ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ 150ಎ ಗೆ ಅಂಟಿಕೊಂಡಂತಿರುವ ಬೇವಿನ ಮರದಲ್ಲಿ ಕಳೆದೊಂದು ವಾರದಿಂದ ಬಿಳಿ ಹಾಲು ರೂಪದ ದ್ರವ ಜಿನುಗುತ್ತಿದೆ. ಜನತೆ ಇದನ್ನು ಪವಾಡವೆಂದೇ ನಂಬಿ ಪೂಜಿಸಿ ಭಕ್ತಿಯನ್ನು ಮೆರೆಯೆಯುತ್ತಿದ್ದಾರೆ. ಈ ದೃಶ್ಯ ನೋಡಲು ತಂಡೋಪ ತಂಡವಾಗಿ ಆಗಮಿಸುತ್ತಿದ್ದು ಸ್ಥಳವು ಪವಾಡ ಸದೃಶ ಸ್ಥಳವಾಗಿ ಮಾರ್ಪಾಟಾಗಿದೆ.
ತಾಲೂಕಿನ ಬಿಜಿಕೆರೆ, ಮುತ್ತಿಗಾರಹಳ್ಳಿ, ಚಳ್ಳಕೆರೆ ತಾಲೂಕಿನ ಬುಕ್ಲೂರಹಳ್ಳಿ, ಹಿರೇಹಳ್ಳಿ, ರುದ್ರಮ್ಮನಹಳ್ಳಿ, ಚಿಕ್ಕಹಳ್ಳಿ ಸೇರಿದಂತೆ ವಿವಿಧ ಕಡೆಯ ದೂರದೂರಿನಿಂದ ಆಗಮಿಸಿ ಮರಕ್ಕೆ ಸೀರೆ ತೊಡಿಸಿ, ಹೂಗಳನ್ನು ಹಾಕಿ, ಕಾಯಿ ಒಡೆದು ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ಜನ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಸ್ಥಳವನ್ನು ಜೆಸಿಬಿ ಯಂತ್ರದಿಂದ ಸ್ವಚ್ಚಗೊಳಿಸಿ ಹಸನುಗೊಳಿಸಲಾಗಿದೆ.ಮತ್ತೊಂದೆಡೆ ಕೆಲವರು ಜ್ಯೋತಿಷಿಗಳ ಬಳಿ ಶಾಸ್ತ್ರ ಕೇಳಿದ್ದು ಇದು ದೇವಿ ಪವಾಡವಾಗಿದೆ. ಇದಕ್ಕೆ ವಿಶೇಷ ಪೂಜೆ ಮಾಡಿ ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಬೇವಿನ ಮರದಲ್ಲಿ ಜಿನುಗುತ್ತಿರುವ ಹಾಲು ರೂಪದ ದ್ರವವನ್ನು ಕಣ್ತುಂಬಿಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ.