ತೀರ್ಥಹಳ್ಳಿ: ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಪಟಗಾರು ಕಡಸೂರು ಶಾಲೆಯ ಶಿಕ್ಷಕಿಯಾಗಿ ಮಾದರಿ ಶಾಲೆಯನ್ನಾಗಿ ರೂಪಿಸಿದ ಶಿಕ್ಷಕಿ ರತ್ನಕುಮಾರಿಯವರು ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕ್ಷೇತ್ರದ ಗೌರವವನ್ನು ಹೆಚ್ಚಿಸಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಈ ಸಾಧನೆಯ ಹಿಂದೆ ರತ್ನಕುಮಾರಿಯವರ ಅಪಾರ ಕಾಳಜಿ ಶ್ರದ್ಧೆ ಶ್ರಮ ಇರುವುದನ್ನು ನಾನು ಕಳೆದ ಎಂಟು ವರ್ಷಗಳಿಂದ ಗಮನಿಸುತ್ತಿದ್ದೇನೆ, ರತ್ನಕುಮಾರಿಯವರ ಅಪೇಕ್ಷೆಯಂತೆ ಕಳೆದ ಎಂಟು ವರ್ಷಗಳಲ್ಲಿ ಸದರಿ ಶಾಲೆಗೆ ಮೂರು ನೂತನ ಕೊಠಡಿಗಳನ್ನ ಮಂಜೂರು ಮಾಡಿಸಿ ಕೊಟ್ಟಿರುವುದಲ್ಲದೆ ಬೇರೆ ಬೇರೆ ಅಗತ್ಯತೆಗಳಿಗೆ ಅನುದಾನ ಒದಗಿಸುವ ಕಾರ್ಯವನ್ನು ಮಾಡಿದ್ದೇನೆ, ಆ ಶಾಲೆಯ ಅವರು ಕರೆದಂತ ಎಲ್ಲಾ ಕಾರ್ಯಕ್ರಮಗಳಿಗೆ ತಪ್ಪದೇ ಭಾಗವಹಿಸಿ ಶಾಲೆಯ ಶ್ರೇಯೋಭಿವೃದ್ಧಿಯಲ್ಲಿ ಹಾಗೂ ಗ್ರಾಮಸ್ಥರ ಜೊತೆ ಭಾಗಿಯಾದ ಸಂತೋಷ ನನಗೂ ಕೂಡ ಇದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯಕ್ಕೆ ಒಬ್ಬರಾಗಿ ದೇಶದಲ್ಲಿ 48 ಜನ ಉತ್ತಮ ಶಿಕ್ಷಕರಲ್ಲಿ ಒಬ್ಬರಾಗಿ ಅಪರೂಪದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಕ್ಕೆ ಶ್ರೀಮತಿ ರತ್ನ ಕುಮಾರಿಯವರು ಆಯ್ಕೆಯಾಗಿದ್ದು, ಸಂತಸ ತಂದಿದೆ, ರಾಜ್ಯದಿಂದ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯಲ್ಲಿ ತೀರ್ಥಹಳ್ಳಿ ಸೇರಿರುವುದು ಕ್ಷೇತ್ರದ ಶೈಕ್ಷಣಿಕ ಸಾಧನೆಗೆ ಮತ್ತೊಂದು ಗರಿ ಸೇರಿದಂತಾಗಿದೆ ಎಂದು ಸಂತಸಪಟ್ಟರು.