ಸಿಎಂ, ಡಿಸಿಎಂ ಹುದ್ದೆ ಕೊಡುವಂತೆ ಕೇಳಿಲ್ಲ

KannadaprabhaNewsNetwork | Published : Dec 26, 2023 1:30 AM

ಸಾರಾಂಶ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಜಾಬ್‌ ನಿಷೇಧ ವಾಪಸ್‌ ತೆಗೆದುಕೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ನಮ್ಮ ಸರ್ಕಾರದ ನಿಲುವನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಿಎಂ, ಡಿಸಿಎಂ ಹುದ್ದೆ ನೀಡುವಂತೆ ನಾನೇನೂ ಕೇಳಿಲ್ಲ. ನನಗೆ ಹುದ್ದೆ ನೀಡುವುದು, ಬಿಡುವುದು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದು ನಿಜ. ಆದರೆ, ನಾನು ಸಿಎಂ, ಡಿಸಿಎಂ ಹುದ್ದೆ ಕೊಡುವಂತೆ ಹೇಳಿಲ್ಲ. ಲೋಕಸಭಾ ಚುನಾವಣೆ ವಿಚಾರವಾಗಿ ಚರ್ಚೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಜಾಬ್‌ ನಿಷೇಧ ವಾಪಸ್‌ ತೆಗೆದುಕೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ನಮ್ಮ ಸರ್ಕಾರದ ನಿಲುವನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮುಂಚೆ ತರಗತಿಯಲ್ಲಿ ಹಿಜಾಬ್ ಧಾರಣೆಗೆ ಅವಕಾಶ ಇತ್ತು. ಹಿಂದಿನ ಸರ್ಕಾರ ಹಿಜಾಬ್ ನಿಷೇಧ ಮಾಡಿತ್ತು, ನಾವು ಅದನ್ನು ಹಿಂಪಡೆಯುತ್ತೇವೆ. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಹಿಜಾಬ್ ನಿಷೇಧ ಹಿಂಪಡೆಯುವ ಕುರಿತು ಕೋರ್ಟ್ ಮುಂದೆ ಹೇಳುತ್ತೇವೆ ಎಂದರು.

ಸಕ್ಕರೆ ಸಚಿವ ಶಿವಾನಂದ ಪಾಟೀಲ ರೈತರ ವಿಚಾರದಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಒಮ್ಮೊಮ್ಮೆ ಗಾಡಿಗಳು ಓವರ್ ಸ್ಪೀಡ್ ಹೋಗುತ್ತವೆ. ಆಗ ಆಕ್ಸಿಡೆಂಟ್ ಆಗುತ್ತವೆ. ಎಲ್ಲ ಪಕ್ಷಗಳಲ್ಲೂ ಇದು ಸಾಮಾನ್ಯ. ಶಿವಾನಂದ ಪಾಟೀಲ ಏನೋ ಹೇಳಲು ಹೋಗಿದ್ದಾರೆ. ಒಮ್ಮೊಮ್ಮೆ ಯಡವಟ್ಟು ಆಗುತ್ತದೆ. ಬರಗಾಲ ಬರಲಿ ಎಂದು ಯಾರೂ ಬಯಸಲ್ಲ. ಬರಗಾಲ ಬಂದರೆ ರೈತ ಅಷ್ಟೇ ಅಲ್ಲ, ಗ್ರಾಹಕರು, ವ್ಯಾಪಾರಿಗಳ ಮೇಲೂ ಎಫೆಕ್ಟ್ ಇದೆ ಎಂದರು.

ಬರಗಾಲ ಎದುರಾದರೆ, ದೇಶದ ಜಿಡಿಪಿ‌ ಮೇಲೂ ದೊಡ್ಡ ಪ್ರಮಾಣದಲ್ಲಿ ಎಫೆಕ್ಟ್ ಆಗುತ್ತದೆ. ಮಳೆಗಾಲ ಬಂದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಬರ ಬಂದರೆ ಸಮಸ್ಯೆ ಆಗುತ್ತದೆ. ಶಿವಾನಂದ ಪಾಟೀಲ ಹಿರಿಯ ಸಚಿವರಿದ್ದಾರೆ, ಅವರಿಗೆ ನಾನೇನೂ ಹೇಳುವುದಿಲ್ಲ ಎಂದು ಹೇಳಿದರು.

ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪೈಕಿ ಒಂದು ಕ್ಷೇತ್ರದಲ್ಲಿ ಕುರುಬರಿಗೆ ಟಿಕೆಟ್‌ ನೀಡಲು ಚಿಂತನೆ ಮಾಡಲಾಗುತ್ತಿದೆ ಎಂದು ನಾನು ಕುರುಬರ ಸಮಾವೇಶದಲ್ಲಿ ಹೇಳಿದ್ದೆ ನಿಜ. ಆದರೆ, ಚಿಕ್ಕೋಡಿ ಕ್ಷೇತ್ರದಿಂದ ಇಬ್ಬರು ಕುರುಬ ಸಮುದಾಯಕ್ಕೆ ಸೇರಿದ ಟಿಕೆಟ್‌ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗುವುದು. ಮುಂಬರುವ ಸೋಮವಾರ ಇಲ್ಲವೇ ಮಂಗಳವಾರ ಎರಡೂ ಕ್ಷೇತ್ರಗಳಿಗೆ ಸಲ್ಲಿಕೆಯಾಗಿರುವ ಆಕಾಂಕ್ಷಿ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಹೈಕಮಾಂಡ್‌ಗೆ ಕಳುಹಿಸಲಾಗುವುದು ಎಂದು ಹೇಳಿದರು.

ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಕಮೀಟಿ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ವಿಧಾನ ಪರಿಷತ್‌ ಸದಸ್ಯ ನಾಗರಾಜ ಯಾದವ, ಲಕ್ಷ್ಮಣರಾವ್‌ ಚಿಂಗಳೆ, ಕಿರಣ ಸಾಧುನವರ ಸೇರಿದಂತೆ ಮುಂತಾದವರು ಇದ್ದರು.

--------------ಕೋಟ್..

ಸಕ್ಕರೆ ಸಚಿವ ಶಿವಾನಂದ ಪಾಟೀಲ ರೈತರ ವಿಚಾರದಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಒಮ್ಮೊಮ್ಮೆ ಗಾಡಿಗಳು ಓವರ್ ಸ್ಪೀಡ್ ಹೋಗುತ್ತವೆ ಆಗ ಆಕ್ಸಿಡೆಂಟ್ ಆಗುತ್ತವೆ, ಎಲ್ಲ ಪಕ್ಷಗಳಲ್ಲೂ ಇದು ಸಾಮಾನ್ಯ. ಶಿವಾನಂದ ಪಾಟೀಲ ಏನೋ ಹೇಳಲು ಹೋಗಿದ್ದಾರೆ. ಒಮ್ಮೊಮ್ಮೆ ಯಡವಟ್ಟು ಆಗುತ್ತದೆ. ಬರಗಾಲ ಬರಲಿ ಎಂದು ಯಾರೂ ಬಯಸಲ್ಲ. ಬರಗಾಲ ಬಂದರೆ ರೈತ ಅಷ್ಟೇ ಅಲ್ಲ, ಗ್ರಾಹಕರು, ವ್ಯಾಪಾರಿಗಳ ಮೇಲೂ ಎಫೆಕ್ಟ್ ಇದೆ.

ಸತೀಶ ಜಾರಕಿಹೊಳಿ. ಲೋಕೋಪಯೋಗಿ ಸಚಿವ

Share this article