ಮಕ್ಕಳಲ್ಲಿ ಶಿಸ್ತು, ಕೌಶಲ್ಯ ರೂಪಿಸುವ ಸೈನಿಕ ಶಾಲೆ: ಅರ್ಲೆಕರ್‌

KannadaprabhaNewsNetwork |  
Published : Jun 12, 2026, 02:45 AM IST
ಕಾರ್ಯಕ್ರಮ ಸಂದರ್ಭ | Kannada Prabha

ಸಾರಾಂಶ

ಸೈನಿಕ ಶಾಲೆಗಳು ಮಕ್ಕಳಿಗೆ ಉತ್ತಮ ಕೌಶಲ್ಯ, ತರಬೇತಿ, ಶಿಸ್ತು ಜೊತೆಗೆ ದೇಶ ರಕ್ಷಣೆ ಮಾಡುವ ಪ್ರಜೆಯನ್ನಾಗಿ ರೂಪಿಸುವ ಮಹತ್ತರ ಪಾತ್ರ ವಹಿಸುತ್ತವೆ ಎಂದು ಕೇರಳಂ ಮತ್ತು ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೆಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ: ಸೈನಿಕ ಶಾಲೆಗಳು ಮಕ್ಕಳಿಗೆ ಉತ್ತಮ ಕೌಶಲ್ಯ, ತರಬೇತಿ, ಶಿಸ್ತು ಜೊತೆಗೆ ದೇಶ ರಕ್ಷಣೆ ಮಾಡುವ ಪ್ರಜೆಯನ್ನಾಗಿ ರೂಪಿಸುವ ಮಹತ್ತರ ಪಾತ್ರ ವಹಿಸುತ್ತವೆ ಎಂದು ಕೇರಳಂ ಮತ್ತು ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೆಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೂಡಿಗೆ ಸೈನಿಕ ಶಾಲೆಯಲ್ಲಿ ನಡೆದ ಅಖಿಲ ಭಾರತ ಸೈನಿಕ ಶಾಲೆಗಳ ಅಖಿಲ ಭಾರತ ಅಂತರ ಗುಂಪು ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ಫುಟ್ಬಾಲ್ ಕ್ರೀಡಾಪಟುಗಳ ಗೋಲ್ ಹೊಡೆಯುವ ದೃಢ ಸಂಕಲ್ಪದಂತೆ ಜೀವನದಲ್ಲಿ ಕೂಡ ಒಂದು ನಿರ್ದಿಷ್ಟ ಗುರಿ ಹೊಂದಬೇಕಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯುವಜನತೆಗೆ ನೀಡಿದ ಸಂದೇಶದಂತೆ 2047ರ ವೇಳೆಗೆ ಭವಿಷ್ಯದಲ್ಲಿ ಭಾರತ ವಿಕಸಿತ ಭಾರತವಾಗುತ್ತದೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ಗುರಿಯನ್ನು ಬೆನ್ನಟ್ಟಿ ಶಿಸ್ತು ಕಾರ್ಯದಕ್ಷತೆ ದೇಶ ಪ್ರೇಮ ಜೊತೆಗೆ ಭವಿಷ್ಯದ ಹೆಜ್ಜೆಗಳತ್ತ ಹಿಂದಿನ ಯುವಕರು ಉತ್ತಮ ಪ್ರಜೆಗಳಾಗಿ ಸಾಗಬೇಕಾಗಿದೆ. ಸೈನಿಕ ಶಾಲೆಗಳು ರಾಷ್ಟ್ರೀಯ ಸೇವೆಗಳ ಮೌಲ್ಯಗಳನ್ನು ಗಳಿಸುವ ಯುವಕರನ್ನು ರೂಪಿಸುವ ಕೇಂದ್ರವಾಗಿದೆ ಎಂದರು. ಕ್ರೀಡಾಪಟುಗಳಲ್ಲಿರುವ ಶಿಸ್ತು, ಸಮರ್ಪಣೆ, ತ್ಯಾಗ ಮನೋಭಾವ ಮತ್ತು ಕ್ರೀಡಾ ಸ್ಫೂರ್ತಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಪ್ರತಿಯೊಬ್ಬರೂ ಚೈತನ್ಯಪೂರ್ಣ ಬದುಕು ರೂಪಿಸಿಕೊಳ್ಳುವಂತಾಗಬೇಕು ಎಂದ ಅವರು, ಕೂಡಿಗೆ ಸೈನಿಕ ಶಾಲೆ ಮೂಲಕ ಯಶಸ್ವಿ ಕ್ರೀಡಾಕೂಟ ಆಯೋಜಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು-ಮೈಸೂರು ಸಂಸತ್ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ದೇಶಭಕ್ತಿ ಹಾಗೂ ನಾಯಕತ್ವ ರೂಪಿಸುವಲ್ಲಿ ಸೈನಿಕ ಶಾಲೆಯ ಪಾತ್ರ ಮಹತ್ತರವಾದುದು ಎಂದರು. ಯುವ ಪೀಳಿಗೆಯಲ್ಲಿ ಶಿಸ್ತು ಹಾಗೂ ವ್ಯಕ್ತಿತ್ವ ನಿರ್ಮಾಣ ಸೈನಿಕ ಶಾಲೆಗಳ ಮೂಲಕ ಸೃಷ್ಟಿಯಾಗುತ್ತವೆ ಎಂದರು. ಸೈನಿಕ ಶಾಲೆಯ ಆವರಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ರಾಜ್ಯಪಾಲರಿಗೆ ಕೊಡಗು ಸೈನಿಕ ಶಾಲೆಯ ವಿದ್ಯಾರ್ಥಿಗಳು ಗೌರವ ವಂದನೆ ಸಲ್ಲಿಸಿದರು.ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ಜಿತ್ ಸಿಂಗ್ ಅವರು ರಾಜ್ಯಪಾಲರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.

ಸಮಾರೋಪ ಕಾರ್ಯಕ್ರಮದಲ್ಲಿ ಫ್ಲ್ಯಾಗ್ ರಿಟ್ರೀಟ್ ಪಥ ಸಂಚಲನ ಮೂಲಕ ಕ್ರೀಡಾಕೂಟ ಸಮಾರೋಪಗೊಂಡಿತು. ನಂತರ ರಾಜ್ಯಪಾಲರು ಸೈನಿಕ ಶಾಲೆ ಆವರಣದಲ್ಲಿ ನಿರ್ಮಿಸಲಾದ ಶಾಲಾ ಜಿಮ್ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು.

ನಂತರ ಕೆಡೆಟ್ ಗಳು ಗಣ್ಯರು ಭಾಗವಹಿಸಿದ ತಂಡಗಳೊಂದಿಗೆ ಆಯೋಜಿಸಲಾದ ವಿಶೇಷ ಭೋಜನ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದರು. ಸೈನಿಕ ಶಾಲೆ, ಕೊಡಗು ಪ್ರಾಂಶುಪಾಲರಾದ ಕರ್ನಲ್ ಅಮರ್ಜಿತ್ ಸಿಂಗ್ ಅವರು ಸ್ವಾಗತಿಸಿದರು. ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮಹಮ್ಮದ್ ಶಾಜಿ ವಂದಿಸಿದರು.ಚಂದ್ರಾಪುರ ಸೈನಿಕ ಶಾಲೆ ರನ್ನರ್ಸ್‌: ಪಂದ್ಯದಲ್ಲಿ ಅಂಡರ್ 15 ಬಾಲಕರ ವಿಭಾಗದಲ್ಲಿ ಚಂದ್ರಾಪುರ ಸೈನಿಕ ಶಾಲೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಂಪಾಲ್ ಸೈನಿಕ ಶಾಲೆ ರನ್ನರ್ ಅಪ್‌ ಸ್ಥಾನ ಪಡೆದುಕೊಂಡಿತು. ಅಂಡರ್ 17 ಬಾಲಕಿಯರ ವಿಭಾಗದಲ್ಲಿ ಸುಜನ್ ಫೋರ್ ತಿರಾ ಸೈನಿಕ ಶಾಲೆ ಚಾಂಪಿಯನ್ ಆದರೆ ಚಂದ್ರಪುರ ಸೈನಿಕ ಶಾಲೆ ರನ್ನರ್ ಸ್ಥಾನ ಗಳಿಸಿತು. ಅಂಡರ್ 17 ಬಾಲಕರ ವಿಭಾಗದಲ್ಲಿ ಇಂಪಾಲ್ ಸೈನಿಕ ಶಾಲೆ ಚಾಂಪಿಯನ್, ಆತಿಥೇಯ ಕೊಡಗು ಸೈನಿಕ ಶಾಲೆ ರನ್ನರ್ ಸ್ಥಾನ ಪಡೆದಿದೆ. ಅತ್ಯುತ್ತಮ ಆಟಗಾರ ಅತ್ಯುತ್ತಮ ಗೋಲ್ ಕೀಪರ್ ಮತ್ತು ಗರಿಷ್ಠ ಗೋಲು ಗಳಿಸಿದ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಪು-ಲೋಕ ಕಲ್ಯಾಣ ಮೇಳ : 11 ಮಂದಿಗೆ ಸಾಲ ವಿತರಣೆ
ತಾಯಿಯ ಅರಸಿ 26 ವರ್ಷ ಕಳೆದು ತವರಿಗೆ ಮರಳಿದ ಯುವಕ!