ಶಿಗ್ಗಾಂವಿ: ಕನ್ನಡ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೀಡಿದ ಕೊಡುಗೆ ಅಪಾರ ಹಾಗೂ ಇಂದಿನ ತಲೆಮಾರಿಗೂ ಆದರ್ಶಪ್ರಾಯವಾಗಿದೆ ಎಂದು ಸ್ನೇಹಲತಾ ಕುನ್ನೂರ ಅವರು ಅಭಿಪ್ರಾಯಪಟ್ಟರು.ತಾಲೂಕಿನ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಲಲಿತಾ ಹಿರೇಮಠ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಸಾಪ ಹೋಬಳಿ ಅಧ್ಯಕ್ಷೆ ಲಲಿತಾ ಹಿರೇಮಠ ಮಾತನಾಡಿ, ನಾಲ್ವಡಿಯವರು ಕೇವಲ ಆಡಳಿತಗಾರರಷ್ಟೆ ಅಲ್ಲದೆ ಸಾಹಿತ್ಯ ಮತ್ತು ಸಾಹಿತಿಗಳ ಪರಮ ಆರಾಧಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣಿಕರ್ತರಾದ ಅವರು, ಪುಸ್ತಕಗಳ ರಚನೆ, ಕಾವ್ಯಗಳ ಪರಿಚಯ ಹಾಗೂ ಗ್ರಂಥಗಳ ಭಾಷಾಂತರಕ್ಕೆ ಅಪಾರ ಧನಸಹಾಯ ನೀಡಿ ಪ್ರೋತ್ಸಾಹಿಸಿದ್ದರು. ಜನಾನುರಾಗಿಯಾಗಿದ್ದ ಅವರು ಇಂದಿಗೂ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದರು.ಶಿಕ್ಷಕ ಮಾಂತೇಶ ನಾಯ್ಕೋಡಿ ಮಾತನಾಡಿ, ಮೈಸೂರು ಸಂಸ್ಥಾನದ ೨೪ನೇ ಮಹಾರಾಜರಾಗಿದ್ದ ನಾಲ್ವಡಿಯವರ ಕಾಲವನ್ನು ಮೈಸೂರಿನ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಸಾಹಿತ್ಯ ಹಾಗೂ ಕಲೆ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಅವರು ಭದ್ರ ಬುನಾದಿ ಹಾಕಿದರು. ಸಾಮಾಜಿಕ ನ್ಯಾಯಕ್ಕಾಗಿ ಮಿಲ್ಲರ್ ಆಯೋಗ ರಚನೆ, ಸ್ಥಳೀಯ ಸಂಸ್ಥೆಗಳ ಸ್ಥಾಪನೆ ಹಾಗೂ ಆಡಳಿತ ವಿಕೇಂದ್ರೀಕರಣದ ಮೂಲಕ ಜನಸಾಮಾನ್ಯರಿಗೆ ಅಧಿಕಾರ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಮುಖ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ, ಜಿ.ಎಚ್. ಹಿರೇಮಠ, ಪದಾಧಿಕಾರಿಗಳಾದ ರಮೇಶ ಹರಿಜನ, ಶಶಿಕಾಂತ ರಾಹೋಡ, ಶಂಭು ಕೇರಿ, ಸಿದ್ದಪ್ಪ ಮಸಳಿ, ಆನಂದಗೌಡ ಹಿರೇಗೌಡ್ರ, ಹೊನ್ನಪ್ಪ ಕರೇಕಣ್ಣಮನವರ, ಪ್ರಕಾಶ ಮುಲ್ಲೂರ, ರಾಘವೇಂದ್ರ ದಾಸರ, ಮಾರುತಿ ಇತರರಿದ್ದರು.