ಪುತ್ರ ಸಮರ್ಥನಿಗೆ ಟಿಕೆಟ್ ಕೇಳಿಲ್ಲ: ಸಚಿವ ಮಲ್ಲಿಕಾರ್ಜುನ

KannadaprabhaNewsNetwork |  
Published : Mar 09, 2026, 01:30 AM IST
ಎಸ್.ಎಸ್. ಮಲ್ಲಿಕಾರ್ಜುನ | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ತಮ್ಮ ಪುತ್ರ ಸಮರ್ಥಗೆ ಟಿಕೆಟ್ ಕೇಳಲು ಹೋಗಿಲ್ಲ. ಹೈಕಮಾಂಡ್ ಹೇಳಿದಂತೆ ಎಲ್ಲರೂ ನಡೆಯೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಉಪ ಸಮರದ ಟಿಕೆಟ್ ಕುತೂಹಲವನ್ನು ಮತ್ತೆ ಯುಗಾದಿ ಹಬ್ಬದವರೆಗೂ ವಿಸ್ತರಿಸಿದ್ದಾರೆ.

- ಎಲ್ಲ ಕಾರ್ಯಕರ್ತರ ಮೇಲೆ ಬಿಡುತ್ತೇನೆ । ಯುಗಾದಿ ಚಂದ್ರ ದರ್ಶನ ನಂತರ ದಕ್ಷಿಣ ಕ್ಷೇತ್ರ ಅಭ್ಯರ್ಥಿ ಬಗ್ಗೆ ಚರ್ಚೆ: ಗಣಿ ಸಚಿವ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ತಮ್ಮ ಪುತ್ರ ಸಮರ್ಥಗೆ ಟಿಕೆಟ್ ಕೇಳಲು ಹೋಗಿಲ್ಲ. ಹೈಕಮಾಂಡ್ ಹೇಳಿದಂತೆ ಎಲ್ಲರೂ ನಡೆಯೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಉಪ ಸಮರದ ಟಿಕೆಟ್ ಕುತೂಹಲವನ್ನು ಮತ್ತೆ ಯುಗಾದಿ ಹಬ್ಬದವರೆಗೂ ವಿಸ್ತರಿಸಿದ್ದಾರೆ.

ನಗರದ ಹಳೆ ಭಾಗದಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ₹10.61 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದುಗ್ಗಮ್ಮನ ಜಾತ್ರೆ ಮುಗಿಯಿತು. ಈಗ ಯುಗಾದಿ ಹಬ್ಬ ಬರುತ್ತಿದ್ದು, ಚಂದ್ರನ ದರ್ಶನ ಮಾಡೋಣ ಎಂದರು.

ದಕ್ಷಿಣ ಉಪ ಚುನಾವಣೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ತಾವು ತಮ್ಮ ಪುತ್ರ ಸಮರ್ಥ್‌ಗೆ ಟಿಕೆಟ್ ಕೇಳಲು ಹೋಗಿಲ್ಲ. ಎಲ್ಲ ಮುಖಂಡರು, ಕಾರ್ಯಕರ್ತರು ಕುಳಿತು, ಚರ್ಚಿಸಿ, ಅಭ್ಯರ್ಥಿ ಯಾರೆಂಬ ಬಗ್ಗೆ ಚರ್ಚಿಸಿ, ನಿರ್ಧಾರವಾಗುತ್ತದೆ. ನಮ್ಮ ಪಕ್ಷದಲ್ಲಿ ಒಮ್ಮತವಿದ್ದು, ಎಲ್ಲ ಕಾರ್ಯಕರ್ತರ ಅಭಿಪ್ರಾಯ ಕೇಳಿ, ಎಲ್ಲ ಸಮುದಾಯದವರೂ ಸೇರಿಯೇ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ಮಂಡಿಸಿದ್ದಾರೆ. ಎಲ್ಲ ವರ್ಗಗಳ ಬಡವರಿಗೂ ಸ್ಪಂದಿಸಿ, ಎಲ್ಲರಿಗೂ ಗ್ಯಾರಂಟಿ ನೀಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೂ ₹100 ಕೋಟಿ ಅನುದಾನ ಘೋಷಿಸಿರುವುದಕ್ಕೆ ಅಭಿನಂದಿಸುತ್ತೇನೆ. ದಕ್ಷಿಣ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡಿದ್ದೇವೆ. ಇನ್ನೂ ಹೆಚ್ಚು ಕೆಲಸ ಮಾಡಲು ಅನುಕೂಲವಾಗಿದೆ. 1991ರಿಂದ 2003ರವರೆಗೆ ಶೇ.90ರಷ್ಟು ರಸ್ತೆಯಾಗಿವೆ. ಚರಂಡಿ, ರಾಜ ಕಾಲುವೆಗಳು ಆಗಿವೆ. ಹಿಂದುಳಿದ ಪ್ರದೇಶದಲ್ಲಿ ಹಿಂದೆ ಮಳೆ ನೀರು, ಚರಂಡಿ ನೀರು ನುಗ್ಗುತ್ತಿದ್ದಂತೆ ಈಗಲೂ ನುಗ್ಗುತ್ತಿದೆಯಾ ಎಂದು ಸಚಿವರು ಪ್ರಶ್ನಿಸಿದರು.

ಸಿಎಂ ಘೋಷಿಸಿರುವ ₹100 ಕೋಟಿ ಅನುದಾನದಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಏನೆಲ್ಲಾ ಸಣ್ಣಪುಟ್ಟ ಕೆಲಸ, ಅಭಿವೃದ್ಧಿ ಕಾರ್ಯಗಳು ಆಗಬೇಕೋ ಅದೆಲ್ಲವನ್ನೂ ಮಾಡುತ್ತೇವೆ. ಮುಖ್ಯ ಕಾಲುವೆಯ ಶೇ.70ರಷ್ಟು ಕಾಮಗಾರಿಯಾಗಿದೆ. ಶೇ.30 ಕಾಮಗಾರಿ ಬಾಕಿಯಿದ್ದು, ಈಗ ಪೂರ್ಣಗೊಳಿಸುತ್ತೇವೆ. ಮಹಾತ್ಮ ಗಾಂಧಿ ವೃತ್ತ ಅಭಿವೃದ್ಧಿ ಕೆಲಸ ಮುಗಿದಿದ್ದು, ಇದೀಗ ಶಿವಪ್ಪಯ್ಯ ವೃತ್ತದ ಕಾಮಗಾರಿ ಕೈಗೆತ್ತಿಕೊಂಡಿರುವುದಾಗಿ ಗುತ್ತಿಗೆದಾರ ತಿಳಿಸಿದ್ದಾರೆ. ಆದಷ್ಟು ಬೇಗನೆ ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದೇನೆ ಎಂದು ಸಚಿವ ಎಸ್‌ಎಸ್ಎಂ ತಿಳಿಸಿದರು.

- - -

(ಬಾಕ್ಸ್‌) * ಸರ್ಕಾರ-ಬಾಪೂಜಿ ಆಸ್ಪತ್ರೆ ಸಹಭಾಗಿತ್ವದಲ್ಲಿ ಆರೋಗ್ಯ ಸೇವೆ

- ಆರೋಗ್ಯ ಸೇವೆ ಪ್ರಸ್ತಾವನೆಗೆ ಸಚಿವ ದಿನೇಶ ಗುಂಡೂರಾವ್ ಸಮ್ಮತಿ: ಎಸ್ಸೆಸ್ಸೆಂ ದಾವಣಗೆರೆ: ರಾಜ್ಯ ಸರ್ಕಾರ ಮತ್ತು ಬಾಪೂಜಿ ವಿದ್ಯಾಸಂಸ್ಥೆ ಜಂಟಿಯಾಗಿ ಇಲ್ಲಿನ ಹಳೇ ಭಾಗದ ತಮ್ಮ ಸಂಸ್ಥೆಯ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ವಿನೂತನ ಪ್ರಯತ್ನವಾಗಿದ್ದು, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಸಹ ಸಮ್ಮತಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಬಾಪೂಜಿ ವಿದ್ಯಾಸಂಸ್ಥೆ ಜಂಟಿ ಗೌರವ ಕಾರ್ಯದರ್ಶಿ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇತೂರು ರಸ್ತೆಯ ಆಸ್ಪತ್ರೆಯಲ್ಲಿ ಈಗಾಗಲೇ ಉಚಿತ ಡಯಾಲಿಸಿಸ್ ಸೇವೆ ನೀಡುತ್ತಿದ್ದೇವೆ. ಈಗ ಸರ್ಕಾರ ಮತ್ತು ಬಾಪೂಜಿ ಆಸ್ಪತ್ರೆಯನ್ನು ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಯಂತೆ ನಡೆಸಲು ಆಲೋಚನೆ ಮಾಡಿದ್ದೇವೆ. ಆದಷ್ಟು ಬೇಗನೆ ಈ ಕಾರ್ಯವನ್ನು ಮಾಡುತ್ತೇವೆ. ಆ ಭಾಗದಿಂದ ಜಿಲ್ಲಾಸ್ಪತ್ರೆಗೆ ಬಂದು ಹೋಗಲು ₹100 ಖರ್ಚು ಮಾಡುವುದು ಜನರಿಗೆ ತಪ್ಪುತ್ತದೆ ಎಂದರು.

ಸರ್ಕಾರದಿಂದ ಅಗತ್ಯ ಸಿಬ್ಬಂದಿ ಕೊಡಬೇಕು. ಸರ್ಕಾರದ ಸೌಲಭ್ಯಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲು ಜಾಯಿಂಟ್ ವೆಂಚರ್‌ನ ಹೊಸ ಪ್ರಸ್ತಾವನೆ ನೀಡಿದ್ದಕ್ಕೆ ಸರ್ಕಾರವೂ ಒಪ್ಪಿಗೆ ಸೂಚಿಸಿದೆ. ಆದಷ್ಟು ಬೇಗನೆ ಈ ಸೇವೆಯನ್ನು ಕಾರ್ಯರೂಪಕ್ಕೆ ತರುತ್ತೇವೆ. ಆಸ್ಪತ್ರೆಯು 400 ಬೆಡ್ ಸೇವೆ ನೀಡಲಿದ್ದು, ಅಲ್ಲಿ ಒಟ್ಟು 600 ಬೆಡ್ ಇವೆ. ಗೈನಾಕಾಲಜಿ, ನ್ಯೂರೋಲಾಜಿ, ಪಿಡಿಯಾಡ್ರಿಕ್ಸ್‌, ನ್ಯೂರೋ ಸೈನ್ಸ್‌ ಆರಂಭಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.

- - -

(ಕೋಟ್‌)

ದಾವಣಗೆರೆ ಹಳೇ ಭಾಗದ ಕೆ.ಆರ್. ರಸ್ತೆಯ ಸರ್ಕಾರಿ ಹೆರಿಗೆ ಆಸ್ಪತ್ರೆ (ಹಳೇ ಹೆರಿಗೆ ಆಸ್ಪತ್ರೆ)ಯಲ್ಲಿ 150 ಬೆಡ್ ಇದ್ದು, ಇಲ್ಲಿ ಯಾವಾಗಲೂ ಬೆಡ್‌ಗಳು ತುಂಬಿರುತ್ತವೆ. ಹಾಗಾಗಿ, ಬಾಪೂಜಿ ಆಸ್ಪತ್ರೆ ಸಹಯೋಗದಲ್ಲಿ ಜನರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಹಾಗೂ ಬಾಪೂಜಿ ಆಸ್ಪತ್ರೆಯ ಸಹಯೋಗದಲ್ಲಿ ಸೇವೆ ಒದಗಿಸಲು ತೀರ್ಮಾನಿಸಲಾಗಿದೆ.

- ಎಸ್.ಎಸ್. ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನದ ಪ್ರತಿ ಹೆಜ್ಜೆಯಲ್ಲೂ ಮಹಿಳೆಯೇ ಶಕ್ತಿ
ತಮಿಳು ಕಾಲೋನಿ ಮಕ್ಕಳಿಗೆ ಕನ್ನಡ ಪಾಠ...!