ಕನ್ನಡಪ್ರಭ ವಾರ್ತೆ ತುಮಕೂರುಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಭಾನುವಾರ ಸಿದ್ಧಗಂಗಾ ಮಠದ ಸಾವಿರಾರು ವಿದ್ಯಾರ್ಥಿಗಳು ವೀಕ್ಷಿಸಿದರು. ಮಠದ ಆವರಣದಲ್ಲಿ ಬೃಹತ್ ಎಲ್ಇಡಿ ಪರದೆ ಅಳವಡಿಸಿ ಮನ್ ಕಿ ಬಾತ್ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಇಡೀ ಕಾರ್ಯಕ್ರವನ್ನು ವಿದ್ಯಾರ್ಥಿಗಳು ಶಿಸ್ತಿನಿಂದ ಕುಳಿತು ವೀಕ್ಷಿಸಿದರು.ಮಕ್ಕಳ ಜೊತೆ ಶ್ರೀ ಮಠದ ಕಿರಿಯ ಶ್ರೀಗಳಾದ ಶಿವಸಿದ್ಧೇಶ್ವರ ಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಅವರೂ ಪ್ರಧಾನಿಯವರ ಮನದಾಳದ ಮಾತುಗಳ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ ಮಾಡಿದರು.ನಂತರ ಮಾತನಾಡಿದ ಶ್ರೀಮಠದ ಕಿರಿಯ ಶ್ರೀಗಳಾದ ಶಿವಸಿದ್ಧೇಶ್ವರ ಸ್ವಾಮೀಜಿ, ಸಾವಿರಾರು ವರ್ಷಗಳ ನಮ್ಮ ದೇಶದ ಸಾಂಸ್ಕೃತಿಕ ಪರಂಪರೆ ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರನ್ನು ಉದ್ದೇಶಿಸಿ ಮನ್ ಕಿ ಬಾತ್ನಲ್ಲಿ ಮಾತನಾಡಿದರು. ದೇಶದ ಬೆಳವಣಿಗೆೆ, ಅಭಿವೃದ್ಧಿ ಮಾನವ ಸಂಪನ್ಮೂಲದಿಂದ ಸಾಧ್ಯ. ಈ ಕಾರಣಕ್ಕೆ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು, ದೇಶಪ್ರೇಮ ಬೆಳೆಸಿಕೊಂಡು ದೇಶದ ಪರಂಪರೆ ಉಳಿಸಬೇಕು ಎಂದು ಮೋದಿಯವರು ಕರೆ ನೀಡಿದರು ಎಂದರು. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲ ಎಷ್ಟು ಮುಖ್ಯವೋ ಸ್ವದೇಶಿ ವಸ್ತುಗಳನ್ನು ಬಳಸಿ ಉತ್ಪನ್ನಗಳನ್ನು ತಯಾರು ಮಾಡುವುದೂ ಮುಖ್ಯ. ಈ ವಿಚಾರವಾಗಿ ಮೋದಿಯವರು ಸಾರಿ ಹೇಳಿದರು. ಯುವ ಜನ ದೇಶದ ಶಕ್ತಿ. ಆದರೆ ಇತ್ತೀಚೆಗೆ ಯುವ ಜನರು ಮಾದಕ ವ್ಯಸನಿಗಳಾಗುತ್ತಿರುವುದು ಆತಂಕಕಾರಿ ವಿಚಾರ. ಮಾದಕ ವ್ಯವಸದಿಂದ ಯುವಶಕ್ತಿಯ ಚೈತನ್ಯ ಶಕ್ತಿ ಕುಂದುತ್ತದೆ. ಮಾದಕ ವ್ಯಸನಕ್ಕೆ ಮಾರುಹೋಗದಂತೆ ಯುವಜನರಿಗೆ ಪ್ರಧಾನಿ ಕರೆ ನೀಡಿದರು.ಆಗಸ್ಟ್ 15 ರಂದು ದೇಶಾದ್ಯಂತ ಸಂಭ್ರಮದಿಂದ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ದಿನಾಚರಣೆ ಮನೆಯ ಹಬ್ಬವಾಗಿ ಆಚರಣೆಯಾಗಬೇಕು, ಮನೆಮನೆಯಲ್ಲೂ ತ್ರಿವರ್ಣ ಧ್ವಜ ಹಾರಬೇಕು ಎಂದು ಮೋದಿ ಮನವಿ ಮಾಡಿದ್ದಾರೆ. ಪ್ರಧಾನಿಯಾದವರು ದೇಶದ, ದೇಶದ ಜನರ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಳ್ಳುವ ಮನ್ ಕಿ ಬಾತ್ ಮಹತ್ವಪೂರ್ಣ ಕಾರ್ಯಕ್ರಮ ಹೇಳಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ,ತಮ್ಮ ನೆಚ್ಚಿನ ಮನದಾಳದ ಮಾತುಗಳನ್ನು ಮನ್ ಕಿ ಬಾತ್ ಮೂಲಕ ದೇಶದ ಕಟ್ಟಕಡೆಯ ವ್ಯಕ್ತಿಗೂ ತಿಳಿಸುವ, ಸಾಮಾನ್ಯ ವ್ಯಕ್ತಿಯ ಸಾಧನೆಯನ್ನು ಪ್ರಧಾನ ಮಂತ್ರಿ ಗುರುತಿಸಿ, ನಮ್ಮ ಪರಂಪರೆ ಸಾರುವ, ನಾನು ಭಾರತೀಯನೆಂಬ ಹೆಮ್ಮೆಪಡುವಂತಹ ಈ ಕಾರ್ಯಕ್ರಮ ಅಭಿಮಾನಪಡುವಂತಾದ್ದು ಎಂದು ಹೇಳಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಇಂದು ಮೋದಿಯವರು ತಮ್ಮ ೧೧೨ನೇ ಮನ್ ಕಿ ಬಾತ್ ಮೂಲಕ ದೇಶದ ಜನರಿಗೆ ಸಂದೇಶ ನೀಡಿದರು. ವಿಶೇಷವಾಗಿ ನಮ್ಮ ಯುವ ಜನರು ಮಾದಕ ವ್ಯಸನಿಗಳಾಗಿ ಬದುಕು ಕಳೆದುಕೊಳ್ಳುತ್ತಿರುವ ಬಗ್ಗೆ ಪ್ರಧಾನಿಯವರು ಕಳವಳ ವ್ಯಕ್ತಪಡಿಸಿ, ವ್ಯವಸಮುಕ್ತರಾಗಲು ಕರೆ ನೀಡಿದ್ದು ಮಹತ್ವದ ವಿಚಾರ ಎಂದರು.