ಬೆಂಗಳೂರು : ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಆರೋಪಿ ಮಾಸ್ಕ್ಮ್ಯಾನ್ ಚಿನ್ನಯ್ಯ ಹೈಕೋರ್ಟ್ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ ಎಲ್ಲ ವ್ಯಕ್ತಿಗಳನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ವ್ಯಾಪ್ತಿಗೆ ಒಳಪಡಿಸಬೇಕು. ಎಸ್ಐಟಿ ಮಧ್ಯಂತರ ವರದಿಯನ್ನು ಸಲ್ಲಿಸಬೇಕು ಎಂದು ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಆಗ್ರಹಿಸಿದೆ.
ಬುಧವಾರ ಈ ಕುರಿತು ನಗರದ ಖಾಸಗಿ ಹೋಟೆಲ್ನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಮಿತಿಯ ಚಕ್ರವರ್ತಿ ಸೂಲಿಬೆಲೆ, ವಸಂತ ಗಿಳಿಯಾರ್ ಹಾಗೂ ವಿಕಾಸ್ ಪುತ್ತೂರು ಒತ್ತಾಯಿಸಿದರು.
ಷಡ್ಯಂತ್ರದ ಕುರಿತು ಮೊದಲೇ ಹೇಳಿದ್ದೆವು
ಧರ್ಮಸ್ಥಳ ವಿರುದ್ಧ ನಡೆಯುತ್ತಿದ್ದ ಷಡ್ಯಂತ್ರದ ಕುರಿತು ಮೊದಲೇ ಹೇಳಿದ್ದೆವು. ಅದು ಈಗ ನಿಜವಾಗಿದೆ. ದೂರುದಾರ ಚಿನ್ನಯ್ಯ ಹೈಕೋರ್ಟ್ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಹಲವು ಸಂಗತಿಗಳು ಬಹಿರಂಗವಾಗಿವೆ. ನಟ ಪ್ರಕಾಶ್ ರಾಜ್ ಅವರ ಹೆಸರೂ ಅದರಲ್ಲಿ ಉಲ್ಲೇಖವಾಗಿದೆ. ಇಂದು ಸ್ವತಃ ಪ್ರಕಾಶ್ ರಾಜ್ ಅವರೇ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದು ನಿಜವೆಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ತಕ್ಷಣ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.
ನಿರ್ದೇಶನ ನೀಡುತ್ತಿದ್ದವರು ಯಾರು?:
ಎಸ್ಐಟಿ ತನಿಖೆ ವೇಳೆ ಆರೋಪಿ ಚಿನ್ನಯ್ಯ ಮುಖಕ್ಕೆ ಮಾಸ್ಕ್ ಧರಿಸಿದ್ದ. ಆ ಮಾಸ್ಕ್ ಎಸ್ಐಟಿ ಹಾಕಿರಲಿಲ್ಲ. ಹೊರಗಿನಿಂದ ನಿರ್ದೇಶನ ನೀಡುತ್ತಿದ್ದವರು, ತಾನು ಶವಗಳನ್ನು ಹೂತಿದ್ದೇನೆ ಎಂದು ಹೇಳಿದ ಸ್ಥಳಗಳನ್ನು ತೋರಿಸುವಾಗಲೂ ಚಿನ್ನಯ್ಯ ಕಿವಿಯಲ್ಲಿ ಇಯರ್ಫೋನ್ ಧರಿಸಿದ್ದ. ಆತನಿಗೆ ಇಯರ್ ಫೋನ್ ಮೂಲಕ ನಿರ್ದೇಶನ ನೀಡುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ. ನಿರ್ದೇಶನ ನೀಡುತ್ತಿದ್ದವರು ಯಾರು ಎಂಬುದನ್ನು ಪತ್ತೆ ಮಾಡಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
