ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಅಮ್ಮನಿಗೆ ಚಕ್ಕುಲಿ, ಮೈಸೂರು ಪಾಕ್ ಇಷ್ಟ:
ಪುತ್ರಿ ಅನುಸೂಯಾ ಮಂಜುನಾಥ್ ಮಾತನಾಡಿ, ಒಕ್ಕಲಿಗ ಸಂಪ್ರದಾಯದಂತೆ ನಾವು ಮಣ್ಣಲ್ಲಿ ಇಟ್ಟ ಮೇಲೆ ಮೂರು ದಿನದ ಹಾಲು ತುಪ್ಪ ಕಾರ್ಯ ಮಾಡುತ್ತೇವೆ. ಅಮ್ಮನಿಗೆ ಚಕ್ಕುಲಿ, ಮೈಸೂರು ಪಾಕ್ ಇಷ್ಟವಾದ ಸಿಹಿ. ಆದ್ದರಿಂದ ಮನೆಯಲ್ಲಿ ವಿಶೇಷವಾಗಿ ತಯಾರಿಸಿ ತಂದು ಸಮರ್ಪಣೆ ಮಾಡಿದ್ದೇವೆ. ಶ್ರದ್ಧಾಭಕ್ತಿಯಿಂದ ಹಾಲು, ತುಪ್ಪ ಬಿಟ್ಟು ಸದ್ಗತಿ ಸಿಗಲಿ ಎಂದು ನಮ್ಮ ಕುಟುಂಬದವರು, ಎಲ್ಲರೂ ಪ್ರಾರ್ಥನೆ ಮಾಡಿದ್ದಾರೆ. ವಿಷ್ಣು ಸಹಸ್ರನಾಮ, ರುದ್ರ ಚಮಕ ಹೇಳಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹನ್ನೊಂದು ದಿನ ಪಾರಾಯಣ ಮಾಡಬೇಕೆಂದು ಅಪ್ಪ( ದೇವೇಗೌಡರು) ಸಂಕಲ್ಪ ಮಾಡಿಸಿದ್ದಾರೆ. ಆದ್ದರಿಂದ ನಿರಂತರವಾಗಿ ಹನ್ನೊಂದು ದಿನ ಪಾರಾಯಣ ನಡೆಯುತ್ತದೆ. ಇವತ್ತು ಆ ಪಾರಾಯಣ ಆದ ಮೇಲೆ ಧೂಪ, ದೀಪಗಳನ್ನು ಮಾಡಿ ಹಾಲು, ತುಪ್ಪ ಬಿಟ್ಟು ನಮ್ಮ ಕಾರ್ಯಕ್ರಮವನ್ನ ಪ್ರಶಾಂತವಾಗಿ, ಸುಸೂತ್ರವಾಗಿ ಮಾಡಿದ್ದೇವೆ ಎಂದು ಕಂಬನಿ ಮಿಡಿಯುತ್ತಾ ನುಡಿದರು.ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ :
ಇವತ್ತು ನಮ್ಮ ತಾಯಿ ನಮ್ಮನ್ನು ಅಗಲುವುದಕ್ಕೆ ಒಂದೂವರೆ ವರ್ಷದ ಹಿಂದಿನ ಘಟನೆ(ಪ್ರಜ್ವಲ್ ಪ್ರಕರಣ) ಕಾರಣ. ಅವರು ಅಂದಿನಿಂದಲೇ ಹಾಸಿಗೆ ಹಿಡಿದಿದ್ದು, ಅಲ್ಲಿಂದ ಇಲ್ಲಿವರೆಗೂ ಅವರು ಸಾಕಷ್ಟು ಹಿಂಸೆ ಪಟ್ಟಿದ್ದಾರೆ. ಹಂತಹಂತವಾಗಿ ಅವರ ನೆನಪಿನ ಶಕ್ತಿಯು ಕೂಡ ಕಡಿಮೆ ಆಯಿತು. ಅವರ ನೆನಪಿನ ಶಕ್ತಿ ಕಡಿಮೆಯಾದರೂ ಯಾರಾದರೂ ಮನೆಗೆ ಬಂದರೆ ಊಟ ಮಾಡಿ ಎಂದು ಹೇಳುತ್ತಿದ್ದರು. ನನ್ನನ್ನ ಮತ್ತೆ ನನ್ನ ಇಬ್ಬರು ತಂಗಿಯರನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದರು. ನಾನು ಮನೆಗೆ ಹೋದಾಗ ನನ್ನ ಬಗ್ಗೆ ವಿಚಾರಿಸುತ್ತಿದ್ದರು. ಜನರಿಗೆ ಒಳ್ಳೆ ಕೆಲಸ ಮಾಡಪ್ಪ ಎಂದು ಹೇಳುತ್ತಿದ್ದರು. ಆದರೆ ಎರಡು ಮೂರು ಬಾರಿ ಕುಟುಂಬದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಜ್ವಲ್ನನ್ನು ಯಾವಾಗ ಕರೆದುಕೊಂಡು ಬರ್ತೀಯ ಎಂದು ಕೇಳಿದ್ದರು. ಇವತ್ತು ನನಗೆ ಅದರ ಬಗ್ಗೆ ನೋವಿದೆ. ಅಂತಹ ಸನ್ನಿವೇಶಗಳನ್ನು ತಾಳಲಾರದೆ ಇಂಥ ದಿನಗಳನ್ನು ನಾವು ಕಾಣಬೇಕಾಯಿತು. ಇನ್ನೂ ಮೂರ್ನಾಲ್ಕು ವರ್ಷಗಳು ಈ ದಿನ ಈ ದಿನವನ್ನು ನಾವು ನೋಡಲಿಕ್ಕೆ ಸಾಧ್ಯ ಇರಲಿಲ್ಲ. ಆ ದೇವರು ತೀರ್ಮಾನಕ್ಕೆ ನಾವೆಲ್ಲರೂ ತಲೆಬಾಗಬೇಕು ಎಂದರು. ನಮ್ಮ ತಂದೆಯವರು ಇನ್ನೂ ಏಳೆಂಟು ವರ್ಷ ಇರ್ತಾರೆ ಅಂದುಕೊಂಡಿದ್ದೇವೆ. ಆದರೆ ನಮಗೆ ಭಯ ಇರುವುದು ನಮ್ಮ ತಾಯಿಯ ಅವರು ಜೊತೆ ಆತ್ಮೀಯ ಭಾವನೆ ಇಟ್ಟುಕೊಂಡಿದ್ದರು. ಆ ಕೊರಗಿನಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಗಳು ಆಗಬಹುದು ಎನ್ನುವ ಭಯವೂ ಇದೆ ನಮಗೆ. ಆದ್ದರಿಂದ ಅವರ ಜೊತೆ ಯಾರಾದರೂ ಒಬ್ಬರು ಮಾನಸಿಕವಾಗಿ ಧೈರ್ಯ ತುಂಬಲು ಕುಟುಂಬದವರು ಇರಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದರು.
ಮೂರು ದಿನಗಳ ಹಾಲು, ತುಪ್ಪದ ಕಾರ್ಯದಲ್ಲಿ ಶಾಸಕರಾದ ಸುರೇಶ್ ಗೌಡ, ಬಾಲಕೃಷ್ಣ, ಎ.ಮಂಜು, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಎಂಎಲ್ಸಿ ಡಾ. ಸೂರಜ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸೇರಿದಂತೆ ಹಲವಾರು ಶಾಸಕರು, ಮಾಜಿ ಶಾಸಕರು ಹಾಗೂ ಸಾವಿರಾರು ಜನರು ಭಾಗವಹಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿ ಪಾರ್ಥಿಸಿದರು.
ಹೊಳೆನರಸೀಪುರ ತಾ. ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಕ್ಯಾತನಹಳ್ಳಿ ಸಮೀಪ ಚನ್ನಮ್ಮನವರ ಸಮಾಧಿ ಸ್ಥಳದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು, ಪುತ್ರರಾದ ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ಅನಸೂಯ, ಎಚ್.ಡಿ.ಶೈಲಜಾ ಹಾಗೂ ಸೊಸೆಯಂದಿರಾದ ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ, ಕವಿತಾ, ಸೌಮ್ಯ ಹಾಗೂ ಕುಟುಂಬ ಸದಸ್ಯರು ಹಾಲು ತುಪ್ಪ ಕಾರ್ಯ ಅಂಗವಾಗಿ ಶ್ರದ್ಧಾ ಭಕ್ತಿಯಿಂದ ಹಾಲು, ತುಪ್ಪ ಬಿಟ್ಟು ಸದ್ಗತಿ ಸಿಗಲಿ ಪಾರ್ಥಿಸಿದರು.