ಮಾಗಡಿ: ಬಮೂಲ್ನಿಂದ ಪ್ರಥಮ ಬಾರಿಗೆ ರೈತರಿಗೆ ರಿಯಾಯಿತಿ ದರದಲ್ಲಿ ಹಾಲು ಕರೆಯುವ ಯಂತ್ರ ವಿತರಿಸಲಾಗುತ್ತಿದೆ ಎಂದು ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ಹೇಳಿದರು
ಮಾಗಡಿ: ಬಮೂಲ್ನಿಂದ ಪ್ರಥಮ ಬಾರಿಗೆ ರೈತರಿಗೆ ರಿಯಾಯಿತಿ ದರದಲ್ಲಿ ಹಾಲು ಕರೆಯುವ ಯಂತ್ರ ವಿತರಿಸಲಾಗುತ್ತಿದೆ ಎಂದು ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ಹೇಳಿದರು.
ಪಟ್ಟಣದ ಹೊಸಪೇಟೆಯ ಬಮೂಲ್ ಕಚೇರಿಯಲ್ಲಿ ಆವರಣದಲ್ಲಿ 20ಕ್ಕೂ ಹೆಚ್ಚು ರೈತ ಫಲಾನುಭವಿಗಳಿಗೆ ಹಾಲು ಕರೆಯುವ ಯಂತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಕೈಯಿಂದ ಹಾಲು ಕರೆಯುವುದರಿಂದ ರೈತರಿಗೆ ಸಮಯದ ಅಭಾವವಾಗುತ್ತಿದೆ. ಅದನ್ನು ಮನಗಂಡು ಬಮೂಲ್, 40 ಸಾವಿರ ಮೌಲ್ಯದ ಹಾಲು ಕರೆಯುವ ಯಂತ್ರವನ್ನು 22 ಸಾವಿರ ಸಬ್ಸಿಡಿ ನೀಡಿ, ಕೇವಲ 18 ರು.ಗಳಿಗೆ ನೀಡುತ್ತಿದೆ. ಪ್ರಸ್ತುತ 39 ಜನ ರೈತರು ಡಿಡಿ ಕಟ್ಟಿದ್ದು, ಮೊದಲ ಹಂತದಲ್ಲಿ 20 ಯಂತ್ರಗಳನ್ನು ವಿತರಿಸಲಾಗಿದೆ. ಉಳಿದ ಯಂತ್ರಗಳನ್ನು ಮುಂದಿನ ವಾರದಲ್ಲಿ ವಿತರಿಸಲಾಗುವುದು. ಮಳೆಗಾಲ ಪ್ರಾರಂಭವಾಗಿದ್ದು, ಹಸುಗಳಿಗೆ ಹಸಿರು ಮೇವಿನ ಉತ್ಪಾದನೆ ಹೆಚ್ಚಿಸಲು ಬಮೂಲ್ ರೈತರಿಗೆ ಉಚಿತ ಜೋಳ ವಿತರಿಸುತ್ತಿದೆ ಎಂದು ತಿಳಿಸಿದರು.
ಕೊಲ್ಲಿ ರಾಷ್ಟ್ರಗಳ ಯುದ್ಧದ ಹಿನ್ನೆಲೆಯಲ್ಲಿ ಉಂಟಾದ ಬೆಲೆ ಏರಿಕೆಯಿಂದ 2,650 ಮೌಲ್ಯದ ರಬ್ಬರ್ ಮ್ಯಾಟ್ಗಳ (ಶೇ.50ರಷ್ಟು ರಿಯಾಯಿತಿ ದರ) ಪೂರೈಕೆ ವಿಳಂಬವಾಗಿದ್ದು, ಮುಂದಿನ 15 ದಿನಗಳಲ್ಲಿ ಮಾಗಡಿಗೆ ಅಗತ್ಯವಿರುವ 6,000 ರಿಂದ 7,000 ಮ್ಯಾಟ್ಗಳನ್ನು ಒದಗಿಸಲಾಗುವುದು ಎಂದರು.
ನಾಟಿ ಹಸುವಿನ ಹಾಲಿಗೆ ಪ್ರೋತ್ಸಾಹ:
ಬಮೂಲ್ ವತಿಯಿಂದ ನಾಟಿ ಹಸುಗಳ ಖರೀದಿಗೆ ಒಟ್ಟು 80 ಸಾವಿರ ವೆಚ್ಚದಲ್ಲಿ ಬಮೂಲ್ 40 ಸಾವಿರ ಪ್ರೋತ್ಸಾಹ ಧನ ನೀಡಲಿದ್ದು, ನಾಟಿ ಹಸುವಿನ ಹಾಲಿನ ದರ ಹೆಚ್ಚಿಸುವ ಚಿಂತನೆ ಇದೆ. ಅಲ್ಲದೆ ಮಜ್ಜಿಗೆ ಉತ್ಪಾದನೆಗೆ ನಾಟಿ ಹಸುವಿನ ಹಾಲನ್ನು ಬಳಸುವ ತಾಂತ್ರಿಕ ವ್ಯವಸ್ಥೆಯನ್ನು ಬಮೂಲ್ ಮಾಡುತ್ತಿದೆ ಎಂದರು.
ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಮತ್ತು ಶಾಸಕರಾದ ಬಾಲಕೃಷ್ಣ ಅವರ ನೇತೃತ್ವದಲ್ಲಿ ಮಾಗಡಿ ಅಥವಾ ಚನ್ನಪಟ್ಟಣ ಭಾಗದಲ್ಲಿ ಬಮೂಲ್ ನೂತನ ಉತ್ಪಾದನಾ ಯುನಿಟ್ (ಐಸ್ಕ್ರೀಂ ಅಥವಾ ಪಶು ಆಹಾರ ಘಟಕ) ಸ್ಥಾಪಿಸಲು ಜಾಗದ ಪರಿಶೀಲನೆ ನಡೆಸುತ್ತಿದ್ದು, ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗಲಿವೆ. ಇದಕ್ಕಾಗಿ ತಾಲೂಕಿನ ಸಾತನೂರು ವ್ಯಾಪ್ತಿಯ ಬೈರನಹಳ್ಳಿ ಮುಖ್ಯ ರಸ್ತೆ ಬಳಿ ಸರ್ಕಾರಿ ಜಮೀನು ಮೀಸಲಿಟ್ಟಿದ್ದು ಬಮೂಲ್ ಅಧ್ಯಕ್ಷರು ಮಾಗಡಿಗೆ ಒಂದು ಘಟಕ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಈ ವೇಳೆ ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬಮೂಲ್ ಉಪ ವ್ಯವಸ್ಥಾಪಕರಾದ ಡಾ.ಅಜಯ್, ಸೂಪರ್ ವೈಸರ್ಗಳಾದ ರಂಗಸ್ವಾಮಿ, ಮಂಜುಳಾ, ಪ್ರಮೋದ್, ಚೆಲುವರಂಗಯ್ಯ, ಕೃಷಿ ಅಧಿಕಾರಿ ದಿವ್ಯ, ಗಣೇಶ್ ಇತರರು ಭಾಗವಹಿಸಿದ್ದರು.
(ಫೋಟೋ ಕ್ಯಾಪ್ಞನ್)
ಮಾಗಡಿಯ ಹೊಸಪೇಟೆ ಬಮೂಲ್ ಕಚೇರಿ ಆವರಣದಲ್ಲಿ 20ಕ್ಕೂ ಹೆಚ್ಚು ರೈತರಿಗೆ ಹಾಲು ಕರೆಯುವ ಯಂತ್ರವನ್ನು ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ವಿತರಣೆ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.