ಪೆನ್‌ಡ್ರೈವ್‌ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಶಾಸಕ ಎ.ಮಂಜು ಒತ್ತಾಯ

KannadaprabhaNewsNetwork | Published : May 9, 2024 1:02 AM

ಸಾರಾಂಶ

ರಾಜಕಾರಣದಿಂದ ಇಂದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವುದು ಅಸಹ್ಯದ ವಿಚಾರವಾಗಿದೆ. ತಪ್ಪು ಯಾರದ್ದೇ ಇರಲಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಒತ್ತಾಯಿಸಿದರು. ರಾಮನಾಥಪುರ ಕಾವೇರಿ ನದಿಯ ವಹ್ನಿ ಪುಷ್ಕರಣಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಮನಾಥಪುರ: ರಾಜಕಾರಣದಿಂದ ಇಂದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವುದು ಅಸಹ್ಯದ ವಿಚಾರವಾಗಿದೆ. ತಪ್ಪು ಯಾರದ್ದೇ ಇರಲಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಒತ್ತಾಯಿಸಿದರು.

ರಾಮನಾಥಪುರ ಕಾವೇರಿ ನದಿಯ ವಹ್ನಿ ಪುಷ್ಕರಣಿಗೆ ಭೇಟಿ ನೀಡಿದ ಅವರು ಇಲ್ಲಿಯ ಮೀನು ಇರುವ ಸ್ಥಳದಲ್ಲಿ ನದಿ ನೀರು ಕಡಿಮೆಯಾಗಿ ಮೀನು ರಕ್ಷಣೆ ಮಾಡಲು ವಹ್ನಿಪುಷ್ಕರಣಿಯ ಕೆಳಭಾಗದಲ್ಲಿ ಈ ಹಿಂದೆ ಮಾಡಿರುವ ಕಟ್ಟೆಗೆ ಹೆಚ್ಚಿನ ರೀತಿಯಲ್ಲಿ ಮರಳು ಮತ್ತು ಕಲ್ಲು ಹಾಕಿ ನೀರಿನ ಮಟ್ಟ ಹೆಚ್ಚಿಸುವಂತೆ ತಾಲೂಕಿನ ತಹಸೀಲ್ದಾರ್ ಅವರಿಗೆ ಸೂಚಿಸಿ ನಂತರ ವರದಿಗಾರರೊಂದಿಗೆ ಮಾತನಾಡಿದರು.

ಪೆನ್‌ಡ್ರೈವ್‌ ವಿಡಿಯೋ ಹಗರಣ ಕುರಿತ ಪ್ರಶ್ನೆಗೆ ಉತ್ತರಿಸಿ, ‘ಕರ್ನಾಟಕ ರಾಜಕಾರಣದ ಭೀಷ್ಮ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದೆ. ಈ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಚರ್ಚಿಸಿದೆ. ಅವರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಿದೆ. ಅವರಿಗೆ ಧೈರ್ಯ ಹೇಳುವಷ್ಟು ದೊಡ್ಡವನು‌ ನಾನಲ್ಲಾ. ಆದರೆ ಈ ನೋವಿನ ದಿನಗಳಲ್ಲಿ ಅವರ ಜೊತೆಯಲ್ಲಿ ನಿಲ್ಲಬೇಕಾಗಿರುವುದು ನನ್ನ ಹಾಗೂ ನಿಷ್ಠಾವಂತ ಜೆಡಿಎಸ್‌ ಹಾಗೂ ದೇವೆಗೌಡರ ಅಭಿಮಾನಿಗಳ ಕರ್ತವ್ಯವಾಗಿದೆ ಎಂದು ಎ. ಮಂಜು ತಿಳಿಸಿದರು.

ಈ ಸಂದರ್ಭದಲ್ಲಿ ಎ. ಮಂಜು ಅಭಿಮಾನಿಗಳು ಇದ್ದರು. ಅಶ್ಲೀಲ ವಿಡಿಯೋ ಪ್ರಕರಣ: ಆರೋಪಿಗಳ ಜಾಮೀನು ಅರ್ಜಿ ವಜಾ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಮಾಡಿದ ಆರೋಪ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಿಲ್ಲಾ 3ನೇ ಅಧಿಕ ಸತ್ರ ನ್ಯಾಯಾಲಯ ಬುಧವಾರ ವಜಾ ಮಾಡಿದೆ.ಸಂಸದರ ಕುರಿತ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ ಆರೋಪದ ಮೇಲೆ ಕಾರ್ತಿಕ್, ನವೀನ್, ಚೇತನ್, ಪುಟ್ಟಿ ಅಲಿಯಾಸ್‌ ಪುಟ್ಟರಾಜ್ ಮೇಲೆ ವಕೀಲ ಹಾಗೂ ಜೆಡಿಎಸ್ ಮುಖಂಡ ಪೂರ್ಣಚಂದ್ರ ಏ.23 ರಂದು ಸೆಷನ್ಸ್‌ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಇವರ ಅರ್ಜಿಯನ್ನು ವಜಾಗೊಳಿಸಿದೆ.

Share this article