ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ವಿರೋಧಿ ಬಣಕ್ಕೆ ತಕ್ಕ ಉತ್ತರ ನೀಡಲು ಸದಸ್ಯತ್ವ ಅಭಿಯಾನ: ಎಂ.ಡಿ.ಉಮೇಶ

KannadaprabhaNewsNetwork | Published : Sep 24, 2024 1:54 AM

ಸೊರಬ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ತಾಲೂಕು ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕಾರಣಿ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸೊರಬ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲು ಮತ್ತು ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರ ಕೈ ಬಲಪಡಿಸುವುದ ರೊಂದಿಗೆ ವಿರೋಧಿ ಬಣಕ್ಕೆ ತಕ್ಕ ಉತ್ತರ ನೀಡಲು ಬಿಜೆಪಿ ಸದಸ್ಯತ್ವ ಅಭಿಯಾನ ಸಹಕಾರಿಯಾಗಲಿದ್ದು, ತಾಲೂಕಿನಲ್ಲಿ ದೊಡ್ಡ ಮಟ್ಟದಲ್ಲಿ ಸದಸ್ಯತ್ವ ನೋಂದಣಿಗೆ ಪಣ ತೊಡಲಾಗಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಎಂ.ಡಿ.ಉಮೇಶ ಹೇಳಿದರು.

ಸೋಮವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕಾರಣಿ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂದಿನ ದಿನಗಳಲ್ಲೂ ನರೇಂದ್ರ ಮೋದಿ ಪ್ರಧಾನಿಯಾಗಲು ಮತ್ತು ದೇಶ ಸದೃಢವಾಗಿ ಹೊರಹೊಮ್ಮಲು ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಾಗಬೇಕಿದೆ. ಈ ನಿಟ್ಟಿ ನಲ್ಲಿ ೧.೩೦ ಲಕ್ಷ ಒಬಿಸಿ ಮತಗಳು ತಾಲೂಕಿನಲ್ಲಿದ್ದು, ೩೦ ಸಾವಿರ ಬಿಜೆಪಿ ಕಾರ್ಯಕರ್ತರಿದ್ದಾರೆ. ಕನಿಷ್ಠ ೮೦ ರಿಂದ ೮೫ ಸಾವಿರ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ. ಈ ಮೂಲಕ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರ ಬಂಗಾರಪ್ಪ ಅವರ ಸಾಮರ್ಥ್ಯವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸದಸ್ಯತ್ವ ಅಭಿಯಾನಕ್ಕೆ ಅಣಿಯಾಗಿದ್ದಾರೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಈ ಹಿಂದಿನ ಯಾವುದೇ ಶಾಸಕರು ಮಾಡದಂತಹ ಕೆಲಸಗಳನ್ನು ಕುಮಾರ ಬಂಗಾರಪ್ಪ ಮಾಡಿ ತೋರಿಸಿ ಇಡೀ ರಾಜ್ಯಕ್ಕೆ ಅಭಿವೃದ್ಧಿ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮೂಲಕ ಕುಮಾರ ಬಂಗಾರಪ್ಪ ಸಾವಿರಾರು ಕೋಟಿ ರು.ಗಳ ಅನುದಾನವನ್ನು ತಂದು ರಸ್ತೆ, ವಿದ್ಯುತ್, ವಿದ್ಯಾರ್ಥಿ ನಿಲಯ, ಆಸ್ಪತ್ರೆ, ಮೂಡಿ, ಮೂಗೂರು ಏತ ನೀರಾವರಿಗೆ ಹೆಚ್ಚಿನ ಆಧ್ಯತೆ ನೀಡಿ, ರೈತರು ಮತ್ತು ಜನೋಪಯೋಗಿ ಕಾರ್ಯಗಳಿಗೆ ನೆರವಾಗಿದ್ದಾರೆ. ಅಭಿವೃದ್ಧಿ ರಾಜಕಾರಣಕ್ಕೆ ಹೆಚ್ಚಿನ ಒತ್ತು ನೀಡುವ ಕುಮಾರ ಬಂಗಾರಪ್ಪ ಅವರನ್ನು ದೂಷಣೆ ಮಾಡುವವರಿಗೆ ಸದಸ್ಯತ್ವ ಅಭಿಯಾನದ ಮೂಲಕದ ತಕ್ಕ ಉತ್ತರ ನೀಡಲಿದ್ದೇವೆ ಎಂದರು.

ಒಬಿಸಿ ಮೋರ್ಚಾ ಜಿಲ್ಲಾ ಪ್ರಭಾರಿ ಪ್ರಶಾಂತ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕುಮಾರ ಬಂಗಾರಪ್ಪ ಅವರ ನೇತೃತ್ವದಲ್ಲಿ ಪ್ರಚಾರ ನಡೆಸಿದ್ದರ ಪರಿಣಾಮ ತಾಲೂಕಿನಿಂದ ಬಿಜೆಪಿ ಅಭ್ಯರ್ಥಿಗೆ ೧೮ ಸಾವಿರ ಮತಗಳ ಮುನ್ನಡೆ ಲಭಿಸಿದೆ. ಇದು ಮುಂದಿನ ವಿಧಾನಸಭಾ ಚುನಾವಣಾ ಕಾಲಕ್ಕೂ ಮುಂದುವರೆಯಬೇಕು. ೧.೩೦ ಲಕ್ಷ ಒಬಿಸಿ ಮತದಾರರನ್ನು ಹೊಂದಿರುವ ತಾಲೂಕಿನಲ್ಲಿ ಸದಸ್ಯರು ಸದಸ್ಯತ್ವ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ಸೆ.೨೫ರಂದು ನಡೆಯುವ ದೀನ ದಯಾಳ್ ಜನ್ಮ ದಿನಾಚರಣೆಯಂದು ಪ್ರತೀ ಬೂತ್‌ನ ಒಬ್ಬ ಸದಸ್ಯ ೧೦೦ ಜನರನ್ನು ಸದಸ್ಯರನ್ನಾಗಿ ಮಾಡುವ ಅವಕಾಶವಿದೆ. ಇದಕ್ಕೆ ಕಾರ್ಯಕರ್ತರು ದೃಢ ನಿರ್ಧಾರದೊಂದಿಗೆ ಕಾರ್ಯೋನ್ಮುಖರಾಗಬೇಕು. ಈ ಮೂಲಕ ಕುಮಾರ ಬಂಗಾರಪ್ಪ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಮಾಜಿ ಅಧ್ಯಕ್ಷ ಕೆ.ಎಸ್.ಅರುಣ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಎಂ.ಎನ್. ಸುಧಾಕರ, ತಾಲೂಕು ಒಬಿಸಿ ಮೋರ್ಚಾದ ಹುಚ್ಚಪ್ಪ ಹೊಸೂರು, ಟೀಕಪ್ಪ ಕೊಡಕಣಿ, ಗುರುಮೂರ್ತಿ ಹಿರೇಶಕುನ, ಮಹಿಳಾ ಮೋರ್ಚಾ ಅಧ್ಯಕ್ಷೆ ಭವಾನಮ್ಮ, ಕೃಷ್ಣಮೂರ್ತಿ ಗುಡಿಗಾರ, ಆರ್.ಮನವೇಲ್ ಮೊದಲಾದವರು ಹಾಜರಿದ್ದರು.