ಕನ್ನಡಪ್ರಭ ವಾರ್ತೆ, ತುಮಕೂರುಶಿರಾ ತಾಲೂಕಿನ ಕಗ್ಗಲಡು ಪಕ್ಷಿಧಾಮಕ್ಕೆ ಜನವರಿ, ಫೆಬ್ರವರಿಯಲ್ಲಿ ವಲಸೆ ಬಂದು ಗೂಡು ಕಟ್ಟಿ,ಮೊಟ್ಟೆ ಇಟ್ಟು ಮರಿ ಮಾಡಿ ಪೋಷಣೆ ಮಾಡುಲು ಪಕ್ಷಿಗಳಿಗೆ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಆಹಾರ ಅಭಾವದಿಂದ ನೂರಾರು ಬಣ್ಣದ ಕೊಕ್ಕರೆಗಳು ಗೂಡುಕಟ್ಟದೆ ಹಿಂದಿರುಗಿ ಹೋಗಿರುವುದರಿಂದ ಈ ವರ್ಷ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ.ಕೆರೆ, ಕಟ್ಟೆ, ನದಿಗಳ ಸಿಹಿನೀರಿನ ಜೌಗು ಪ್ರದೇಶಗಳ ಆಳವಿಲ್ಲದ ನೀರಿನಲ್ಲಿ ಮೀನು, ಏಡಿ, ಕಪ್ಪೆ ಇತ್ಯಾದಿ ಜಲಚರಗಳನ್ನು ಭಕ್ಷಿಸುವ ಈ ಪಕ್ಷಿಗಳು ದಕ್ಷಿಣ ಭಾರತ, ಶ್ರೀಲಂಕಾ,ಮಯಮ್ನಾರ್ ಪ್ರದೇಶಗಳಲ್ಲಿ ಕಂಡು ಬರುತ್ತವೆ. ಚಳಿಗಾಲ ಅಂತ್ಯವಾಗುವ ಜನವರಿ, ಫೆಬ್ರವರಿ ತಿಂಗಳಲ್ಲಿ ಸಂತಾನಾಭಿವೃದ್ದಿಗಾಗಿ ಕಳೆದ 27 (1999ರಿಂದ) ವರ್ಷಗಳಿಂದ ಕಗ್ಗಲಡು ಗ್ರಾಮಕ್ಕೆ ವಲಸೆ ಬಂದು ತಮ್ಮ ಸಂತಾನ ಹೆಚ್ಚಿಸಿಕೊಂಡು ಹೋಗುತ್ತಿವೆ. ಈ ವರ್ಷ ಕೆರೆಗಳಲ್ಲಿ ನೀರಿಲ್ಲದಿರುವುದರಿಂದ ಪಕ್ಷಿಗಳ ಬರುವಿಕೆ ವಿಳಂಬವಾಗಿ ಮಾರ್ಚ್ ಮೊದಲ ವಾರದಲ್ಲಿ ಬಂದು ಗೂಡು ಕಟ್ಟಿ,ಮೋಟ್ಟೆ ಇಟ್ಟು ಕಾವು ಕೊಡುವಿಕೆ ಪ್ರಾರಂಭವಾಗಿದೆ.ಈ ವರ್ಷ ಶಿರಾ ತಾಲೂಕಿನಲ್ಲಿ ಮಳೆಯ ಅಭಾವದಿಂದ ಗೌಡಗೆರೆ ಹೋಬಳಿ ಮತ್ತು ಹೂಲಿಕುಂಟೆ ಹೋಬಳಿಯ ಯಾವ ಕೆರೆಗಳಲ್ಲೂ ನೀರಿಲ್ಲದೆ ಸಂಪೂರ್ಣ ಒಣಗಿವೆ. ಈ ಪಕ್ಷಿಗಳ ಮರಿಗಳಿಗೆ ಬೇಕಾದ ಸಣ್ಣ ಸಣ್ಣ ನಾಟಿ ಮೀನುಗಳಾದ ಗಿರ್ಲು, ಕೊರವ, ಪಕ್ಕೆ, ಮಳ್ಳೆಮೀನುಗಳು ಹೇರಳವಾಗಿ ಸಿಗುತ್ತಿದ್ದ ಕೆರೆಗಳಲ್ಲಿ ನೀರಿಲ್ಲದಿರುವುದರಿಂದ ಆಹಾರ ಅಭಾವ ಉಂಟಾಗುತ್ತಿದೆ. ಆಹಾರ ಮತ್ತು ನೀರಿಗಾಗಿ ದೂರದ ಮೊದಲೂರು, ಕಳ್ಳಂಬೆಳ್ಳ ಹಾಗೂ ಗುಬ್ಬಿ ತಾಲೂಕಿನ ಕೆರೆಗಳಿಗೆ ಈ ಪಕ್ಷಿಗಳು ಪಾಳಿಯಲ್ಲಿ ಬಂದು ಹೋಗುತ್ತವೆ. ಅಂದರೆ ಹೆಣ್ಣು ಪಕ್ಷಿ ಗೂಡಿನಲ್ಲಿದ್ದರೆ ಗಂಡು ಪಕ್ಷಿ ಆಹಾರ ಹುಡುಕಿಕೊಂಡು ಹೋಗುತ್ತದೆ, ಗಂಡು ಬಂದಾದ ನಂತರ ಹೆಣ್ಣು ಹೋಗುತ್ತವೆ.ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಳೆದ 27 ವರ್ಷಗಳಿಂದ ಪಕ್ಷಿಧಾಮದ ಅಭಿವೃದ್ಧಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಪಕ್ಷಿಗಳು ಬಂದು ತಮ್ಮ ಸಂತಾನ ಮುದುವರಿಸಬೇಕಾದರೆ ಕಗ್ಗಲಡು ಹಾಗೂ ಸುತ್ತಮುತ್ತಲ ಕೆರೆಗಳಿಗೆ ಹೇಮಾವತಿ ಅಥವಾ ಭದ್ರಾ ಮೇಲ್ದಂಡೆ ಕಾಲುವೆಯ ನೀರನ್ನು ಈ ವರ್ಷವೇ ಹರಿಸಲು ಕ್ರಮ ತೆಗೆದುಕೊಂಡರೆ ಮಾತ್ರ ಮುಂದಿನ ವರ್ಷಗಳಲ್ಲಿ ಅಪರೂಪದ ಅಳಿವಿನಂಚಿನಲ್ಲಿರುವ ಈ ಪಕ್ಷಿಗಳನ್ನು ಕಾಣಲು ಸಾಧ್ಯ.