ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ವ್ಯಾಪ್ತಿಯಲ್ಲಿ ಅನಧಿಕೃತ ಪತ್ರಕರ್ತರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ಪತ್ರಕರ್ತರ ಸೋಗಿನಲ್ಲಿ ಆಕ್ರಮ ಚಟುವಟಿಕೆ ನಡೆಸಲಾಗುತ್ತಿದ್ದು ಇದಕ್ಕೆ ಕೂಡಲೆ ಕಡಿವಾಣ ಹಾಕಬೇಕು. ಹಾಗೂ ಅವರ ವಾಹನಗಳಲ್ಲಿ ಮೀಡಿಯಾ ಸ್ಟಿಕ್ಕರ್ ಬಳಕೆ ಮಾಡಿ ದುರ್ಬಳಕೆ ಮಾಡದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಇತ್ತೀಚೆಗೆ ದೂರು ನೀಡಲಾಯಿತು.ಕೆಲವೊಂದು ಯೂಟ್ಯೂಬರ್ಸ್ ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು ತಾವು ಪತ್ರಕರ್ತರು ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳಿಗೆ ಪೊಲೀಸರು ಹಾಗೂ ಜನಪ್ರತಿನಿಧಿಗಳ ಬಳಿ ಮಾಹಿತಿ ಪಡೆದು, ವ್ಯಾಪಾರಸ್ಥರಿಗೆ ಬೆದರಿಸುವ ಕೆಲಸ ಮಾಡುತ್ತಿರುವುದು ಸಂಘದ ಗಮನಕ್ಕೆ ಬಂದಿರುತ್ತದೆ. ಪತ್ರಕರ್ತರೆಂದು ಬಿಂಬಿಸಿ ವಾಹನಗಳಲ್ಲಿ ತಿರುಗಾಡುವ ನಕಲಿ ಪತ್ರಕರ್ತರು ಆಧಾರ ರಹಿತ ಸುದ್ದಿಗಳನ್ನು ಪ್ರಕಟಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವುದರ ಜೊತೆಗೆ ಪತ್ರಕರ್ತರ ಘನತೆಯ ದಕ್ಕೆ ತರುವ ಕೆಲಸ ನಡೆಯುತ್ತಿದೆ ಎಂದು ಗಮನಕ್ಕೆ ತರಲಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ತಕ್ಷಣವೇ ನಕಲಿ ಪತ್ರಕರ್ತ ಬಗ್ಗೆ ಮಾಹಿತಿ ಕಲೆ ಹಾಕಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ನಗರ ಪಿಎಸ್ ಐ ಸಂದೀಪ್ ಶೆಟ್ಟಿಗೆ ಸೂಚನೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಷರೀಫ್, ಉಪಾಧ್ಯಕ್ಷ ಹರೀಶ್ ಸಚ್ಚೇರಿಪೇಟೆ, ಜಿಲ್ಲಾ ಸಮಿತಿ ಸದಸ್ಯರಾದ ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ಯ, ಜತೆ ಕಾರ್ಯದರ್ಶಿ ವಾಸುದೇವ ಭಟ್, ಕೋಶಾಧಿಕಾರಿ ಕೆ.ಎಂ. ಖಲೀಲ್, ಸದಸ್ಯರಾದ ರಮಾನಂದ ಅಜೆಕಾರು, ಹರಿಪ್ರಸಾದ್ ನಂದಳಿಕೆ, ಸತೀಶ್ ಶೆಟ್ಟಿ, ಸಂಪತ್ ನಾಯಕ್ ಇದ್ದರು.