ಖಿರಾಅತ್ ಖುರ್ ಆನ್ ಪಠಣ ಸ್ಪರ್ಧೆ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ
ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಿಂದ ಅಲ್ಪಸಂಖ್ಯಾತರು, ಮುಸ್ಲಿಮರು, ದಲಿತರು ಬಹಳ ಹಿಂದುಳಿದಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ನಗರದ ಫಿರ್ದೋಸ್ ಸಾಂಸ್ಕೃತಿಕ, ಕ್ರೀಡಾ ಹಾಗೂ ತರಬೇತಿ ಸಂಸ್ಥೆಯಿಂದ ದಿ. ನಿವೃತ್ತ ಶಿಕ್ಷಕ ಹಾಜಿ ಮೊಹಮ್ಮದ್ ವಹಿದುದ್ದೀನ್ ಅಹ್ಮದ್ ಸ್ಮರಣಾರ್ಥ ಫಿರ್ದೋಸ್ ಮಸೀದಿಯ ಹಾಲ್ನಲ್ಲಿ ನಡೆದ ಖಿರಾಅತ್ ಖುರ್ ಆನ್ ಪಠಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದಂತಹ ಸಂವಿಧಾನದ ಆಶಯದಂತೆ ಎಲ್ಲರೂ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಪಡೆಯಬಹುದು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವ ಮೂಲಕ ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವಂತಹ ಕೆಲಸ ಇಂತಹ ಸಂಸ್ಥೆಗಳಿಂದ ಮಾತ್ರ ಮಾಡಲು ಸಾಧ್ಯ ಎಂದರು.ವಿಶೇಷ ಆಹ್ವಾನಿತರಾಗಿದ್ದ ಹೊಸಪೇಟೆಯ ಮದರಸಾ ಎ ಹಿಮಾಯತುಲ್ ಇಸ್ಲಾಂ ಅರೇಬಿಕ್ ಕಾಲೇಜಿನ ಪ್ರಾಂಶುಪಾಲ ಹಾಫಿಝ್ ವ ಖಾರಿ ಮೊಹಮ್ಮದ್ ಹಿದಾಯತುಲ್ಲಾ ರಹೆಮಾನಿ ಮಾತನಾಡಿ, ತಂದೆ-ತಾಯಿ ಇಬ್ಬರೂ ಮಕ್ಕಳಿಗೆ ಜನ್ಮ ನೀಡುತ್ತಾರೆ. ಆದರೆ ಶಿಕ್ಷಕರು ವಿದ್ಯೆ ನೀಡಿ ಅವರ ಭವಿಷ್ಯ ರೂಪಿಸುತ್ತಾರೆ. ಯಾವ ಶಿಕ್ಷಕರು ವಿದ್ಯಾರ್ಥಿಗಳ ವೈರಿಗಳಾಗಿರುವುದಿಲ್ಲ. ಎಲ್ಲ ವಿದ್ಯಾರ್ಥಿಗಳನ್ನು ಸಮಾನ ದೃಷ್ಟಿಯಿಂದ ನೋಡುತ್ತಾ ಅವರಿಗೆ ವಿದ್ಯಾ ದಾನ ನೀಡಿ ಉತ್ತಮ ನಾಗರಿಕರನ್ನಾಗಿ ತಯಾರಿಸುತ್ತಾರೆ ಎಂದರು.
ಮದರಸಾ ಎ ಫಿರ್ದೋಸ್ ಉಲ್ ಉಲೂಮ್ ಅರೇಬಿಕ್ ಶಾಲೆಯ ಮುಖ್ಯೋಪಾಧ್ಯಯ ಮೌಲಾನಾ ಸಿರಾಜುದ್ದೀನ್ ರಶಾದಿ ಮಾತನಾಡಿದರು.
ಹಿರಿಯ ಮುಖಂಡ ಬಹದ್ದೂರ್ ಖಾನ್, ಫಜಲ್ ಅಹಮದ್ ಖಾನ್, ಸುನ್ನಿ ಮುಸ್ಲಿಮ್ ಶಾದಿ ಮಹಲ್ ಕಮಿಟಿ ಅಧ್ಯಕ್ಷ ಅಝೀಝ್ ಎ ಚೌಥಾಯಿ, ನಿವೃತ್ತ ಉಪನ್ಯಾಸಕ ಮೊಹಮ್ಮದ್ ಅನ್ವರ್, ನಗರಸಭೆ ಮಾಜಿ ಸದಸ್ಯ ಮಾನ್ವಿ ಪಾಶ, ಎಂ. ಪಾಷಾ ಕಾಟನ್, ಜಮೀರ್ ಅಹ್ಮದ್, ಫಿರ್ದೋಸ್ ಸಾಂಸ್ಕೃತಿಕ, ಕ್ರೀಡಾ ಹಾಗೂ ತರಬೇತಿ ಸಂಸ್ಥೆಯ ಖಜಾಂಚಿ ಮೊಹಮ್ಮದ ಎಜಾಝ್ ಅಹ್ಮದ್ ಮುಂತಾದವರಿದ್ದರು.