪ್ರತಿಯೊಂದು ಇಲಾಖೆಯಲ್ಲಿ ಮಹಿಳಾ ಆಂತರಿಕ ದೂರು ಸಮಿತಿ ಇಟ್ಟುಕೊಳ್ಳಬೇಕು. ಆದರೆ ಅದು ಸರಿಯಾಗಿ ನಡೆಯುತ್ತಿಲ್ಲ. ಹಿರಿಯ ಅಧಿಕಾರಿಗಳ ಮೇಲೆ ದೂರು ಕೊಡಲು ಮಹಿಳಾ ನೌಕರರು ಹಿಂಜರಿಯುತ್ತಿದ್ದಾರೆ. ಇದು ಇಲ್ಲಿಗೆ ಅಂತ್ಯವಾಗಬೇಕು ಎಂದರು.

ಶಾಲಾ- ಕಾಲೇಜಿನ ಸುತ್ತಮುತ್ತ ಮಾತ್ರವಲ್ಲದೆ ಲೇಡಿಸ್ ಪಿಜಿ, ರೈಲ್ವೆ ಸ್ಟೇಷನ್‌ಗಳಲ್ಲೂ ಮಹಿಳೆಯರ ರಕ್ಷಣೆಗೆ ಪೊಲೀಸ್ ಗಸ್ತು ವಾಹನ ಇರಬೇಕು ಎಂದರು.

ಈ ವೇಳೆ ಅಧಿಕಾರಿಗಳು ಮಹಿಳೆಯರಿಗೆ ಸಂಬಂಧಪಟ್ಟಂತೆ ಕೇಸ್‌ಗಳ ಕುರಿತು ಮಾಹಿತಿ ನೀಡಿದರು. 1 ತಿಂಗಳಲ್ಲಿ 15 ರಿಂದ 20 ಕೇಸ್ ದಾಖಲಾಗುತ್ತದೆ. ಮಹಿಳೆಯರ ಎಲ್ಲಾ ಪ್ರಕರಣ ಸಂಬಂಧಪಟ್ಟಂತೆ ವರ್ಷಕ್ಕೆ ಒಟ್ಟು 113 ಎಲ್ಲ ಕೇಸ್ ದಾಖಲಾಗಿದೆ ಎಂದರು.

ಮನೆ ಲೀಸ್ ಹಾಕಿಸಿಕೊಡುವುದಾಗಿ ಮೋಸ:

ಸಂಬಂಧಿಕರು ಹಣವನ್ನು ಪಡೆದು 4 ಲಕ್ಷ ಬೋಗ್ಯಕ್ಕೆ ಮನೆಯನ್ನು ಪಡೆದಿದ್ದೆ. ಆದರೆ, ಆ ಬೋಗ್ಯದ ಮನೆ ಈಗಾಗಲೇ ಬ್ಯಾಂಕ್‌ನಲ್ಲಿ ಮತ್ತು ಫೈನಾನ್ಸ್‌ನಲ್ಲಿ ಅಡವಿಟ್ಟು ಹಾಗೂ ಬೇರೆಯರಿಗೆ ಮಾರಾಟ ಮಾಡಿದ್ದಾರೆ. ಬೋಗ್ಯಕ್ಕೆ ಪಡೆಯುವಾಗ ನಮಗೆ ತಿಳಿದಿರಲಿಲ್ಲ. ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದರು. ನಮಗೆ ತಿಳಿಯದಂತೆ ಬ್ಯಾಂಕ್‌ನವರು ಮನೆಗೆ ಬಂದು ನೋಟಿಸ್ ಅಂಟಿಸಿದ್ದಾರೆ. ಇದನ್ನು ಬಗೆಹರಿಸಿಕೊಡಿ ಎಂದು ಅಂಗವಿಕಲರಾದ ಛಾಯಮ್ಮ ಅಹವಾಲು ತೋಡಿಕೊಂಡು. ಇದಕ್ಕೆ ಸಂಬಂಧಪಟ್ಟಂತೆ ಕಡೂರಿನ ಪೊಲೀಸರಿಗೆ ಕರೆ ಮಾಡಿ ನ್ಯಾಯ ಕೊಡಿಸುವುದಾಗಿ ಅಧ್ಯಕ್ಷರು ತಿಳಿಸಿದರು.

ಗುತ್ತಿಗೆ ನೌಕರರಿಗೆ ಸಂಬಳ ನೀಡಿ:

ಮೆಗ್ಗಾನ್ ಆಸ್ಪತ್ರೆಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಹಲವು ತಿಂಗಳಿಂದ ವೇತನವನ್ನು ಬ್ಯಾಂಕ್ ಖಾತೆಯಿಂದ ಜಮಾವಾಗದೆ ಕೈಯಲ್ಲಿ ನೀಡುತ್ತಿದ್ದಾರೆ ಎಂಬ ದೂರು ಬಂದಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು. ಬ್ಯಾಂಕ್‌ನಿಂದ ನೇರವಾಗಿ ಇಎಸ್‌ಐ, ಪಿಎಫ್ ಕಡಿತ ಮಾಡಿ ವೇತನವನ್ನು ಅವರ ಖಾತೆ ಜಮಾ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

---------------

ಪೋಟೊ: 12ಎಸ್‌ಎಂಜಿಕೆಪಿ06

ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಮಹಿಳಾ ಜನರಲ್ ವಾರ್ಡ್ ಮತ್ತು ಮಕ್ಕಳ ವಿಭಾಗಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಆಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರು ಶನಿವಾರ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ ನಂಬಿ ಬದುಕುತ್ತಿರುವ ರೈತರಿಗೆ ನ್ಯಾಯ ಒದಗಿಸಿ: ರಮೇಶ್‌ ಬಂಡಿಸಿದ್ದೇಗೌಡ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಸಮಸ್ಯೆ ಹೊತ್ತು ನನ್ನ ಬಳಿ ಬರುತ್ತಿದ್ದಾರೆ: ಎಚ್‌.ಟಿ.ಮಂಜು