ಮಳೆ ಹಾನಿ ಸ್ಥಳಕ್ಕೆ ಶಾಸಕ ಹಾಗೂ ಸಂಸದ ಹಿಟ್ನಾಳ ಭೇಟಿ

KannadaprabhaNewsNetwork |  
Published : Jun 14, 2024, 01:01 AM IST
13ಕೆಪಿಎಲ್27 ಮಳೆ ಹಾನಿ ಪ್ರದೇಶಕಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಭೇಟಿ ನೀಡಿರುವುದು. | Kannada Prabha

ಸಾರಾಂಶ

ಸಂಸದ ಕೆ.ರಾಜಶೇಖರ ಹಿಟ್ನಾಳ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಜಂಟಿಯಾಗಿ ಗುರುವಾರ ನಗರದಲ್ಲಿನ ವಿವಿಧೆಡೆ ಸಂಚರಿಸಿ ಮಳೆ ಹಾನಿ ಪ್ರದೇಶ ಪರಿಶೀಲಿಸಿದರು.

ಸಾಥ್ ನೀಡಿದ ಮಾಜಿ ಸಂಸದ ಸಂಗಣ್ಣ ಕರಡಿ

ಸಿದ್ದೇಶ್ವರ ನಗರ, ಗಣೇಶ ನಗರ ಸೇರಿದಂತೆ ಹಲವೆಡೆ ಭೇಟಿ

ಪರ್ಯಾಯ ಕ್ರಮಕ್ಕೆ ಶಾಸಕ ಹಿಟ್ನಾಳ ಸೂಚನೆಕನ್ನಡಪ್ರಭ ವಾರ್ತೆ ಕೊಪ್ಪಳ

ಸಂಸದ ಕೆ.ರಾಜಶೇಖರ ಹಿಟ್ನಾಳ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಜಂಟಿಯಾಗಿ ಗುರುವಾರ ನಗರದಲ್ಲಿನ ವಿವಿಧೆಡೆ ಸಂಚರಿಸಿ ಮಳೆ ಹಾನಿ ಪ್ರದೇಶ ಪರಿಶೀಲಿಸಿದರು.ನಗರದ 3ನೇ ವಾರ್ಡ್‌ನ ಕುವೆಂಪು ನಗರ, ಹಮಾಲರ ಕಾಲನಿ, ನಗರದ ಕಿನ್ನಾಳ ರಸ್ತೆಯಲ್ಲಿರುವ ಗಣೇಶ ತೆಗ್ಗು ಹಾಗೂ ಕಲ್ಯಾಣ ನಗರಕ್ಕೆ ಮತ್ತು ರೈಲ್ವೆ ಸ್ಟೇಷನ್ ರಸ್ತೆಯ ವಿವಿಧೆಡೆ ತೆರಳಿ ಪರಿಸ್ಥಿತಿ ಅವಲೋಕಿಸಿದರು.

ಈ ವೇಳೆ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಕಳೆದ ಕೆಲವು ದಿನಗಳಿಂದ ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಉತ್ತಮವಾಗಿ ಮಳೆಯಾಗಿದೆ. ಜಿಲ್ಲೆಯಲ್ಲಿ ಜೂನ್ 1 ರಿಂದ ಜೂನ್ 13ರವರೆಗೆ ವಾಡಿಕೆ ಮಳೆ 38 ಮಿಮೀ ಇದ್ದು, ವಾಸ್ತವವಾಗಿ 99 ಮಿಮೀ ಮಳೆಯಾಗಿದೆ. ಕಳೆದ ಏಳು ದಿನಗಳಲ್ಲಿ ವಾಡಿಕೆ ಮಳೆ 17 ಮಿಮೀ ಇದ್ದು, 62 ಮಿಮೀ ಮಳೆಯಾಗಿದೆ. ಈ ಮಳೆಯಿಂದ ಬಿತ್ತನೆಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಶಾಸಕ ರಾಘವೇಂದ್ರ ಮಾತನಾಡಿ, ನಿರಂತರವಾಗಿ ಸುರಿದ ಮಳೆಯಿಂದ ಹಾನಿಗೊಳಗಾದ ಕೊಪ್ಪಳ ನಗರದ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ಪರಿಶೀಲಿಸಲಾಗುತ್ತಿದೆ. ಮಳೆಯಿಂದ ಆದಂತಹ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆ ನಗರದ ಎಲ್ಲ ಚರಂಡಿಗಳ ಸ್ವಚ್ಛತೆಗೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮೂಲ ನಕ್ಷೆಯ ಪ್ರಕಾರ ನಗರದಲ್ಲಿ ರಾಜಕಾಲುವೆ ನಿರ್ಮಾಣ ಮಾಡಲಾಗುತ್ತದೆ. ರಾಜಕಾಲುವೆಗಳನ್ನು ಯಾರೇ ಒತ್ತುವರಿ ಮಾಡಿದರು ಅವುಗಳನ್ನು ಕೂಡಲೇ ತೆರವುಗೊಳಿಸಲಾಗುವುದು. ಸ್ವಾಮಿ ವಿವೇಕಾನಂದ ಅಂಡರ್ ಪಾಸ್ ಗೆ ಅನುದಾನ ಬಂದಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭ ಮುಖಂಡರಾದ ಸಂಗಣ್ಣ ಕರಡಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಕ್ಬರಪಾಶಾ ಪಲ್ಟನ್, ನಗರಸಭೆ ಸದಸ್ಯರಾದ ಅಮಜದ್ ಪಟೇಲ್, ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ, ಕೊಪ್ಪಳ ತಹಸೀಲ್ದಾರ ವಿಠ್ಠಲ ಚೌಗಲಾ ಸೇರಿದಂತೆ ನಗರಸಭೆ ಸದಸ್ಯರು, ಇತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.ಅಳಲು ತೋಡಿಕೊಂಡ ಜನರು:

ಶಾಸಕ ಮತ್ತು ಸಂಸದರು ಮಳೆಯಿಂದಾದ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿದ್ದ ವೇಳೆಯಲ್ಲಿ ಜನರು ತಮ್ಮ ಅಳಲು ತೋಡಿಕೊಂಡರು. ಮಳೆಯಿಂದಾಗಿ ಆಗುವ ಹಾನಿಯನ್ನು ಪ್ರತಿ ವರ್ಷವೂ ನೋಡಿಕೊಂಡು ಹೋಗುತ್ತಾರೆ. ಆದರೆ, ಪರಿಹಾರವನ್ನು ಕಂಡುಕೊಳ್ಳುವುದೇ ಇಲ್ಲ. ಈ ವರ್ಷ ಅತೀಯಾಗಿ ಮಳೆಯಾಗಿದ್ದರಿಂದ ನಾವು ಭಯದಲ್ಲಿ ಕಾಲಕಳೆಯುವಂತೆ ಆಗಿದೆ ಎಂದರು.ರಾಜಕಾಲುವೆ ಅತಿಕ್ರಮಣ ತೆರವು ಶುರು:

ನಗರದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಸಂಸದ ರಾಜಶೇಖರ ಹಿಟ್ನಾಳ ಮಳೆಯಿಂದಾದ ಹಾನಿ ಸ್ಥಳಕ್ಕೆ ಭೇಟಿ ನೀಡಿ ತೆರಳುತ್ತಿದ್ದಂತೆ ತೆರವು ಕಾರ್ಯಾಚರಣೆ ಪ್ರಾರಂಭಿಸಲಾಯಿತು.

ನಗರದ ಗಣೇಶನಗರದ ಬಳಿಕ ರಾಜಕಾಲುವೆ ಅತಿಕ್ರಮಣವನ್ನು ತೆರವು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ನೀರು ಸಾಗುವುದಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದ್ದ ಎರಡು ಮನೆಗಳ ಕಾಂಪೌಂಡ್ ಗೋಡೆಗಳನ್ನು ಸಹ ಒಡೆದು ಹಾಕಲಾಯಿತು. ಆದರೆ, ನೀರು ಸಾಗುವುದಕ್ಕೆ ಕಿರಿದಾದ ಕಾಲುವೆ ಇದ್ದು, ಇದನ್ನು ಅಗಲೀಕರಣ ಮಾಡುವ ಕಾರ್ಯ ಇನ್ನಷ್ಟೇ ಆಗಬೇಕಾಗಿದೆ.

ವೆಂಕಟೇಶ್ವರ ದೇವಸ್ಥಾನದ ಬಳಿ ದೇವರಾಜ ಎಂಬವರ ನಿರ್ಮಾಣ ಹಂತದಲ್ಲಿರುವ ಮನೆ ಒಡೆದು ಹಾಕುವಂತೆ ಶಾಸಕ ರಾಘವೇಂದ್ರ ಹಿಟ್ನಾಳ ಸೂಚಿಸಿದರು. ಇದಕ್ಕೆ ಮನೆಯ ಮಾಲೀಕ ದೇವರಾಜ ಆಕ್ಷೇಪ ವ್ಯಕ್ತಪಡಿಸಿದರು. ನಾವು ನಿಯಮಾನುಸಾರ ನಿರ್ಮಾಣ ಮಾಡಿಕೊಂಡಿದ್ದು, ತೆರವು ಮಾಡದಂತೆ ಮನವಿ ಮಾಡಿದರು. ಆದರೂ ಸಹ ಅಧಿಕಾರಿಗಳು ನಂತರ ತೆರವು ಮಾಡುವುದಕ್ಕೆ ಮುಂದಾದಾಗ ಒಂದಷ್ಟು ವಾಗ್ವಾದವಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ