ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ-ಸಚಿವ ಲಮಾಣಿ ಭರವಸೆ

KannadaprabhaNewsNetwork |  
Published : Sep 06, 2026, 02:30 AM IST
ಹಾನಗಲ್ಲಿನಲ್ಲಿ ನಡೆದ ಪ್ರಜಾಸೇವೆ ಆಂದೋಲನದಲ್ಲಿ ಸಮಸ್ಯೆ ಹೇಳುತ್ತಿರುವ ದೃಶ್ಯ. | Kannada Prabha

ಸಾರಾಂಶ

ರೈತ ಸಂಘದ ಪ್ರತಿಭಟನೆಯನ್ನೂ ಒಳಗೊಂಡು ರೈತರ ಸಮಸ್ಯೆ, ಉತಾರದಲ್ಲಿ ಸರಕಾರ ಸರಕಾರಿ ಎಂಬ ತಿದ್ದುಪಡಿ, ಬರಗಾಲ ಘೋಷಣೆ, ರೈತರ ಜಮೀನಿಗೆ ದಾರಿ ವ್ಯವಸ್ಥೆ, ಮನೆಯಿಲ್ಲದಿರುವವರ ಬಡವರ ಮನೆ ಬೇಡಿಕೆಯೂ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕೆ ಸಾರ್ವಜನಿಕರು ಮನವಿ ಸಲ್ಲಿಸಿ ಒತ್ತಾಯಿಸಿದರು.

ಹಾನಗಲ್ಲ: ರೈತ ಸಂಘದ ಪ್ರತಿಭಟನೆಯನ್ನೂ ಒಳಗೊಂಡು ರೈತರ ಸಮಸ್ಯೆ, ಉತಾರದಲ್ಲಿ ಸರಕಾರ ಸರಕಾರಿ ಎಂಬ ತಿದ್ದುಪಡಿ, ಬರಗಾಲ ಘೋಷಣೆ, ರೈತರ ಜಮೀನಿಗೆ ದಾರಿ ವ್ಯವಸ್ಥೆ, ಮನೆಯಿಲ್ಲದಿರುವವರ ಬಡವರ ಮನೆ ಬೇಡಿಕೆಯೂ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕೆ ಸಾರ್ವಜನಿಕರು ಮನವಿ ಸಲ್ಲಿಸಿ ಒತ್ತಾಯಿಸಿದರು.

ಹಾನಗಲ್ಲನಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಶನಿವಾರ ಬೆಳಗ್ಗೆ ೯ ಗಂಟೆಯಿಂದಲೇ ತಾಲೂಕಿನಾದ್ಯಂತ ತಮ್ಮ ಅಹವಾಲುಗಳನ್ನು ಹಿಡಿದು ಬಂದ ಸಾರ್ವಜನಿಕರು ಸಚಿವರು, ಅಧಿಕಾರಿಗಳಿಗಾಗಿ ಕಾಯುತ್ತಿದ್ದರು. ಸಾಂಪ್ರದಾಯಿಕವಾಗಿ ಉದ್ಘಾಟನೆ ಮುಗಿಯುತ್ತಿದ್ದಂತೆ ಸಚಿವರ ಸಮ್ಮುಖದಲ್ಲಿಯೇ ಶಾಸಕ ಶ್ರೀನಿವಾಸ್ ಮಾನೆ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸಮ್ಮುಖದಲ್ಲಿಯೇ ಸಾರ್ವಜನಿಕರು ಅಹವಾಲು ಸಲ್ಲಿಸಿ ತಮ್ಮ ಬೇಡಿಕೆಗಳನ್ನು ತೋಡಿಕೊಂಡರು.

೬ ತಿಂಗಳಿನಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ. ಆಶ್ರಯ ಯೋಜನೆಯಲ್ಲಿ ಕಟ್ಟಿಕೊಂಡ ಮನೆಗೆ ಒಂದೇ ಬಿಲ್ ಬಂದಿದೆ. ಮುಂದಿನ ಬಿಲ್ ಬೇರೆಯಾವರ ಖಾತೆಗೆ ಹೋಗಿದೆ. ಕಾರ್ಮಿಕರ ಕಾರ್ಡಗಳು ಬಾಕಿ ಇವೆ. ಸಾವಿರಾರು ಜನರ ಕಾರ್ಮಿಕರ ವಿವಾಹ ಪ್ರೋತ್ಸಾಹ ಧನ ಬಾಕಿ ಇದೆ. ಕಾರ್ಮಿಕ ಇಲಾಖೆ ಕೌಂಟರ್‌ನಲ್ಲಿ ನಮ್ಮ ಅಹವಾಲು ತೆಗೆದುಕೊಳ್ಳುವವರೇ ಇಲ್ಲ ಕಾರ್ಮಿಕರ ಹೆಸರಿನ ಬೋಗಸ್ ಕಾರ್ಡು ರದ್ದಾಗಬೇಕು ಎಂಬ ಅಹವಾಲುಗಳು ಸಲ್ಲಿಕೆಯಾದವು. ಬರಗಾಲ ಘೋಷಣೆಯಲ್ಲಿ ಹಾನಗಲ್ಲ ತಾಲೂಕು ಬಿಟ್ಟು ಹೋಗಿದೆ ಎಂಬ ದೂರಿಗೆ ಶಾಸಕ ಶ್ರೀನಿವಾಸ್ ಮಾನೆ ಉತ್ತರಿಸಿ, ಶೀಘ್ರ ಹಾನಗಲ್ಲ ತಾಲೂಕು ಬರಗಾಲ ಘೋಷಣೆಯಾಗಲಿದೆ. ರೈತರಿಗೆ ಆತಂಕ ಬೇಡ ಎಂದು ತಿಳಿಸಿದರು.

ಮಧ್ಯವರ್ತಿಗಳು: ಕಂದಾಯ ಇಲಾಖೆ ಸೇರಿದಂತೆ ತಾಲೂಕಿನ ಬಹುತೇಕ ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಗಂಭೀರವಾಗಿ ಪರಿಹಾರ ನೀಡುವಲ್ಲಿ ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳೇ ಇರುವುದಿಲ್ಲ. ಕಂದಾಯ ಗ್ರಾಮಗಳಲ್ಲಿ ಇನ್ನೂ ದಾರಿ ಸಮಸ್ಯೆ ಇವೆ. ಹಾನಗಲ್ಲಿನ ಎನ್‌ಎ ಸೈಟ್‌ನಲ್ಲಿ ರಸ್ತೆ ಅತಿಕ್ರಮಣವಾಗಿದೆ. ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಧರ್ಮಾ ನದಿಗೆ ತಡೆಗೋಡೆ ನಿರ್ಮಿಸಬೇಕು. ತಾಲೂಕಿನಲ್ಲಿನ ಹೈವೇಗಳಿಂದ ಸರ್ವಿಸ್ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ರಾಮತೀರ್ಥಹೊಸಕೊಪ್ಪದ ಬಳಿಯ ಕಾಡಿನಲ್ಲಿ ರೈತರಿಗಾಗಿ ಜಮೀನಿಗೆ ಹೋಗಲು ದಾರಿ ಮಾಡಿ ಕೊಡಬೇಕು ಎಂಬ ಸಮಸ್ಯೆ ಬೇಡಿಕೆಗಳು ಸಚಿವರು, ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲಿ ಸಲ್ಲಿಕೆಯಾದವು.

ಇರಾಕ್ ಒಂದ್ ಮನಿ ಕೊಡ್ರಿ: ಹಾನಗಲ್ಲ ತಾಲೂಕು ಸಾಂವಸಗಿ ಗ್ರಾಮದ ಸರೋಜಾ ಎಂಬ ಮಹಿಳೆ ದಿಢೀರನೆ ವೇದಿಕೆ ಏರಿ ನನಗೆ ಒಂದ ಮನಿ ಕೊಡ್ರಿ. ನನಗೆ ಗಂಡಿಲ್ಲ, ಜಗಾ ಇಲ್ಲ, ಮನಿ ಇಲ್ಲ. ಇರೋ ಒಬ್ಬ ಮಗ ಕೂಲಿ ಮಾಡ್ತಾನ. ನನಗೆ ಯಾರ ಆಸರೇನು ಇಲ್ಲ. ನನಗೊಂದು ಮನಿ ಕೊಡ್ರಿ ಎಂದು ದುಂಬಾಲು ಬಿದ್ದಳು. ಕಂಡವರೆಲ್ಲರಿಗೆ ಕೈ ಮುಗಿದ ನೀವಾರ ಹೇಳ್ರಿ, ಹೇಳ್ರಿ ಎಂದು ಕಣ್ಣೀರಿಡುತ್ತ ಗೋಗರೆಯುತ್ತಿದ್ದಳು. ಶಾಸಕ ಶ್ರೀನಿವಾಸ್ ಮಾನೆ ಇವರನ್ನು ಕರೆದು ಈ ಬಾರಿ ಸರ್ಕಾರದ ಮನೆ ಬಂದಾಗ ಖಂಡಿತ ಮನೆ ಹಾಕಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ರೈತರ ಪ್ರತಿಭಟನೆ: ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ತಮ್ಮ ಅಹವಾಲು ಸಲ್ಲಿಸಲು ಒಟ್ಟಾಗಿ ಮುಂದಾದಾಗ ವಿಡಿಯೋ ಕಾನ್ಫರನ್ಸ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡುತ್ತಿದ್ದರು. ಆ ಕಾರಣಕ್ಕೆ ಅರ್ಜಿ ಅಹವಾಲು ಸಲ್ಲಿಕೆ ಸ್ಥಗಿತಗೊಳಿಸಲಾಯಿತು. ಈ ಸಂದರ್ಭದಲ್ಲಿ ರೈತ ಮುಖಂಡರು ಘೋಷಣೆ ಕೂಗುತ್ತ ವೇದಿಕೆಯಿಂದ ಇಳಿದು, ವೇದಿಕೆ ಪಕ್ಕದಲ್ಲಿ ಕುಳಿತು ಘೋಷಣೆ ಕೂಗಲು ಆರಂಭಿಸಿದರು. ಡಿ.ಕೆ. ಶಿವಕುಮಾರ ಅವರ ವಿಡಿಯೋ ಕಾನ್ಫರನ್ಸ ಭಾಷಣ ಮುಗಿದ ಮೇಲೆ ರೈತರನ್ನು ವೇದಿಕೆಗೆ ಕರೆಸಿದ ಸಚಿವರು, ಶಾಸಕರು, ಅಧಿಕಾರಿಗಳು ಮಾತನಾಡಿ ಬರಗಾಲ ಘೋಷಣೆ, ಹೊಸ್ ವಿದ್ಯುತ್ ಗ್ರಿಡ್, ಪಶುವೈದ್ಯರನ್ನು ನೇಮಕ ಮಾಡುವುದು, ಲೈನ್‌ಮನ್ ಒದಗಿಸುವುದು, ಅಡಿಕೆ, ಮಾವು ಬೆಳೆಗೆ ಹಿಂದಿನ ವರ್ಷದ ವಿಮಾ ಪರಿಹಾರ ಬಿಡುಗಡೆಗೆ ರೈತ ಸಂಘ ಒತ್ತಾಯಿಸಿದರು.

ಕೂಡಲೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆಯನ್ನು ಸಚಿವ ರುದ್ರಪ್ಪ ಲಮಾಣೆ, ಶಾಸಕ ಶ್ರೀನಿವಾಸ್ ಮಾನೆ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ನೀಡಿದರು. ಯಾವುದೇ ಗದ್ದಲ ಗಲಾಟೆಗಳಿಲ್ಲದೆ, ಅಧಿಕಾರಿಗಳ ಸಮರ್ಪಕ ಪರಿಹಾರದ ಘೋಷಣೆಗಳೊಂದಿಗೆ ಪ್ರಜಾಸೇವಾ ಆಂದೋಲನಕ್ಕೆ ತೆರೆಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಸೇವೆ ಆಂದೋಲನ: ಅರ್ಜಿ ಸಲ್ಲಿಸಲು ಶಿರಹಟ್ಟಿಯಲ್ಲಿ ನೂಕುನುಗ್ಗಲು
ಮಕ್ಕಳ, ದೇಶದ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ: ಡಾ. ಚಂದ್ರು ಲಮಾಣಿ