- 9ನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಡಾ.ಸಿದ್ದೇಶ್ವರ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಡಾ.ಅಬ್ದುಲ್ ಕಲಾಂ ದೇಶ ಕಂಡ ಧೀಮಂತ ನಾಯಕ. ಮಿಸೈಲ್ ಮ್ಯಾನ್ ಎಂದೇ ಖ್ಯಾತಿ ಗಳಿಸಿದ್ದ ಅವರು ದೇಶದ ರಾಷ್ಟ್ರಪತಿಯಾಗಿ ತಮ್ಮ ಕರ್ತವ್ಯದಲ್ಲಿ ಕಪ್ಪುಚುಕ್ಕೆ ಬಾರದಂತೆ ಕಾರ್ಯನಿರ್ವಹಿಸಿದ್ದಾರೆ. ಅಂತಹ ಅದ್ಭುತ ಪ್ರತಿಭೆ ಇಂದಿಗೂ 140 ಕೋಟಿ ಭಾರತೀಯರ ಮನಸ್ಸಿನಲ್ಲಿ ನೆಲೆಸಿದ್ದಾರೆ ಎಂದು ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಹೇಳಿದರು.ನಗರದ ಶ್ರೀಮತಿ ಗೌರಮ್ಮ ಡಿ.ಎಂ.ಹನಗೋಡಿಮಠ ನರ್ಸರಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ 9ನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಕಲಾಂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಡಾ.ಅಬ್ದುಲ್ ಕಲಾಂ ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರು ಇಡೀ ದೇಶದ ಆಸ್ತಿಯಾಗಿದ್ದಾರೆ ಎಂದರು.
ಅತ್ಯಂತ ಕಡುಬಡತನದಲ್ಲಿ ವಿದ್ಯಾಭ್ಯಾಸ ಮಾಡಿದ ಕಲಾಂ, ದೇಶದ ರಾಷ್ಟ್ರಪತಿಯಂಥ ಅತ್ಯುನ್ನತ ಸ್ಥಾನಕ್ಕೇರಿದರು. ಬಹಳ ಸರಳತೆಯ ನಡೆ-ನುಡಿ ಹೊಂದಿದ್ದರು. ಅವರು ಇನ್ನೂ ಹತ್ತು ವರ್ಷ ರಾಷ್ಟ್ರಪತಿಯಾಗಿ ಇರಬೇಕಿತ್ತು. ಪೋಖ್ರಾನ್ ಅಣುಪರೀಕ್ಷೆಯಲ್ಲಿ ಅಬ್ದುಲ್ ಕಲಾಂ ಪಾತ್ರ ಮಹತ್ವದ್ದಾಗಿದೆ. ಅಂತಹ ಮಹನೀಯರ ಜೀವನ ಸಂದೇಶ ಮಕ್ಕಳಿಗೆ ಪ್ರೇರಣೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಇದೇ ವೇಳೆ ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ವಿತರಿಸಲಾಯಿತು. ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ನಾಸಿರ್ ಅಹ್ಮದ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿಕಟಪೂರ್ವ ನಿರ್ದೇಶಕ ಗೌತಮ್ ಜೈನ್, ಮುಖಂಡರಾದ ಟಿಪ್ಪು ಸುಲ್ತಾನ್, ಇಕ್ಬಾಲ್ ಅಹ್ಮದ್, ಶಮೀರ್ ಆಲಂ ಖಾನ್ ಮತ್ತಿತರರು ಹಾಜರಿದ್ದರು.
- - - -27ಕೆಡಿವಿಜಿ42ಃ:ಮಾಜಿ ರಾಷ್ಟ್ರಪತಿ, ದಿ. ಡಾ. ಎಪಿಜೆ ಅಬ್ದುಲ್ ಕಲಾಂ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ಅವರು ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ ವಿತರಿಸಿದರು.