ಕನ್ನಡಪ್ರಭ ವಾರ್ತೆ ಮೈಸೂರು
ಕುವೆಂಪುನಗರದ ಕಾಂಗ್ರೆಸ್ ಮುಖಂಡರಾದ ರಮೇಶ್ ರಾಮಪ್ಪ ಅವರ ನೇತೃತ್ವದಲ್ಲಿ ಚಿಕ್ಕರದನಹಳ್ಳಿ ಛಾಯಾದೇವಿ ಆಶ್ರಮದ ಮಕ್ಕಳಿಗೆ ಬೆಳಗಿನ ಉಪಾಹಾರ ವಿತರಿಸಿದರು.
ನಂತರ ಅಶೋಕಪುರಂ ಜೋಗಿ ಮಹೇಶ್ ನೇತೃತ್ವದಲ್ಲಿ ಕೌಸ್ತುಭ ಫೈನಾನ್ಸ್ ಬಳಗದ ವತಿಯಿಂದ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಲಾಯಿತು. ವಿದ್ಯಾರಣ್ಯಪುರಂನಲ್ಲಿ ಶಿವಕುಮಾರ್ ಅವರ ಮಾಲೀಕತ್ವದ ಆಟೋ ಎಂಜಿನಿಯರಿಂಗ್ ಗ್ಯಾರೇಜ್ ಉದ್ಘಾಟಿಸಿ ಕೇಕ್ ಕತ್ತರಿಸಿ ನಂತರ ಸೂಯೇಜ್ ಫಾರಂ ರಸ್ತೆಯಲ್ಲಿ ಬೆಸ್ತರ ಸಮುದಾಯದ ಬಳಿ ಕಂಸಾಳೆ ರವಿ, ಕೇಬಲ್ ಮಹದೇವು, ಬಾರ್ ಬೆಂಡಿಂಗ್ ಮಲ್ಲೇಶ್ ಅವರ ಸಮ್ಮುಖದಲ್ಲಿ ಬೃಹತ್ ಸೇಬಿನ ಹಾರ ಹಾಕಿ ಬೃಹತ್ ಕೇಕ್ ಕತ್ತರಿಸಲಾಯಿತು.ಕಾಂಗ್ರೆಸ್ ಮುಖಂಡ ಹರೀಶ್ ನೇತೃತ್ವದಲ್ಲಿ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅರಳೀಕಟ್ಟಿ ಬಳಿ ಸಾರ್ವಜನಿಕರಿಗೆ ಅನ್ನದಾನ ನೆರವೇರಿಸಿದರು. ಕನಕಗಿರಿ ಅರಳಿಕಟ್ಟೆ ಗಣಪತಿ ದೇವಸ್ಥಾನದ ಬಳಿ ಕೇಕ್ ಕತ್ತರಿಸಲಾಯಿತು. ನಂತರ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಕೇಂದ್ರ ಕಾರ್ಖಾನೆಯಲ್ಲಿ ಯೂನಿಯನ್ ಪದಾಧಿಕಾರಿಗಳು ಸೋಮಶೇಖರ್ ಹುಟ್ಟುಹಬ್ಬ ಆಚರಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯ ಎಂ. ಸುನೀಲ್, ಶೋಭಾ ಸುನೀಲ್ ಮತ್ತು ವಿದ್ಯಾರಣ್ಯಪುರಂ ಬಳಗದ ವತಿಯಿಂದ ಪೌರ ಕಾರ್ಮಿಕರೊಂದಿಗೆ ಜನ್ಮದಿನಾಚರಣೆ, ನಂತರ ಎಂ.ಕೆ. ಸೋಮಶೇಖರ್ ಅಭಿಮಾನಿಗಳ ಬಳಗ ಮತ್ತು ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಚಾಮುಂಡಿಪುರಂ ರಾಮಕೃಷ್ಣ ಆಸ್ಪತ್ರೆಯಲ್ಲಿ 15ಕ್ಕೂ ಹೆಚ್ಚು ಅಭಿಮಾನಿಗಳಿಂದ ರಕ್ತದಾನ ಶಿಬಿರ ಆಯೋಜಿಸಿ ಮಹಿಳೆಯರು ಸೋಮಶೇಖರ್ ಅವರನ್ನು ಸನ್ಮಾನಿಸಿದರು.
ನಂತರ ಚಾಮುಂಡಿಪುರಂ ವೃತ್ತದಲ್ಲಿ ವೀರಶೈವ ಮುಖಂಡರು ಹುಟ್ಟುಹಬ್ಬ ಆಚರಿಸಲಾಯಿತು. ರಾಮಾನುಜ ರಸ್ತೆಯ ಜಯಚಾಮರಾಜೇಂದ್ರ ಯುವ ಬಳಗದ ಆಶ್ರಯದಲ್ಲಿ ರವಿಶಂಕರ್, ರಾಕೇಶ್, ವಿನಯ್ ನೇತೃತ್ವದಲ್ಲಿ ಕೇಕ್ ಕತ್ತರಿಸಿ, ಶರಬತ್ತು ವಿತರಿಸಲಾಯಿತು.ಅದೇ ವೇಳೆ ಕಾರ್ಯಕರ್ತ ಗಣೇಶ್ ರಾವ್ (ಪ್ರತಾಪ್) ಅವರು ತಮ್ಮ ರಕ್ತದಲ್ಲಿ ಚಿತ್ರಿಸಿದ ಸೋಮಶೇಖರ್ ಅವರ ಭಾವಚಿತ್ರ ನೀಡಿ ಅಭಿಮಾನ ಮೆರೆದರು. ವಿದ್ಯಾರಣ್ಯ ಸೇವಾ ಸಮಿತಿ ವತಿಯಿಂದ ಕಂಸಾಳೆ ಮಹದೇವಯ್ಯ ವೃತ್ತದಲ್ಲಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದರು. ಕುರುಬಾರಳ್ಳಿಯ ಕೆ.ಆರ್.ಎಂ ಮಹದೇವು ಮತ್ತು ಸ್ನೇಹಿತರು ಕುರುಬಾರಳ್ಳಿ ವೃತ್ತದಲ್ಲಿ ಸೋಮಶೇಖರ್ ಅವರ ಜನ್ಮದಿನಾಚರಣೆ, ನಂತರ ನಗರ ಪಾಲಿಕೆ ಮಾಜಿ ಸದಸ್ಯ ಮಾ.ವಿ. ರಾಮಪ್ರಸಾದ್ ನೇತೃತ್ವದ ಅರುಣೋದಯ ವಿಶೇಷ ಮಕ್ಕಳ ಶಾಲೆಯಲ್ಲಿ ಸಮವಸ್ತ್ರ ಮತ್ತು ಸಿಹಿ ವಿತರಿಸಲಾಯಿತು.
ಮುಖಂಡರಾದ ಯೋಗಿ ಮತ್ತು ಮಂಜುನಾಥ್ ಅವರ ನೇತೃತ್ವದಲ್ಲಿ ಜಯನಗರದ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ ಲೇಖನ ಸಾಮಗ್ರಿ ಮತ್ತು ಸಿಹಿ ವಿತರಿಸಲಾಯಿತು.ಸಂಜೆಯೂ ಕ್ಷೇತ್ರದ ಹಲವೆಡೆ ಕಾರ್ಯಕರ್ತರೂ ವಿವಿಧ ಕಾರ್ಯಕ್ರಮ ಆಯೋಜಿಸಿದ್ದರು. ಕುವೆಂಪುನಗರದ ಚಿಕ್ಕಮ್ಮ ನಿಕೇತನ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದ್ದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಅವರು ಭಾರತ ಸಂವಿಧಾನ ಒಂದು ವರ್ಗಕ್ಕೆ ಮೀಸಲಾ? ಎಂಬ ವಿಚಾರದ ಬಗ್ಗೆ ವಿಚಾರ ಮಂಡಿಸಿದರು.
ಹಿರಿಯ ರಾಜಕಾರಣಿಗಳು, ಮಾಜಿ ಮೇಯರ್ಗಳು, ನಗರ ಪಾಲಿಕೆ ಮಾಜಿ ಸದಸ್ಯರು, ವಿವಿಧ ನಿಗಮ ಮಂಡಳಿಯ ಹಾಲಿ ಅಧ್ಯಕ್ಷರು, ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸಾಹಿತಿಗಳು, ಚಿಂತಕರು, ಎಂ.ಕೆ. ಸೋಮಶೇಖರ್ ಅವರ ಅಭಿಮಾನಿಗಳು, ಹಿತೈಷಿಗಳು ಭಾಗವಹಿಸಿದ್ದರು.ವಿಚಾರ ಮಂಡನೆಯ ನಂತರ ಎಂ.ಕೆ. ಸೋಮಶೇಖರ್ ಅವರಿಗೆ ವೇದಿಕೆಯಲ್ಲಿ ಶುಭಕೋರಲು ಅನುವು ಮಾಡಿಕೊಡಲಾಯಿತು.