ಬಿಜೆಪಿಯವರು ಕೃಷ್ಣಾ ನೀರು ತಂದಿದ್ದೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ : ಸಂಗಮೇಶ ಗುತ್ತಿ

KannadaprabhaNewsNetwork | Updated : Jan 07 2024, 04:03 PM IST

ಸಾರಾಂಶ

ಶಾಸಕ ಬಸವರಾಜ ರಾಯರಡ್ಡಿ ಈ ಹಿಂದೆ ಉನ್ನತ ಶಿಕ್ಷಣಮಂತ್ರಿ ಇದ್ದಾಗ ೨೦೧೩ರಲ್ಲೇ ಕೃಷ್ಣಾ ನದಿ ನೀರನ್ನು ತಾಲೂಕಿಗೆ ಮಂಜೂರಾತಿ ಕೊಡಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ಹೇಳಿದರು.

ಯಲಬುರ್ಗಾ: ಶಾಸಕ ಬಸವರಾಜ ರಾಯರಡ್ಡಿ ಈ ಹಿಂದೆ ಉನ್ನತ ಶಿಕ್ಷಣಮಂತ್ರಿ ಇದ್ದಾಗ ೨೦೧೩ರಲ್ಲೇ ಕೃಷ್ಣಾ ನದಿ ನೀರನ್ನು ತಾಲೂಕಿಗೆ ಮಂಜೂರಾತಿ ಕೊಡಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆದರೆ ಬಿಜೆಪಿಯವರು ಕೃಷ್ಣಾ ನೀರು ನಾವು ತಂದಿದ್ದೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇತ್ತೀಚಿಗೆ ತಾಲೂಕಿನ ತರಲಕಟ್ಟಿ ನಿಲೋಗಲ್ ಕೆರೆಗೆ ಮಾಜಿ ಸಚಿವರು ಬಾಗಿನ ಅರ್ಪಿಸಿರುವುದು ಸ್ವಾಗತ ಮಾಡುತ್ತೇವೆ. ಆದರೆ ಹಾಲಪ್ಪ ಆಚಾರ್ ಕೆರೆ ತುಂಬಿಸುವ ಯೋಜನೆಗೆ ಕಾಂಗ್ರೆಸ್ ಸರ್ಕಾರ ಹಾಗೂ ಶಾಸಕ ರಾಯರಡ್ಡಿ ಕೊಡುಗೆ ಇಲ್ಲ ಎಂದು ಆರೋಪ ಮಾಡಿರುವುದು ಸರಿಯಲ್ಲ. ಈ ಯೋಜನೆ ಅನುಷ್ಠಾನಕ್ಕಾಗಿ ಬಸವರಾಜ ರಾಯರಡ್ಡಿ ಸಾಕಷ್ಟು ಪರಿಶ್ರಮ ವಹಿಸಿದ್ದರಿಂದ ಕ್ಷೇತ್ರದ ಕೆರೆಗಳಿಗೆ ಕೃಷ್ಣಾ ನದಿ ನೀರು ಹರಿಯುತ್ತಿದೆ. 

ಇದು ರಾಯರಡ್ಡಿ ಯೋಜನೆಯಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬ್ಲಾಕ್ ಕಾಂಗ್ರೆಸ್ ಪಕ್ಷ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿದರು.

ಪೌರ ಸನ್ಮಾನ: ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾಗಿ ನೇಮಕಕೊಂಡ ಶಾಸಕ ಬಸವರಾಜ ರಾಯರಡ್ಡಿ ಜ.೬ರಂದು ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. 

ಅಂದು ಶಾಸಕರು ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಕಲ್ಲಭಾವಿ ಮತ್ತು ತರಲಕಟ್ಟಿ ನಿಲೋಗಲ್ ಗ್ರಾಮದ ಕೆರೆಗಳಿಗೆ ಬಾಗಿನ ಅರ್ಪಿಸಲಿದ್ದಾರೆ. ಸಂಜೆ ಯಲಬುರ್ಗಾ-ಕುಕನೂರ ಪಟ್ಟಣದಲ್ಲಿ ಪಪಂನಿಂದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸುಧೀರ್ ಕೊರ್ಲಳ್ಳಿ, ಡಾ.ಶಿವನಗೌಡ ದಾನರೆಡ್ಡಿ, ಮಲ್ಲಿಕಾರ್ಜುನ ಜಕ್ಕಲಿ, ರಿಯಾಜ್ ಖಾಜಿ, ಹನುಮಂತ ಭಜಂತ್ರಿ, ಚಂದ್ರು ದೇಸಾಯಿ, ಹಂಪಯ್ಯ ಹಿರೇಮಠ ಇದ್ದರು.

Share this article