ನಗರ, ಗ್ರಾಮಗಳ ದೇಗುಲಗಳಲ್ಲಿ ವಿಶೇಷ ಪೂಜೆ । ಮಕ್ಕಳಿಗೆ ಸಿಹಿ ವಿತರಣೆ
ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅವರ ಜನ್ಮದಿನವನ್ನು ಶನಿವಾರ ತಾಲೂಕಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ದೇವಸ್ಥಾನಗಳಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಪಟ್ಟಣದ ಬೆಳಲಮಕ್ಕಿ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ನಡುವೆ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮ ಪತ್ನಿ ಜೊತೆ ಕೇಕ್ ಕತ್ತರಿಸಿದರು. ನೂರಾರು ಮಕ್ಕಳು ಶಾಸಕರಿಗೆ ಶುಭಾಶಯ ಕೋರಿದರು. ಶ್ರೀ ಮಾರಿಕಾಂಬಾ ದೇವಸ್ಥಾನ ಮತ್ತು ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಬೇಳೂರು ಅವರ ಹುಟ್ಟುಹಬ್ಬದ ಅಂಗವಾಗಿ ಬ್ಲಾಕ್ ಕಾಂಗ್ರೇಸ್ ಹಾಗೂ ಗೋಪಾಲಕೃಷ್ಣ ಬೇಳೂರು ಅಭಿಮಾನಿ ಬಳಗದ ವತಿಯಿಂದ ತಾಯಿ ಮಗು ಆಸ್ಪತ್ರೆ ಮತ್ತು ಉಪ ವಿಭಾಗೀಯ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ ಮಾತನಾಡಿ, ಕ್ಷೇತ್ರದ ಅಭಿವೃದ್ದಿಯಲ್ಲಿ ಶಾಸಕರು ಉತ್ತಮವಾಗಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಜನರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರ ಸಾಮಾಜಿಕ ಕಳಕಳಿ ಶೇಷವಾಗಿದೆ. ಅವರ ಜನ್ಮದಿನವನ್ನು ಇಡೀ ಕ್ಷೇತ್ರವೇ ಸಂಭ್ರಮದಿಂದ ಆಚರಿಸುತ್ತಿದೆ ಎಂದು ಹೇಳಿದರು.
ಚೇತನರಾಜ್ ಕಣ್ಣೂರು, ಸೋಮಶೇಖರ ಲ್ಯಾವಿಗೆರೆ, ಬಿ.ಆರ್.ಜಯಂತ್, ಕೆ.ಹೊಳೆಯಪ್ಪ, ತಾರಾಮೂರ್ತಿ, ಅಶೋಕ ಬೇಳೂರು, ಗಣಪತಿ ಮಂಡಗಳಲೆ, ಮಧುಮಾಲತಿ, ಉಷಾ, ಪ್ರಭಾವತಿ ಚಂದ್ರಕಾಂತ್, ಪಾರ್ವತಮ್ಮ, ರಮೇಶ್ ಚಂದ್ರಗುತ್ತಿ, ಸದ್ದಾಂ, ಹಮೀದ್, ಷಣ್ಮುಖ, ಚಂದ್ರಪ್ಪ ಎಲ್., ನವೀನ್, ರವಿ ಲಿಂಗನಮಕ್ಕಿ, ತುಕಾರಾಮ, ಚಿನ್ಮಯ್ ಇತರರು ಹಾಜರಿದ್ದರು.