ಶಾಸಕ ಬೇಳೂರು, ಸಚಿವ ಮಧು ಅವರಿಂದ ಜನರಿಗೆ ದ್ರೋಹ: ಮಲ್ಲಿಕಾರ್ಜುನ ಹಕ್ರೆ

KannadaprabhaNewsNetwork |  
Published : Feb 18, 2026, 01:15 AM IST
ಮಲ್ಲಿಕಾರ್ಜುನ ಹಕ್ರೆ | Kannada Prabha

ಸಾರಾಂಶ

ತಾಲೂಕಿನ ಎಡಮನೆ ಗ್ರಾಮದ ೧೬ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಮುಂದಾದ ಪ್ರಕರಣದಲ್ಲಿ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಸಚಿವ ಮಧು ಬಂಗಾರಪ್ಪ ರೈತರಿಗೆ ದ್ರೋಹ ಬಗೆದಿದ್ದಾರೆ. ತೆರವುಗೊಳಿಸುವ ವಿಷಯ ಗೊತ್ತಿದ್ದರೂ ಅದನ್ನು ತಡೆಯಲು, ರೈತರಿಗೆ ರಕ್ಷಣೆ ನೀಡುವಲ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದ ಇಬ್ಬರು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ

ತಾಲೂಕಿನ ಎಡಮನೆ ಗ್ರಾಮದ ೧೬ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಮುಂದಾದ ಪ್ರಕರಣದಲ್ಲಿ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಸಚಿವ ಮಧು ಬಂಗಾರಪ್ಪ ರೈತರಿಗೆ ದ್ರೋಹ ಬಗೆದಿದ್ದಾರೆ. ತೆರವುಗೊಳಿಸುವ ವಿಷಯ ಗೊತ್ತಿದ್ದರೂ ಅದನ್ನು ತಡೆಯಲು, ರೈತರಿಗೆ ರಕ್ಷಣೆ ನೀಡುವಲ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದ ಇಬ್ಬರು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಫೆ. ೬ರಂದು ಗ್ರಾಮದ ೧೬ ರೈತ ಕುಟುಂಬಗಳಿಗೆ ಜಾಗ ಬಿಟ್ಟು ತೆರಳುವಂತೆ ಅರಣ್ಯ ಇಲಾಖೆ ನೋಟಿಸ್ ನೀಡಿತ್ತು. ಅಂದು ಬೆಳಗ್ಗೆ ೧೧ಗಂಟೆಯ ಸುಮಾರಿಗೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ಹೋಗಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿತ್ತು. ಈ ವಿಚಾರ ಶಾಸಕರಿಗೆ ಮೊದಲೇ ತಿಳಿದಿತ್ತು. ಶಾಸಕರ ಬೆಂಬಲಿಗ ಇಬ್ಬರು ಕಾರ್ಯಕರ್ತರು ಸ್ಥಳದಲ್ಲಿದ್ದು, ಅಲ್ಲಿನ ವಾಸಿಗಳಿಗೆ ಜಾಗ ಬಿಟ್ಟು ತೆರಳುವಂತೆ ಸೂಚಿಸುತ್ತಿದ್ದರು. ಆದರೂ ಶಾಸಕರು ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ಶಾಸಕರ ಗಮನಕ್ಕೆ ಬಾರದೆ ಅಧಿಕಾರಿಗಳು ಗ್ರಾಮವಾಸಿಗಳನ್ನು ಒಕ್ಕಲೆಬ್ಬಿಸುವಂತಹ ಸೂಕ್ಷ್ಮ ವಿಚಾರಕ್ಕೆ ಮುಂದಾಗುತ್ತಾರೆಯೇ ಎಂದು ಪ್ರಶ್ನಿಸಿದರು.

ಫೆ೫ ರಂದು ವಿಷಯ ತಿಳಿದ ಆ ಭಾಗದ ಬಿಜೆಪಿ ಪ್ರಮುಖರಾದ ಬಿ.ಸಿ.ಲಕ್ಷ್ಮೀನಾರಾಯಣ ಭಟ್, ಲೋಕಾಕ್ಷಿ, ಪಾರ್ಶ್ವನಾಥ ಜೈನ್ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ದಾಖಲೆ ಸಂಗ್ರಹಿಸಿದ್ದಾರೆ. ಫೆ.೬ರಂದು ಒಕ್ಕಲೆಬ್ಬಿಸಲು ಬಂದ ಅಧಿಕಾರಿಗಳಿಗೆ ಈ ತಂಡವು ಅಗತ್ಯ ದಾಖಲೆ ತೋರಿಸಿದೆ. ಒಂದೊಮ್ಮೆ ಕುಟುಂಬಗಳನ್ನು ಒಕ್ಕಲೆಬ್ಬಿಸಿದರೆ ಅರಣ್ಯಹಕ್ಕು ಕಾಯ್ದೆಯಡಿ ನಿಮ್ಮ ಮೇಲೆ ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ ಮೇಲೆ ಸ್ಥಳದಿಂದ ಹೋಗಿದ್ದಾರೆ ಎಂದರು.

ಎಡಮನೆ ಗ್ರಾಮಸ್ಥರನ್ನು ರಕ್ಷಣೆ ಮಾಡುವಲ್ಲಿ ಬಿಜೆಪಿ ಪ್ರಮುಖಪಾತ್ರ ವಹಿಸಿದೆ. ಶಾಸಕರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ರೈತ ವಿರೋಧಿ ನೀತಿ ಈ ಪ್ರಕರಣದಲ್ಲಿ ಜಗಜ್ಜಾಹೀರವಾಗಿದೆ. ವಿಧಾನಸಭೆ ಚುನಾವಣೆ ಮುನ್ನ ಪಾದಯಾತ್ರೆ ನಡೆಸಿ ಶಿವಮೊಗ್ಗದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಲೆನಾಡಿನ ರೈತರಿಗೆ ನೀಡಿದ ಮಾತು ಹುಸಿಯಾಗಿದೆ. ಎಡಮನೆ ಗ್ರಾಮಸ್ಥರನ್ನು ಸೇರಿದಂತೆ ತಾಲೂಕಿನ ರೈತರನ್ನು ಒಕ್ಕಲೆಬ್ಬಿಸಲು ಮುಂದಾದರೆ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.ಸದನದಲ್ಲಿ ಮಾತನಾಡದ ಶಾಸಕರು:

ಸದನದಲ್ಲಿ ಜನವಿರೋಧಿಯಾಗಿರುವ ಶಾರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪರವಾಗಿ ಗಟ್ಟಿಧ್ವನಿಯಲ್ಲಿ ಮಾತನಾಡುವ ಶಾಸಕ ಬೇಳೂರು, ರೈತರನ್ನು ಒಕ್ಕಲೆಬ್ಬಿಸುವ ವಿಚಾರದ ಬಗ್ಗೆ ಚಕಾರವೆತ್ತಿಲ್ಲ. ರಾಜ್ಯಪಾಲರ ಭಾಷಣದ ಮೇಲೆ ಸುಮಾರು ಎರಡು ಗಂಟೆ ಮಾತನಾಡಲು ಶಾಸಕರಿಗೆ ಅವಕಾಶ ಸಿಕ್ಕಿತ್ತು. ಆದರೆ ಅವರು ಕೇವಲ ಐದು ನಿಮಿಷ ಮಾತನಾಡಿದ್ದಾರೆ. ಅದು ಕ್ಷೇತ್ರದ ಜ್ವಲಂತ ಸಮಸ್ಯೆ ಬಗ್ಗೆ ಮಾತನಾಡಿಲ್ಲ ಎಂದು ಹಕ್ರೆ ಟೀಕಿಸಿದರು

ಗೋಷ್ಠಿಯಲ್ಲಿ ಬಿ.ಸಿ.ಲಕ್ಷ್ಮೀನಾರಾಯಣ ಭಟ್, ನಾಗರಾಜ್ ಬೊಬ್ಬಿಗೆ, ವಿರೂಪಾಕ್ಷ, ರಮೇಶ್ ಎಚ್.ಎಸ್., ರಾಜು ಜೈನ್ ಹಾಜರಿದ್ದರು.

ರೈತರನ್ನು ಒಕ್ಕಲೆಬ್ಬಿಸಲು ಟಾರ್ಗೆಟ್ ನೀಡಿದೆ: ರಾಜ್ಯ ಸರ್ಕಾರ ವರ್ಷಕ್ಕೆ ಇಂತಿಷ್ಟು ರೈತರನ್ನು ಒಕ್ಕಲೆಬ್ಬಿಸಿ ಅರಣ್ಯವನ್ನು ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ಟಾರ್ಗೆಟ್ ನೀಡಿದೆ. ಇದರ ಭಾಗವಾಗಿ ರಾಜ್ಯದಾದ್ಯಂತ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಈ ವಿಷಯ ಸ್ಥಳೀಯ ಜನಪ್ರತಿನಿಧಿಗಳಿಗೆ ಗೊತ್ತಿರುತ್ತದೆ. ಪಾಪದ ಜನರು ವಾಸಿಸುತ್ತಿರುವ ಗ್ರಾಮಗಳನ್ನು ಹುಡುಕಿ ಅಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಡಮನೆ ಗ್ರಾಮವಾಸಿಗಳು ಸಹ ಪಾಪದ ಜನರು. ಒಂದೆರಡು ಕುಟುಂಬಗಳನ್ನು ಬಿಟ್ಟು ಉಳಿದವರು ವ್ಯವಸ್ಥೆಯ ವಿರುದ್ಧ ಮಾತನಾಡಲಾರರು. ಹಾಗಾಗಿ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಹಕ್ರೆ ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವೆ: ಬಿ.ವೈ.ವಿಜಯೇಂದ್ರ
ಸುಬ್ಬಾರೆಡ್ಡಿ ಅನರ್ಹ: ಮರು ಚುನಾವಣೆಗೆ ಸಿಪಿಐಎಂ ಒತ್ತಾಯ