ಹರವೆಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಪ್ರತಿಭಟನೆ
ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಜಿಲ್ಲೆಯ ಬರ ಅಧ್ಯಯನ ನಡೆಸುತ್ತಿರುವುದು ಒಂದು ದೊಡ್ಡ ನಾಟಕವಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಆರೋಪಿಸಿದ್ದಾರೆ.
ಹರವೆಯಲ್ಲಿ ಗೋಶಾಲೆ ತೆರೆಯುವಂತೆ, ವಿವಿಧ ಪಿಂಚಣಿಗಳನ್ನು ನೀಡುವಂತೆ, ಕೆರೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ಹರವೆ ಬಿಜೆಪಿ ಮಹಾಶಕ್ತಿ ಕೇಂದ್ರ ವತಿಯಿಂದ ತಾಲೂಕಿನ ಹರವೆ ನಾಡಕಚೇರಿ ಮುಂಭಾಗ ಧರಣಿ ನಡೆಸಲಾಯಿತು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಗಿರಿಜಾ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮೂಡ್ನಾಕೂಡು ಪ್ರಕಾಶ್ ಮಾತನಾಡಿ, ಸಿ. ಪುಟ್ಟರಂಗಶೆಟ್ಟಿ, ಅಯಾಯ ವಿಧಾನಸಭಾ ಕ್ಷೇತ್ರದ ಶಾಸಕರು ಜಿಲ್ಲೆಯಲ್ಲಿ ನಡೆಸುತ್ತಿರುವ ಬರ ಅಧ್ಯಯನ ಒಂದು ನಾಟಕವಾಗಿದೆ. ಸಚಿವರು ಸ್ಥಳೀಯರಾಗಿದ್ದು, ಜಿಲ್ಲೆಯಲ್ಲಿ ಉಂಟಾಗಿರುವ ಬರದ ಬಗ್ಗೆ ಅವರಿಗೆ ಮಾಹಿತಿ ಇದ್ದರೂ ಕೂಡ ಜಿಲ್ಲೆಯಲ್ಲಿ ಬರ ಅಧ್ಯಯನ ಮಾಡುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದ್ದು, ಬರ ನಿರ್ವಹಿಸಲು ಹಣವಿಲ್ಲದ ಕಾರಣದಿಂದ ಬರ ಅಧ್ಯಯನ ಮಾಡುವುದಾಗಿ ಕಾಲಾಹರಣ ಮಾಡುತ್ತಿದ್ದಾರೆ ಎಂದು ದೂರಿದರು.ರಾಜ್ಯದಲ್ಲಿ ತೀವ್ರ ತರವಾದ ಬರ ಪರಿಸ್ಥಿತಿ ಎದುರಿಸುತ್ತಿರುವ ಹೋಬಳಿಗಳಲ್ಲಿ ಚಾಮರಾಜನಗರ ಜಿಲ್ಲೆಯ ಹರವೆ ಹೋಬಳಿಯು ಒಂದಾಗಿದೆ. ಈ ಭಾಗದ ರೈತರು ಕೊಳವೇ ಬಾವಿಗಳನ್ನೇ ನಂಬಿ ವ್ಯವಸಾಯ ಮತ್ತು ಹೈನುಗಾರಿಕೆಯನ್ನು ಮೂಲ ಕಸುಬನ್ನಾಗಿ ಆಶ್ರಯಿಸಿರುತ್ತಾರೆ. ಈ ಬಾರಿ ಪೂರ್ವ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ವ್ಯವಸಾಯ ಮತ್ತು ಹೈನುಗಾರಿಕೆಯಲ್ಲ ತೀವ್ರ ಹಿನ್ನಡೆ ಉಂಟಾಗಿದೆ. ರೈತರು ಬಿತ್ತಿದ ಬಿತ್ತನೆ ನೂರಕ್ಕೆ ನೂರರಷ್ಟು ಪ್ರಮಾಣದಲ್ಲಿ ಹಾಳಾಗಿದ್ದು, ವಾಣಿಜ್ಯ ಬೆಳೆಗಳು ಮತ್ತು ಹೈನುಗಾರಿಕೆ ಮೇವಿನ ಬೆಳೆಗಳು ಸಂಪೂರ್ಣ ಮಳೆಯ ಅಭಾವದಿಂದ ಹಾಳಾಗಿದೆ. ಜಾನುವಾರುಗಳ ನಿರ್ವಹಣೆಗೆ ರೈತರು ಮಂಡ್ಯ ಮೈಸೂರಿನಂತಹ ಹೊರ ಜಿಲ್ಲೆಗಳಿಂದ ಮುಸುಕಿನ ಜೋಳದ ಮೇವು ಮತ್ತು ಭತ್ತದ ಹುಲ್ಲು ಟನ್ಗೆ 5000ರಿಂದ 6000ವರೆಗೆ ಜೊತೆಗೆ ವಾಹನದ ದುಬಾರಿ ಬಾಡಿಗೆ ಕೊಟ್ಟು ತರುವಂತಾಗಿದೆ. ಜಾನುವಾರುಗಳನ್ನು ಸಾಕಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಇಂತಹ ರೈತರ ನೆರವಿಗೆ ಧಾವಿಸಲು ವಿಫಲವಾಗಿದೆ. ಆದ್ದರಿಂದ ಪ್ರತಿ ಪಂಚಾಯಿತಿ ವ್ಯಾಪ್ತಿಗೆ ಒಂದು ಮೇವಿನ ಕೇಂದ್ರ ತೆರೆಯಬೇಕು, ಹಾಗೇ ಗೋಶಾಲೆ ತೆಗೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹರವೆ ಬಿಜೆಪಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಮಹದೇವ ಪ್ರಸಾದ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಕಮಲಮ್ಮ, ಎಸ್ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಗಿರೀಶ್, ಚಿಕ್ಕ ನಾಗಪ್ಪ, ಕೃಷ್ಣ ಶೆಟ್ಟಿ, ನಂಜುಂಡಸ್ವಾಮಿ, ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮಹದೇವ ಸ್ವಾಮಿ, ಶಕ್ತಿಕೇಂದ್ರ ಅಧ್ಯಕ್ಷರಾದ ಕಲ್ಪುರ ವೃಷಭೇಂದ್ರ ಸ್ವಾಮಿ, ಭುಜಗನಪುರ ಮಹದೇವಸ್ವಾಮಿ, ಸೊಸೈಟಿ ಅಧ್ಯಕ್ಷ ಮಾದಪ್ಪ, ಡೈರಿ ಮಾಜಿ ಅಧ್ಯಕ್ಷ ಎಂ.ಸಿ. ಮಲ್ಲಣ್ಣ, ನಾಗಭೂಷಣ್, ಹರವೆ ಮಧು, ನಟರಾಜು, ಹಳೆಪುರ ಸುಂದರಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಕುಮಚಳ್ಳಿ ಸ್ವಾಮಿ, ಶಿವಣ್ಣ ನಾಯಕ್, ಹೆಗಡೆ ಮಹದೇವಪ್ಪ, ಎಂ.ಸಿ. ಪ್ರಕಾಶ್, ಶಿವಕುಮಾರ್, ಮೂಡ್ನಾಕೂಡು ಮಂಜು, ಕುಮಾರ್ ಕೆಂಡ್, ಪರಶಿವಪ್ಪ, ಲಿಂಗಣ್ಣ, ಎಸ್ ಮಂಜು ಇತರರು ಭಾಗವಹಿಸಿದ್ದರು.
7ಸಿಎಚ್ಎನ್12