ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ನೀರಿನ ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಚಾಲನೆ

KannadaprabhaNewsNetwork | Published : Feb 17, 2025 12:31 AM

ಪ್ರಸ್ತುತ ನಗರದಲ್ಲಿ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿದೆ. ಪಾಲಿಕೆ ವಾರ್ಡು, ಬುಗುಡನಹಳ್ಳಿ ಜಲಸಂಗ್ರಹಾಗಾರ ಸೇರಿ ಪ್ರತಿ ದಿನ 14 ನೀರಿನ ಮಾದರಿಗಳನ್ನು ಈ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತಿದೆ. ನಾಗರಿಕರಿಗೆ ನೀರು ಸರಬರಾಜು ಮಾಡುವ ಮುನ್ನ 6 ಹಂತದಲ್ಲಿ ಶುದ್ಧೀಕರಣಗೊಳಿಸಲಾಗುವುದು.

ಕನ್ನಡಪ್ರಭ ವಾರ್ತೆ ತುಮಕೂರು

ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ನಗರದ ಪಿಎನ್‌ಆರ್ ಪಾಳ್ಯದಲ್ಲಿ ಪಾಲಿಕೆ ವತಿಯಿಂದ ಹೊಸದಾಗಿ ನಿರ್ಮಿಸಲಾಗಿರುವ ನೀರಿನ ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಪಿಎನ್‌ಆರ್ ಪಾಳ್ಯದಲ್ಲಿರುವ 50 ದಶಲಕ್ಷ ಮೀಟರ್ ಸಾಮರ್ಥ್ಯದ ಜಲಶುದ್ಧೀಕರಣ ಘಟಕದಲ್ಲಿ 7 ಲಕ್ಷ ರು. ವೆಚ್ಚದಲ್ಲಿ ಈ ಪ್ರಯೋಗಾಲಯವನ್ನು ನಿರ್ಮಿಸಲಾಗಿದ್ದು, ಪ್ರಯೋಗಾಲಯದಲ್ಲಿ ನಗರದ ನಾಗರಿಕರಿಗೆ ಸರಬರಾಜಾಗುವ ಮುನ್ನವೇ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಈ ಪ್ರಕ್ರಿಯೆಯಿಂದ ನೀರಿನಿಂದ ಹರಡುವ ಅನೇಕ ಜಲಜನ್ಯ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಸ್ಥಳದಲ್ಲಿ ಹಾಜರಿದ್ದ ರಾಸಾಯನ ತಜ್ಞ ಬಿ.ಕೆ.ದೇವರಾಜು ಪ್ರಯೋಗಾಲಯದಲ್ಲಿ ನೀರಿನ ತಾಪಮಾನ, ವಾಸನೆ, ಬಣ್ಣ, ರುಚಿ, ಪವರ್ ಆಫ್ ಹೈಡ್ರೋಜನ್, ಟರ್ಬಿಲಿಟಿ, ಟಿಡಿಎಸ್, ಸಾಲಿಡ್, ಟೋಟಲ್ ಡಿಸಾಲ್ವ್ ಸೇರಿ ಭೌತಿಕ, ರಾಸಾಯನಿಕ ಹಾಗೂ ಜೈವಿಕ ನಿಯಂತ್ರಕಗಳನ್ನು ಪರೀಕ್ಷಿಸಲಾಗುವುದು ಎಂದು ನೀರಿನ ಗುಣಮಟ್ಟ ಪರೀಕ್ಷೆ ಕುರಿತು ಸಚಿವರಿಗೆ ವಿವರಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಮಾತನಾಡಿ, ಪ್ರಸ್ತುತ ನಗರದಲ್ಲಿ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿದೆ. ಪಾಲಿಕೆ ವಾರ್ಡು, ಬುಗುಡನಹಳ್ಳಿ ಜಲಸಂಗ್ರಹಾಗಾರ ಸೇರಿ ಪ್ರತಿ ದಿನ 14 ನೀರಿನ ಮಾದರಿಗಳನ್ನು ಈ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತಿದೆ. ನಾಗರಿಕರಿಗೆ ನೀರು ಸರಬರಾಜು ಮಾಡುವ ಮುನ್ನ 6 ಹಂತದಲ್ಲಿ ಶುದ್ಧೀಕರಣಗೊಳಿಸಲಾಗುವುದು ಎಂದು ತಿಳಿಸಿದರು.

ನಂತರ ಸಚಿವರು ಪ್ರಯೋಗಾಲಯದಲ್ಲಿ ಇನ್‌ಕ್ಯೂಬೇಟರ್, ಮೈಕ್ರೋ ಬಯೋಲಜಿ ಕೊಠಡಿ, ಆಟೋಕ್ಲೇವ್, ರಾಸಾಯನಿಕ ನಿಯಂತ್ರಕಗಳ ಪರೀಕ್ಷಾ ಕೊಠಡಿ, ಸೂಕ್ಷ್ಮ ಜೀವಿಗಳ ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ, ನೀರಿನ ಗುಣಮಟ್ಟದ ಪ್ರಾಯೋಗಿಕ ಪರೀಕ್ಷೆಯನ್ನು ವೀಕ್ಷಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಇಂಜಿನಿಯರ್ ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.