ತಾಲೂಕು ಆಸ್ಪತ್ರೆಗಳಿಗೆ ತಂತ್ರಜ್ಞ ಸಹಿತ ಡಯಾಲಿಸಿಸ್ ಯಂತ್ರ

KannadaprabhaNewsNetwork | Updated : Dec 23 2023, 01:47 AM IST

ಸಾರಾಂಶ

ಮೂಡುಬಿದಿರೆ ಹಾಗೂ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಡಯಾಲಿಸಿಸ್ ಯಂತ್ರಗಳು ಹಾಗೂ ಟೆಕ್ನಿಷಿಯನ್‌ಗಳನ್ನು ಮುಂದಿನ ತಿಂಗಳೊಳಗೆ ಒದಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ಶುಕ್ರವಾರ ಮೂಡುಬಿದಿರೆ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಫಲಾನುಭವಿಗಳಿಗೆ ಹಕ್ಕುಪತ್ರಗಳ್ನು ವಿತರಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆಮೂಡುಬಿದಿರೆ ಹಾಗೂ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಡಯಾಲಿಸಿಸ್ ಯಂತ್ರಗಳು ಹಾಗೂ ಟೆಕ್ನಿಷಿಯನ್‌ಗಳನ್ನು ಮುಂದಿನ ತಿಂಗಳೊಳಗೆ ಒದಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.

ಮುಂದಿನ ತಿಂಗಳಿನಿಂದ ತಾಲೂಕುವಾರು ಜನಸ್ಪಂದನ ಸಭೆ ನಡೆಸಿ ಸ್ಥಳೀಯವಾದ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಜನಸಾಮಾನ್ಯರು ಸಲ್ಲಿಸುವ ಅರ್ಜಿಗಳು ಕಾಲಮಿತಿಯೊಳಗೆ ಇತ್ಯರ್ಥಗೊಳ್ಳಲು ಇದು ಸಹಕಾರಿಯಾಗಲಿದೆ ಎಂದ ಅವರು, ಜನರಿಗೆ ನೇರ ತಲುಪುವ ಸರ್ಕಾರದ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದು, ಯುವನಿಧಿಯನ್ನು ಮುಂದಿನ ತಿಂಗಳಿನಿಂದ ಜಾರಿಗೊಳಿಸಲಾಗುವುದು ಎಂದರು.

ಶಾಸಕ ಉಮನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಪೇಟೆಯ ಹೃದಯಭಾಗದಲ್ಲಿ ಪುರಸಭೆ ಮಾರುಕಟ್ಟೆಯ ಕಾಮಗಾರಿ ಕಾನೂನು ತೊಡಕಿನಿಂದಾಗಿ ಅರ್ಧದಲ್ಲೇ ನಿಂತಿದೆ. ಇದರಿಂದ ವ್ಯಾಪಾರಿಗಳಿಗೆ ಮಾತ್ರವಲ್ಲ ಜನರಿಗೂ ತೊಂದರೆಯಾಗುತ್ತಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸಚಿವರ ಗಮನಕ್ಕೆ ತಂದರು. ಈ ಕುರಿತು ಪರಿಶೀಲಿಸಿ, ಮಾರುಕಟ್ಟೆ ನಿರ್ಮಾಣಕ್ಕೆ ಪೂರಕವಾದ ಪ್ರಯತ್ನಗಳನ್ನು ಮಾಡುವಂತೆ ಸಚಿವರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಹಾಯಕ ಆಯುಕ್ತ ಹರ್ಷವರ್ಧನ್, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ರಾಮ ಕೆ. ಫಲಾನುಭವಿಗಳ ವಿವರ ನೀಡಿದರು. ಒಟ್ಟು 109 ಮಂದಿಗೆ ಪಿಂಚಣಿ, 94ಸಿ, 94ಸಿಸಿಯಡಿ ಆದೇಶ ಪತ್ರ ವಿತರಿಸಲಾಯಿತು.

ಆಸ್ಪತ್ರೆಯ ಆರೋಗ್ಯ ವಿಚಾರಿಸದ ಆರೋಗ್ಯ ಸಚಿವರು!- ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಮೂಡುಬಿದಿರೆ ತಾಲೂಕಿಗೆ ಭೇಟಿ ನೀಡಿದರೂ ತೀವ್ರ ಅನಾರೋಗ್ಯದಲ್ಲಿರುವ ಇಲ್ಲಿನ ತಾಲೂಕು ಆಸ್ಪತ್ರೆಯತ್ತ ತಿರುಗಿಯೂ ನೋಡದೇ ಮರಳಿ ಹೋದದ್ದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಮುಂದಿನ ತಿಂಗಳೊಳಗೆ ಇಲ್ಲಿನ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಮತ್ತು ಟೆಕ್ನೀಶಿಯನ್‌ಗಳನ್ನು ಒದಗಿಸಲಾಗುವುದು ಎನ್ನುವ ಹೇಳಿಕೆ ಬಿಟ್ಟರೆ ತೀವ್ರ ಅಸ್ವಸ್ಥಗೊಂಡಿರುವ ಇಲ್ಲಿನ ತಾಲೂಕು ಆಸ್ಪತ್ರೆಗೆ ಬೇರೇನೂ ಸಿಗಲಿಲ್ಲ.

ಆಡಳಿತ, ಹಿರಿಯ ವೈದ್ಯಾಧಿಕಾರಿ ಸಹಿತ 53ರಲ್ಲಿ 31 ಹುದ್ದೆಗಳು ಖಾಲಿ ಬಿದ್ದು ಅಕ್ಷರಶಃ ನರಳುತ್ತಿರುವ ತಾಲೂಕು ಆಸ್ಪತ್ರೆಯ ಬಗ್ಗೆ ಆಳುವವರ ಗಮನ ಸೆಳೆಯಲಾಗಿದ್ದರೂ ಸಚಿವರು ಇತ್ತ ಮುಖ ಮಾಡಿಲ್ಲ.

ಆಸ್ಪತ್ರೆಗೆ ಭೇಟಿ ನೀಡುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಕೂಡ ಆಸ್ಪತ್ರೆಗೆ ಬಂದಿದ್ದರೂ ಸಚಿವರು ಅದಾಗಲೇ ಹಕ್ಕು ಪತ್ರ ವಿತರಣೆಯ ಕಾರ್ಯಕ್ರಮ ಮುಗಿದ ಬಳಿಕ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿ ಅಲ್ಲಿಂದ ಮಂಗಳೂರಿಗೆ ವಾಪಾಸಾದರು ಎನ್ನಲಾಗಿದೆ.

Share this article