ಕನ್ನಡಪ್ರಭ ವಾರ್ತೆ ಬೇಲೂರು
ಸಾಹಿತ್ಯ ಓದುವ ಹವ್ಯಾಸದಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ, ಕಲಾವಿದ ಚಂದನ್ ಕುಮಾರ್ ಪ್ರಾಯೋಜಕತ್ವದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ‘ಮನೆ ಮನೆಗೆ ಸಾಹಿತ್ಯಗೋಷ್ಠಿ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಸಾಹಿತ್ಯದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಒಲವು ಕಡಿಮೆಯಾಗುತ್ತಿದೆ. ಸಾಹಿತ್ಯವು ಕೇವಲ ಒಂದು ವರ್ಗಕ್ಕೆ ಸೀಮಿತ ಎಂಬ ಭಾವನೆಯಿದೆ. ಆದರೆ, ಸಾಹಿತ್ಯಕ್ಕೆ ನಮ್ಮ ಬದುಕು ಬದಲಾಯಿಸುವ ಗಟ್ಟಿತನವಿದೆ ಎಂಬ ವಿಷಯವನ್ನು ನಾವು ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ಪ್ರೇಮಿಗಳನ್ನು ಸೃಷ್ಟಿಸುತ್ತಾ ಬಂದಿದೆ. ಪಟ್ಟಣದ ಸಾಹಿತ್ಯ ಭವನದ ನವೀಣಕರಣಕ್ಕೆ ೧೦ ಲಕ್ಷ ರು. ಗಳನ್ನು ನಗರೋತ್ಥಾನದಲ್ಲಿ ನೀಡಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಈ ಅನುದಾನ ರದ್ದಾದರೂ ಸದ್ಯ ಪುರಸಭೆಗೆ ರು. ೮.೫ ಕೋಟಿ ಹಣ ಬಂದಿದ್ದು, ಶಾಸಕರ ಸಮ್ಮುಖದಲ್ಲಿ ನವೀಕರಣಕ್ಕೆ ನೀಡಲು ನಮ್ಮಿಂದ ಯಾವುದೇ ಅಭ್ಯಂತರವಿಲ್ಲ, ಇಂದು ನಡೆದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿದೆ ಎಂದರು.
ಉಪನ್ಯಾಸ ನೀಡಿದ ಸಾಹಿತಿ ಟಿ.ಡಿ. ತಮ್ಮಣ್ಣಗೌಡ, ಕನ್ನಡ ಭಾಷೆಯಲ್ಲಿ ಗೋವಿಂದ ಪೈ ಮತ್ತು ಕುವೆಂಪು ಬಳಿಕ ಮೂರನೇ ರಾಷ್ಟ್ರಕವಿ ಎಂಬ ಬಿರುದಿಗೆ ಪಾತ್ರರಾಗಿದ್ದು ಜಿ.ಎಸ್. ಶಿವರುದ್ರಪ್ಪನವರು. ಅವರು ನವೊದಯ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬದುಕಿನಲ್ಲಿ ಕೂಡ ವೈಚಾರಿಕತೆ ಹಾಗೂ ವೈಜ್ಞಾನಿಕತೆಯನ್ನು ಅಳವಡಿಸಿಕೊಂಡು ಬಾಳಿದ್ದಾರೆ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಅಳವಡಸಿಕೊಳ್ಳಬೇಕು ಎಂದು ತಿಳಿಸಿದರು.ಬೇಲೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿದರು.
ಸಾಹಿತಿ ಇಂದಿರಮ್ಮ, ಪುರಸಭಾ ಸದಸ್ಯ ಬಿ. ಗಿರೀಶ್, ಎಸ್ಬಿಐ ವ್ಯವಸ್ಥಾಪಕ ಮಹೇಂದ್ರ, ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ಗೌರವ ಕಾರ್ಯದರ್ಶಿಗಳಾದ ಬಿ.ಬಿ. ಶಿವರಾಜ್. ಆರ್.ಎಸ್. ಮಹೇಶ್, ಕೋಶಾಧ್ಯಕ್ಷ ಮಾ.ನ. ಮಂಜೇಗೌಡ, ಸಾಂಸ್ಕೃತಿಕ ಕಾರ್ಯದರ್ಶಿ ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ವಿನುತ , ಮಲ್ಲಿಕಾರ್ಜನ್ ಸೇರಿ ಹಲವರಿದ್ದರು.------
ಬೇಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಲಾವಿದ ಚಂದನ್ ಕುಮಾರ ಪ್ರಾಯೋಜಕತ್ವದಲ್ಲಿ ಮನೆ ಮನೆಗೆ ಸಾಹಿತ್ಯ ಗೋಷ್ಠಿ ಕಾರ್ಯಕ್ರಮವನ್ನು ನಡೆಸಲಾಯಿತು.