- ಸರ್ಕಾರಗಳು ಕಾಯ್ದೆಯಲ್ಲಿ ಬದಲಾವಣೆ ತರಲಿ: ರಾಜು
ಕನ್ನಡಪ್ರಭ ವಾರ್ತೆ ಜಗಳೂರು
ಎನ್ಬಿಎಫ್ಸಿ ಬ್ಯಾಂಕ್ಗಳು ಸರ್ಫೇಸಿ ಕಾಯ್ದೆ ದುರುಪಯೋಗ ಮಾಡಿಕೊಳ್ಳುತ್ತಿವೆ. ಇಂತಹ ಕಾಯ್ದೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ರೀತಿಯಲ್ಲಿ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹುಚ್ಚವ್ವನಹಳ್ಳಿ ಮಂಜುನಾಥ ಬಣದಿಂದ ಶನಿವಾರ ಜಗಳೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಹೇಳಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗಳೂರು ತಾಲೂಕಿನ ಪಾಲನಾಯಕನಕೋಟೆ, ಮಿನುಗರಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಕೆಲವು ರೈತರ ಮೇಲೆ ಎನ್ಬಿಎಫ್ಸಿ ಬ್ಯಾಂಕ್ಗಳು ಸಾಲ ನೀಡಿ, ಸಾಲ ನೀಡಿದವರ ಮೇಲೆ ಸರ್ಫೇಸಿ ಕಾಯ್ದೆ ದುರುಪಯೋಗ ಮಾಡಿಕೊಳ್ಳುತ್ತಿವೆ. ದೌರ್ಜನ್ಯ ಮಾಡುತ್ತಿರುವುದು ಸಹ ಕಂಡುಬಂದಿದೆ ಎಂದರು.
ಸರ್ಫೇಸ್ ಕಾಯ್ದೆಯಲ್ಲಿ ಬದಲಾವಣೆ ತರಬೇಕು ಅಥವಾ ಕಾನೂನಿನಲ್ಲಿ ಸಾಲಗಾರನಿಗೂ ಅವಕಾಶ ಇರುವಂತೆ ಉಪ ಕಾಯ್ದೆ ತರಬೇಕು. ಇಲ್ಲವಾದರೆ ಬ್ರಿಟಿಷರು ಮಾಡಿರುವ ಇಂತಹ ಕಾನೂನನ್ನು ಮೊದಲು ಸಂಪೂರ್ಣ ತೆಗೆದು ಹಾಕಬೇಕು. ಈ ಬ್ಯಾಂಕುಗಳು ದಾವಣಗೆರೆ ಜಿಲ್ಲಾ, ತಾಲೂಕು ನ್ಯಾಯಾಲಯಗಳಲ್ಲಿ ಗ್ರಾಹಕರ ವಿರುದ್ಧ ದಾವೆ ಹಾಕದೇ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹೀಗೆ ಬೇರೆ ಬೇರೆ ಕಡೆಗಳಲ್ಲಿ ದಾವೆ ಹಾಕಿ, ರೈತರಿಗೆ ಅಲೆದಾಡಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಪಾಧ್ಯಕ್ಷ ಗುರುಸಿದ್ದಪ್ಪ, ತಾಲೂಕು ಹಸಿರು ಸೇನೆ ಅಧ್ಯಕ್ಷ ನಾಗಪ್ಪ, ಪದಾಧಿಕಾರಿಗಳಾದ ಕ್ಯಾಸನಹಳ್ಳಿ ಬಸಣ್ಣ, ವೀರೇಶ್, ಬೈರನಾಯ್ಕನಹಳ್ಳಿ ಅಂಜಿನಪ್ಪ, ರಾಜಣ್ಣ ಮತ್ತಿತರರು ಇದ್ದರು.- - -
-02ಜೆ.ಜಿ.ಎಲ್.1: