ವಯಸ್ಸಾದವರಲ್ಲಿ ಬುದ್ಧಿಮಾಂದ್ಯತೆ ಪ್ರಕರಣ ಹೆಚ್ಚಾಗುತ್ತಿದೆ. ಸಮಸ್ಯೆಯನ್ನು ಪ್ರಾರಂಭದಲ್ಲಿಯೇ ಗುರುತಿಸಿ ಚಿಕಿತ್ಸೆಗೆ ಮುಂದಾಗುವುದು ಹೆಚ್ಚು ಅಗತ್ಯ. ಹಾಗಾಗಿ, ಜನರ ಆರೋಗ್ಯಯುತ ವೃದ್ಧಾಪ್ಯಕ್ಕೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರ ರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಹಿರಿಯ ನಾಗರಿಕರಲ್ಲಿ ವಿವಿಧ ಕಾರಣಗಳಿಗೆ ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದ್ದು, ಅವರನ್ನು ನೋಡಿಕೊಳ್ಳಲು ಕುಟುಂಬ ಸದಸ್ಯರಿಗೆ ಒತ್ತಡ ಹೆಚ್ಚಾಗುತ್ತಿದೆ ಎಂದು ಡಿಮೆನ್ಷಿಯಾ ಇಂಡಿಯಾ ಅಲಯನ್ಸ್ (ಡಿಐಎ) ಅಧ್ಯಕ್ಷ ಡಾ. ರಾಧಾಮೂರ್ತಿ ಕಳವಳ ವ್ಯಕ್ತಪಡಿಸಿದರು.
ನಗರದ ಜೆಎಸ್ಎಸ್ ಆಸ್ಪತ್ರೆ ಸಭಾಂಗಣದಲ್ಲಿ ಜೆಎಸ್ಎಸ್ ವೈದ್ಯಕೀಯ ಕಾಲೇಜು ವತಿಯಿಂದ ನಡೆದ ದೀರ್ಘಾಯುಷ್ಯಕ್ಕಾಗಿ ಬುದ್ಧಿಮಾಂದ್ಯತೆಯ ಅರಿವು, ಆರೋಗ್ಯಕರ ವೃದ್ಧಾಪ್ಯ ಮತ್ತು ಅರಿವಿನ ಆರೋಗ್ಯಕ್ಕೆ ಸಂಬಂಧಿಸಿದ ಕಾಗ್ನಿಸೆನ್ಸ್ ಪ್ಲಸ್- 2025 ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ವಯಸ್ಸಾದವರಲ್ಲಿ ಬುದ್ಧಿಮಾಂದ್ಯತೆ ಪ್ರಕರಣ ಹೆಚ್ಚಾಗುತ್ತಿದೆ. ಸಮಸ್ಯೆಯನ್ನು ಪ್ರಾರಂಭದಲ್ಲಿಯೇ ಗುರುತಿಸಿ ಚಿಕಿತ್ಸೆಗೆ ಮುಂದಾಗುವುದು ಹೆಚ್ಚು ಅಗತ್ಯ. ಹಾಗಾಗಿ, ಜನರ ಆರೋಗ್ಯಯುತ ವೃದ್ಧಾಪ್ಯಕ್ಕೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರ ರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕಿದೆ ಎಂದು ಅವರು ಹೇಳಿದರು.
ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಎಚ್. ಬಸವನಗೌಡಪ್ಪ ಮಾತನಾಡಿ, ಬುದ್ಧಿಮಾಂದ್ಯತೆಯುಳ್ಳ ರೋಗಿಗಳ ಆರೈಕೆಯಲ್ಲಿ ಜಾಗತಿಕ ಪಾಲುದಾರಿಕೆ ಮತ್ತು ಸಂಶೋಧನೆಗಳ ಅಗತ್ಯವಿದೆ ಎಂದರು.
ಬೆಂಗಳೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನ ಟಿ.ವಿ. ರಾಮನ್ ಪೈ ವಿಭಾಗದ ಚೇರ್ಮನ್ ಡಾ. ದೀಪ್ತಿ ನವರತ್ನ ಅವರು, ಭಾರತೀಯ ಶಾಸ್ತ್ರೀಯ ಸಂಗೀತದ ಮೂಲಕ ನ್ಯೂರೊ ಸಂಗೀತ ಶಾಸ್ತ್ರ ವಿಧಾನದಲ್ಲಿ ಆರೋಗ್ಯ ಸುಧಾರಣೆಗೆ ಇರುವ ಅವಕಾಶವನ್ನು ವಿವರಿಸಿದರು.
ಸಮ್ಮೇಳನದಲ್ಲಿ 20ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ ನಡೆಯಲಿದ್ದು, 60ಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನೆ ಮಂಡನೆಯಾಗಲಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಡಾ.ಪಿ. ರಜನಿ, ಪ್ರಾಂಶುಪಾಲ ಡಾ.ಡಿ. ನಾರಾಯಣಪ್ಪ, ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ. ಮಧು, ಅಕಾಡೆಮಿ ಆಡಳಿತಾಧಿಕಾರಿ ಎಸ್.ಆರ್. ಸತೀಶ್ ಚಂದ್ರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.