ಕನ್ನಡಪ್ರಭ ವಾರ್ತೆ ಮಂಡ್ಯ
ಸಕ್ಕರೆ ಕಾರ್ಖಾನೆ ವೃತ್ತದಲ್ಲಿ ಸೇರಿದ ಆಟೋ ಚಾಲಕರು, ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಮೆರವಣಿಗೆ ನಡೆಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ನಗರದಲ್ಲಿ ಸುಮಾರು ೩,೫೦೦ ಆಟೋಗಳಿವೆ. ಈಗಾಗಲೇ ಆಟೋಗಳ ಸಂಖ್ಯೆ ಹೆಚ್ಚಿರುವುದರಿಂದ ದುಡಿಮೆ ಕಡಿಮೆಯಾಗುತ್ತಿದೆ. ಪರಿಣಾಮ ಚಾಲಕರ ನಡುವೆ ಅತೃಪ್ತಿ, ವೈಮನಸ್ಸು, ಬಾಡಿಗೆಗೆ ಗುದ್ಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಕೆಲವರು ಅನಧಿಕೃತವಾಗಿ ವೈಟ್ಬೋರ್ಡ್ ಬೈಕ್ಗಳು, ಓಲಾ ಮತ್ತು ಆಪೆ ಆಟೋಗಳಲ್ಲಿ ಸಾರ್ವಜನಿಕರ ಸಂಚಾರ ಮಾಡುವ ಕೆಲಸಕ್ಕೆ ಬಳಸುತ್ತಿದ್ದಾರೆ. ಈ ಸಂಬಂಧ ಸಾರಿಗೆ ಅಧಿಕಾರಿಗಳು ದಂಡ ವಿಧಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಅಂತೆಯೇ ಮಂಡ್ಯ ನಗರದಲ್ಲಿ ಸುಮಾರು ೧೦೦ ಎಲೆಕ್ಟ್ರಿಕ್ ಆಟೋಗಳ ಸಂಚಾರವಿದೆ. ಇವುಗಳಿಗೆ ಜಿಲ್ಲಾದ್ಯಂತ ಓಡಾಡಲು ಅನುಮತಿ ಇದೆ. ಆದರೆ, ನಮ್ಮ ಆಟೋಗಳಿಗೆ ನಗರದಿಂದ ೧೨ ಕಿ.ಮೀ ವ್ಯಾಪ್ತಿಯವರೆಗೆ ಮಾತ್ರ ಮಿತಿ ನೀಡಿರುವುದರಿಂದ ಅನ್ಯಾಯವಾಗುತ್ತಿದೆ. ಆದ್ದರಿಂದ ನಮಗೂ ಜಿಲ್ಲಾದ್ಯಂತ ಸಂಚರಿಸಲು ಅವಕಾಶ ಮಾಡಿಕೊಡಬೇಕು. ಬಾಡಿಗೆ ಮನೆಯಲ್ಲಿದ್ದುಕೊಂಡು ಬದುಕು ನಡೆಸುತ್ತಿರುವ ಆಟೋ ಚಾಲಕರಿಗೆ ಸರ್ಕಾರದಿಂದ ನಿವೇಶನ ಕೊಡಿಸಬೇಕು. ನಗರಕ್ಕೆ ಸೇರಿರದ ಆಟೋಗಳು ನಗರದೊಳಗೆ ಬಾಡಿಗೆ ಹೊಡೆಯುತ್ತಿದ್ದು, ಇವುಗಳ ವಿರುದ್ಧ ಕ್ರಮ ವಹಿಸಬೇಕು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಕನಿಷ್ಠ ಬಾಡಿಗೆ ದರವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.