ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರ ಜಲಪಾತ ಬಳಿ 15 ವರ್ಷದ ಬಾಲಕಿ ನಿಗೂಢ ನಾಪತ್ತೆ
ಪ್ರವಾಸಕ್ಕೆ ಚಿಕ್ಕಮಗಳೂರಿಗೆ ಬಂದಿದ್ದ ಕೇರಳ ಮೂಲದ ಬಾಲಕಿ ಪತ್ತೆ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು, ಯಾವುದೇ ಸಣ್ಣ ಸುಳಿವು ಸಿಕ್ಕಿಲ್ಲ.
ಬೇಸಿಗೆ ರಜೆ ಪ್ರವಾಸಕ್ಕೆಂದು ಮಂಗಳವಾರ ಚಿಕ್ಕಮಗಳೂರಿಗೆ 40 ಮಂದಿಯ ಕುಟುಂಬ ಆಗಮಿಸಿತ್ತು. ದತ್ತಪೀಠದ ತಪ್ಪಲಿ ನ ಪ್ರಸಿದ್ಧ ಮಾಣಿಕ್ಯಾಧಾರ ಜಲಪಾತದ ಬಳಿ 15 ವರ್ಷದ ಬಾಲಕಿ ಅಂದು ಸಂಜೆ 5.30ರ ಸುಮಾರಿಗೆ ನಿಗೂಢವಾಗಿ ನಾಪತ್ತೆ ಯಾಗಿದ್ದಳು. ಪೊಲೀಸರಿಗೆ ಮಾಹಿತಿ ನೀಡುತ್ತಿದಂತೆ ರಾತ್ರಿಯಿಂದಲೇ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟು ಶೋಧ ನಡೆಸುತ್ತಿದ್ದಾರೆ.ಪೊಲೀಸರಿಗೆ, ಅರಣ್ಯ ಇಲಾಖೆ, ಅಗ್ನಿ ಶಾಮಕ ಇಲಾಖೆ, ಡಾಗ್ ಸ್ಕ್ವಾಡ್, ಎಸ್ಡಿಆರ್ಎಫ್ ಅಧಿಕಾರಿ, ಸಿಬ್ಬಂದಿ ಸಾಥ್ ನೀಡುತ್ತಿದ್ದಾರೆ. ಸತತ 24 ಗಂಟೆಗಳ ಕಾಲ ಶೋಧ ನಡೆಸಿದರೂ ಈವರೆಗೆ ಯಾವುದೇ ಸಣ್ಣ ಸುಳಿವು ದೊರೆಯದಿರುವುದು ಅಚ್ಚರಿ ಉಂಟು ಮಾಡಿದೆ. ಶೋಧ ಕಾರ್ಯಕ್ಕೆ ಅರಣ್ಯ ಇಲಾಖೆಯಿಂದ ಥರ್ಮಲ್ ಡೋನ್ ಕ್ಯಾಮೆರಾಗಳನ್ನು ಬಳಸಲಾಗಿದೆ.
ಕ್ಷಣಾರ್ಧದಲ್ಲಿ ಮಾಯವಾದ ಬಾಲಕಿ
ನಿಗೂಢತೆಗೆ ಕಾರಣವೇನು?ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಲು ಜಾರಿ ಅಥವಾ ಮಂಜು ಮುಸುಕಿದ ವಾತಾವರಣದಲ್ಲಿ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಆದರೆ, ಈಗ ಕಡು ಬೇಸಿಗೆ ಇರುವುದರಿಂದ ನೆಲ ಒಣಗಿದೆ. ಬಾಲಕಿ ನಾಪತ್ತೆಯಾದ ಒಂದು ಗಂಟೆ ಒಳಗೇ ಹತ್ತಾರು ಜನರು ಆ ಭಾಗದಲ್ಲಿ ಹುಡುಕಾಡಿದರೂ ಸಿಗದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ವಾಹನಗಳ ಪರಿಶೀಲನೆ: ಬಾಲಕಿ ಕಾಣೆಯಾದ ಸಮಯದಲ್ಲಿ ಆ ಸ್ಥಳದಿಂದ ತೆರಳಿದ ವಾಹನಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮುಖ್ಯವಾಗಿ ಬಾಲಕಿ ಇನ್ನೂ 10ನೇ ತರಗತಿ ಆಗಿರುವುದರಿಂದ ಯಾವುದೇ ಮೊಬೈಲ್ ಫೋನ್ ಬಳಕೆ ಮಾಡುತ್ತಿರಲಿಲ್ಲ. ಇದು ಬಾಲಕಿ ಪತ್ತೆಗೆ ದೊಡ್ಡ ಸವಾಲಾಗಿದೆ.