ಕುಂದಾಪುರ: ಆಧುನಿಕ ಕೃಷಿ ಪದ್ಧತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಲ್ಲ ಐಒಟಿ ಆಧಾರಿತ ಸ್ಮಾರ್ಟ್ ಹೈಡ್ರೋಪೋನಿಕ್ಸ್ ತಂತ್ರಜ್ಞಾನವನ್ನು ಮೂಡ್ಲಕಟ್ಟೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ.ಈ ತಂತ್ರಜ್ಞಾನದ ಸಂಶೋಧನಾ ಪ್ರಬಂಧವು ಜಾಗತಿಕ ಮಟ್ಟದ ಪ್ರತಿಷ್ಠಿತ ದಿ ಇಂಟರ್ನ್ಯಾಷನಲ್ ಜರ್ನಲ್ ಆಫ್ ಇನ್ಫರ್ಮ್ಯಾಟಿಕ್ಸ್ ಅಂಡ್ ಕಮ್ಯುನಿಕೇಶನ್ ಟೆಕ್ನಾಲಜಿಯಲ್ಲಿ ಪ್ರಕಟಗೊಂಡಿದೆ.
ಮಣ್ಣಿಲ್ಲದೆ ಕೇವಲ ಪೋಷಕಾಂಶಯುಕ್ತ ನೀರನ್ನು ಬಳಸಿ ಗಿಡಗಳನ್ನು ಬೆಳೆಸುವ ಪದ್ಧತಿಯೇ ಹೈಡ್ರೋಪೋನಿಕ್ಸ್. ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯು ನ್ಯೂಟ್ರಿಯೆಂಟ್ ಫಿಲ್ಮ್ ಟೆಕ್ನಿಕ್ (ಎನ್ಎಫ್ಟಿ)ನ್ನು ಬಳಸುತ್ತದೆ. ಅಂದರೆ, ಗಿಡಗಳ ಬೇರುಗಳಿಗೆ ನಿರಂತರವಾಗಿ ಪೋಷಕಾಂಶ ಭರಿತ ನೀರು ತೆಳುವಾದ ಪದರದಂತೆ ಹರಿಯುವಂತೆ ಮಾಡಲಾಗುತ್ತದೆ. ಇದಕ್ಕೆ ಐಒಟಿ ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ, ಕೃಷಿಕರು ತಾವಿದ್ದ ಜಾಗದಿಂದಲೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಗಿಡಗಳಿಗೆ ಬೇಕಾದ ನೀರಿನ ಪ್ರಮಾಣ, ತಾಪಮಾನ ಮತ್ತು ಪೋಷಕಾಂಶಗಳ ಮಟ್ಟವನ್ನು ನಿಖರವಾಗಿ ನಿಯಂತ್ರಿಸಲು ಸಾಧ್ಯವಿರುವುದು ಈ ಅವಿಷ್ಕಾರದ ವಿಶೇಷತೆಯಾಗಿದೆ.
ವಿದ್ಯಾರ್ಥಿಗಳಿಗೆ ವಿಭಾಗ ಮುಖ್ಯಸ್ಥ ಡಾ. ವರುಣ್ ಕುಮಾರ್ ಹಾಗೂ ಪ್ರೊ. ಅಕ್ಷತಾ ನಾಯ್ಕ್ ಅವರು ಮಾಗದರ್ಶನ ಮಾಡಿದ್ದರು. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಇಡೀ ಬೋಧಕ ವರ್ಗವು ವಿದ್ಯಾರ್ಥಿನಿಯರ ಈ ಸಾಧನೆಯನ್ನು ಶ್ಲಾಘಿಸಿದ್ದು, ಇವರ ಸಂಶೋಧನೆಯು ಭವಿಷ್ಯದ ಸುಸ್ಥಿರ ಕೃಷಿಗೆ ದೊಡ್ಡ ಕೊಡುಗೆಯಾಗಲಿದೆ ಎಂದು ಹಾರೈಸಿದ್ದಾರೆ.