ಮಡಿಕೇರಿ: ಬರೋಬ್ಬರಿ 17 ವರ್ಷಗಳಿಂದ ನೆನೆಗುದಿಗೆ ಬಿದ್ದು ಚಿದಂಬರ ರಹಸ್ಯವಾಗಿ ಉಳಿದಿದ್ದ ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪ್ರಯತ್ನದಿಂದ ನನಸಾಗುತ್ತಿದೆ. ಯೋಜನೆಗೆ 5 ಕೋಟಿ ರು.ಗಳ ಅನುಮೋದನೆ ದೊರೆತು ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ.2009-10 ರಲ್ಲಿ ಆರಂಭಗೊಂಡ ಈ ಯೋಜನೆ ಹತ್ತು ಹಲವು ವಿವಾದಗಳನ್ನು ಸೃಷ್ಟಿಸಿ ಪೂರ್ಣಗೊಳ್ಳದೆ ಇದ್ದುದರಿಂದ ಕೊಡಗಿನ ಸಾರ್ವಜನಿಕರು ನಿರಾಶೆಗೊಂಡಿದ್ದರು.

ಐನ್ ಮನೆ, ಉಂಬಳ ಮನೆ, ಕನ್ನಿಕೋಂಬರೆ,ಬಾಡೆ ಹೀಗೆ ಕೊಡವ ಪರಂಪರೆಯ ವೈಭವ ಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಆರಂಭಗೊಂಡ ಈ ಯೋಜನೆ ಇಚ್ಛಾಶಕ್ತಿ ಕೊರತೆಯಿಂದ ಪೂರ್ಣಗೊಳ್ಳಲೇ ಇಲ್ಲ.ಇದಕ್ಕೆ ಯಾರ ಬಳಿಯೂ ಸಮರ್ಪಕ ಉತ್ತರವೂ ಇರಲಿಲ್ಲ. ಎರಡು ಮೂರು ಬಾರಿ ಯೋಜನೆ ಸ್ಥಳಕ್ಕೆ ಭೇಟಿ ನೀಡಿದ ಡಾ. ಮಂತರ್ ಗೌಡ ಅವರು, ವಿಧಾನ ಸಭೆಯಲ್ಲಿ ನಿಯಮ 73ರಡಿ ಸಚಿವರ ಗಮನ ಸೆಳೆಯುವ ಪ್ರಶ್ನೆಯನ್ನು ಕೇಳಿದ್ದು ಈಗ 5 ಕೋಟಿ ರು.ಗಳನ್ನು ಯೋಜನೆ ಅಭಿವೃದ್ಧಿ ಪಡಿಸುವ ಅನುದಾನದವಾಗಿ ಅನುಮೋದನೆ ನೀಡಲಾಗಿದೆ.ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಮಳೆಹಾನಿಯಿಂದಾಗಿ ವಿದ್ಯುತ್ ಸಂಪರ್ಕದಲ್ಲಿ ಅನಾನುಕೂಲಗಳಾಗುತ್ತಿರುವ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಶಾಸಕರಾದ ಡಾ. ಮಂತರ್ ಗಮನ ಸೆಳೆದರು.ಯುಜಿಡಿ ಕೇಬಲ್ ವ್ಯವಸ್ಥೆ ಶೀಘ್ರವೇ ಕಲ್ಪಿಸಿ ಮಳೆಗಾಲದಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಮುಕ್ತಿ ನೀಡುವಂತೆ ಇಂಧನ ಸಚಿವರ ಗಮನ ಸೆಳೆದರು. ಅಮೃತ್ 2 ನೀರಿನ ವ್ಯವಸ್ಥೆ ಕಾಮಗಾರಿಯ ಜೊತೆ ಜೊತೆಗೆ ಯುಜಿಡಿ ಕೇಬಲ್ ಅಳವಡಿಕೆಗೆ ವ್ಯವಸ್ತೆ ಕಲ್ಪಿಸಿದರೆ ಮಡಿಕೇರಿ ನಗರದಲ್ಲಿ ಮತ್ತೊಮ್ಮೆ ಕಾಮಗಾರಿಗೆ ರಸ್ತೆಗಳಲ್ಲಿ ಗುಂಡಿ ಅಗೆಯುವ ಪ್ರಮೇಯ ಇರುವುದಿಲ್ಲವೆಂದು ಸಚಿವರಿಗೆ ಮನವರಿಕೆ ಮಾಡಿದರು.