ಪ್ರತಿಭಟನೆ, ವರಿಷ್ಠರಿಗೆ ದೂರು ಎಚ್ಚರಿಕೆ ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅವರಿಗೆ ಜಿಲ್ಲೆ ಬಗ್ಗೆ ಆಸಕ್ತಿ ಇಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಸಾರ್ವಜನಿಕವಾಗಿ ಬಿ. ಶಿವರಾಂ ರವರನ್ನು ನಿಂದಿಸಿದ್ದು ತಪ್ಪು. ಕೂಡಲೇ ವಿಷಾದ ವ್ಯಕ್ತಪಡಿಸದಿದ್ದರೆ ಕೆ.ಎನ್. ರಾಜಣ್ಣ ವಿರುದ್ಧ ಪ್ರತಿಭಟನೆ ಮಾಡಿ ವರಿಷ್ಠರಿಗೆ ದೂರು ನೀಡುವುದಾಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಡಿ. ದೊರೆಸ್ವಾಮಿ ಎಚ್ಚರಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣನವರ ಉದ್ಧಟತನ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಾಗೂ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಸಚಿವ ರಾಜಣ್ಣರವರೇ ರಾಷ್ಟ್ರ ನಾಯಕರ ಹಾಗೂ ಸ್ಥಳೀಯ ಕಾರ್ಯಕರ್ತರು ಮತ್ತು ಮುಖಂಡರ ಸಂಘಟಿತ ಹೋರಾಟದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಅದೇ ರೀತಿ ಹಾಸನದಲ್ಲಿಯೂ ಏಕೈಕ ಶಾಸಕರು ಗೆಲುವನ್ನು ಸಾಧಿಸಿದೆ. ಕಾರ್ಯಕರ್ತರು ಮತ್ತು ಮುಖಂಡರ ಸಂಘಟಿತ ಹೋರಾಟದ ಜಿಲ್ಲೆಯಲ್ಲಿ ಪಕ್ಷ ಎಲ್ಲಾ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಮತಗಳಿಸಿದೆ. ರಾಜಣ್ಣನವರೇ ತಾವು ಹಾಸನಕ್ಕೆ ಉಸ್ತುವಾರಿ ಸಚಿವರಾಗಿ ಬಂದಾಗ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಅವರ ಮೇಲೆ ಬಹಳಷ್ಟು ನಿರೀಕ್ಷೆ ಮತ್ತು ಭರವಸೆಯನ್ನು ಇಟ್ಟುಕೊಂಡಿದ್ದರು. ಆದರೆ ನೀವು ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಏನೂ ಕೆಲಸ ಮಾಡಿದ್ದೀರಿ?’ ಎಂದು ಪ್ರಶ್ನಿಸಿದರು.
‘ಎಂದಾದರೂ ಪಕ್ಷದ ಕಾರ್ಯಕರ್ತರ ಸಮಸ್ಯೆ, ಪಕ್ಷದ ಬ್ಲಾಕ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ಕರೆದು ಜಿಲ್ಲೆಯ ಹಾಗೂ ಕಾರ್ಯಕರ್ತರ ಕುಂದುಕೊರತೆಗಳ ಬಗ್ಗೆ ಸ್ಪಂದಿಸಿದ್ದೀರಾ ? ನೀವು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ನಿಮ್ಮನ್ನು ಪ್ರಶ್ನೆ ಮಾಡಿದ ಕಾರ್ಯಕರ್ತರನ್ನು, ಮುಖಂಡರನ್ನು ತುಚ್ಯವಾಗಿ ನಿಂದಿಸುವ ನೀವು ಹಾಸನ ಜಿಲ್ಲೆಯ ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಏನು?. ನಿಮ್ಮ ಈ ವರ್ತನೆಯಿಂದ ಪಕ್ಷದ ಮೇಲೆ ಮುಂದಿನ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೇ, ಕೇವಲ ಒಂದಿಬ್ಬರು ನಾಯಕರನ್ನು ಪರಿಗಣಿಸುವ ನೀವು ಬೇರೆ ಮುಖಂಡರು ಮತ್ತು ಕಾರ್ಯಕರ್ತರ ಅವಶ್ಯಕತೆ ಇಲ್ಲ ಎಂದು ಭಾವಿಸಿದ್ದೀರಿ’ ಎಂದು ಟೀಕಿಸಿದರು.‘ಜೆಡಿಎಸ್ನ ಮುಖಂಡ ಪಟೇಲ್ ಶಿವರಾಮ್ ಮನೆಗೆ ಭೇಟಿ ನೀಡಿ ಸೌಜನ್ಯ ಮಾತುಕತೆ ನಡೆಸುವ ನೀವು ಕಾಂಗ್ರೆಸ್ ಮಾಜಿ ಸಚಿವ ಶಿವರಾಮ್ ರನ್ನು ಸಾರ್ವಜನಿಕವಾಗಿ ನಿಂದಿಸುವ ಮರ್ಮವೇನು, ಇದರಿಂದ ಸಾರ್ವಜನಿಕವಾಗಿ ಏನೂ ಸಂದೇಶ ಹೋಗುವುದು ಎಂದು ಊಹಿಸಿದ್ದೀರಾ? ಉದ್ದೇಶ ಪೂರ್ವಕವಾಗಿಯೇ ಈ ರೀತಿ ವರ್ತಿಸುತ್ತಿದ್ದೀರಾ? ನಿಮ್ಮ ವರ್ತನೆಯಿಂದ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲವೇ? ನಿಮಗೆ ಹಾಸನ ಜಿಲ್ಲೆಯ ಬಗ್ಗೆ ಆಸಕ್ತಿ ಇಲ್ಲದಿದ್ದರೆ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ’ ಎಂದು ಆಗ್ರಹಿಸಿದರು.
‘ನಿಮ್ಮ ಸರ್ವಾಧಿಕಾರಿ ಧೋರಣೆ ಹೀಗೆ ಮುಂದುವರಿದರೆ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಶಿವರಾಮ್ ರವರನ್ನು ಸಾರ್ವಜನಿಕವಾಗಿ ನಿಂದಿಸಿರುವುದಕ್ಕೆ ವಿಷಾದ ವ್ಯಕ್ತಪಡಿಸದಿದ್ದರೆ ನಿಮ್ಮ ವಿರುದ್ಧ ತೀವ್ರ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಿದರು.ಹೊಳೆನರಸೀಪುರ ತಾಲೂಕಿನ ಪಂಚಾಯಿತಿ ಮಾಜಿ ಸದಸ್ಯ ಜಕ್ಕೇನಹಳ್ಳಿ ಗೋಪಾಲ್, ಕಾಂಗ್ರೆಸ್ ಮುಖಂಡರು ಬಿ.ಆರ್. ಕಂಬೇಗೌಡರು, ವಕೀಲ ಡಿ.ಟಿ. ಪ್ರಸನ್ನ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ತಾಪಂ ಮಾಜಿ ಸದಸ್ಯ ಮಹೇಂದ್ರ, ವೈಎಸ್ ರಾಜು ಉಪಸ್ಥಿತರಿದ್ದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದೊರೆಸ್ವಾಮಿ.