ಅಕಾಲಿಕ ಮಳೆ: ಸಾಗರ ತಾಲೂಕಿನಲ್ಲಿ 5 ಕೋಟಿಗೂ ಅಧಿಕ ನಷ್ಟ

KannadaprabhaNewsNetwork | Published : Mar 28, 2025 12:36 AM

ಸಾರಾಂಶ

MLA Gopalakrishna Belur visits houses damaged by wind and

-ಯಡೇಹಳ್ಳಿಯಲ್ಲಿ ಗಾಳಿ ಮಳೆಯಿಂದ ಹಾನಿಯಾದ ಮನೆಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ

----

ಕನ್ನಡಪ್ರಭ ವಾರ್ತೆ ಆನಂದಪುರ

ಅಕಾಲಿಕ ಗಾಳಿ ಮಳೆಯಿಂದ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 5 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಬೀಸಿದ ಗಾಳಿ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ನಂತರ ಮಾತನಾಡಿ, ಬಿರುಗಾಳಿ ಮಳೆಯಿಂದಾಗಿ ಸಾಗರ ವಿಧಾನಸಭಾ ಕ್ಷೇತ್ರದಲ್ಲಿನ ಆನಂದಪುರ, ಹೊಸನಗರ, ಸಾಗರ ಸೇರಿದಂತೆ ಅನೇಕ ಭಾಗದಲ್ಲಿ ಮನೆಗಳ ಮೇಲೆ ಮರ ಬಿದ್ದು ಅನೇಕ ಮನೆಗಳು ಜಖಂಗೊಂಡಿದ್ದು, ಕೆಲವು ಮನೆಗಳ ಮೇಲ್ಚಾವಣಿ ಹಾರಿಹೋಗಿವೆ. ಅಲ್ಲದೆ ಬಹುತೇಕ ವಿದ್ಯುತ್ ಕಂಬಗಳು ಧರೆಗೆ ಉರುಳಿ ನಷ್ಟ ಸಂಭವಿಸಿದ್ದು, ಒಟ್ಟಾರೆಯಾಗಿ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಅಕಾಲಿಕ ಬಿರುಗಾಳಿ ಮಳೆಯಿಂದ 5 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿಸಿದರು.

ಬಿರುಗಾಳಿ ಮಳೆಯಿಂದ ಮನೆಗಳಿಗೆ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ಮುರಿದು ಹೋಗಿದ್ದು, ಮೆಸ್ಕಾಂ ಇಲಾಖೆಯವರು ಈಗಾಗಲೇ ಕಾರ್ಯ ಪ್ರವೃತರಾಗಿ ಗ್ರಾಮಾಂತರ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಮುಂದಾಗಿದ್ದಾರೆ. ಈ ಬಾರಿ ಮಳೆಯಿಂದ ಅನಾಹುತಗೊಂಡ ಮನೆಗಳಿಗೆ ಪರಿಹಾರವನ್ನು ಸರ್ಕಾರ ತಕ್ಷಣವೇ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಬುಧವಾರ ಬೀಸಿದ ಬಿರುಗಾಳಿ ಮಳೆಯಿಂದ ಹಾನಿಗೆ ಒಳಗಾದ ಯಡೇಹಳ್ಳಿಯ ನಿವಾಸಿಗಳಾದ ಕಲಾವತಿ ಲಲಿತಮ್ಮ, ಗಣೇಶ್, ಸೋಮಶೇಖರ್, ಪದ್ದಮ್ಮ, ಗಿರೀಶ್ ಲವ, ಎಂಬುವರ ಮನೆಗಳಿಗೆ ಭೇಟಿ ನೀಡಿ ನೊಂದವರಿಗೆ ಪಕ್ಷಾತೀತ ಜಾತ್ಯಾತೀತವಾಗಿ ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದೇನೆ ಎಂದು ತಿಳಿಸಿದರು.

ಯಡೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಜ್ಯೋತಿ, ಉಪಾಧ್ಯಕ್ಷ ಗಣಪತಿ ಇರುವಕ್ಕಿ, ಪಕ್ಷದ ಮುಖಂಡರಾದ ಎನ್. ಉಮೇಶ್, ರಮಾನಂದ್ ಸಾಗರ್, ರೆಹಮತುಲ್ಲಾ, ಅಮೀರ್ ಸಾಬ್, ನಜರುಲ್ಲಾ ಖಾನ್, ಬಸವರಾಜ್, ಲಿಂಗರಾಜ್, ರವಿಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.---

ಫೋಟೋ: 27 ಎ, ಎನ್, ಪಿ 2 ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಬೀಸಿದ ಬಿರುಗಾಳಿ ಮಳೆಯಿಂದ ಅನಾಹುತಗೊಂಡ ಮನೆಗಳಿಗೆ ಭೇಟಿ ನೀಡಿ ವೈಯಕ್ತಿಕ ಧನ ಸಹಾಯ ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು.

ಪೋಟೋ: 27ಎಎನ್‌ಪಿ01

ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಮದಲ್ಲಿ ಗಾಳಿ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ಗುರುವಾರ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share this article